Monday, April 27, 2009

ಗೋಕುಲಾಷ್ಟಮಿ - ಒಂದು ಮರು ಓದು

ಜೀನ್ ಪಾಲ್ ಸಾತ್ರೆಯ "ನಿರಂತರವಾಗಿ ವಿಕಾಸಗೊಳ್ಳುತ್ತಲೇ ಇರುವ ದೇವರ ಕಲ್ಪನೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. - ಪುತಿನ.

"ಗೋಕುಲಾಷ್ಟಮಿ" ಪುತಿನರ ಮತ್ತು ಕನ್ನಡದ ಉತ್ತಮ ಪ್ರಬಂಧಗಳಲ್ಲೊಂದು. ಓದಿನ ಮತ್ತು ಬದುಕಿನ ಬೇರೆ ಬೇರೆ ಸನ್ನಿವೇಶಗಳಲ್ಲಿ ಈ ಪ್ರಬಂಧವನ್ನು ಮತ್ತೆ ಮತ್ತೆ ಓದುತ್ತಲೇ ಬಂದಿರುವ ನನಗೆ, ಪ್ರಬಂಧದ ಇತ್ತೀಚಿನ ಓದು ನಮ್ಮ ಕಾಲಮಾನದ ಮುಖ್ಯ ಸಾಂಸ್ಕೃತಿಕ ಪ್ರಶ್ನೆಗಳನ್ನು ಬೇರೊಂದು ರೀತಿಯಲ್ಲು ನೋಡಬಹುದಲ್ಲವೇ ಎಂಬ ಪ್ರಚೋದನೆಯನ್ನು, ನಿರಾಳವನ್ನು ನೀಡಿತು. ಮೊದಲಿಗೆ ಪ್ರಬಂಧದ ಸ್ವರೂಪದ ಬಗ್ಗೆ.

ಈ ಪ್ರಬಂಧದ ಚೌಕಟ್ಟನ್ನು ಇಂತಹದೇ ಎಂದು ಗುರುತಿಸಿ ಕಟ್ಟು ಹಾಕುವುದು ಕಷ್ಟ. ವರ್ಣನಾತ್ಮಕ, ಲಹರಿ, ಚಿಂತನಶೀಲ, ಆಧ್ಯಾತ್ಮಿಕ - ಇಂತಹ ಎಲ್ಲ ಗುಣಸ್ವಭಾವಗಳನ್ನು ಪ್ರಬಂಧ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಈ ಗುಣವಿಶೇಷಗಳು ಒಂದರೊಡನೊಂದು ಪ್ರಬಂಧದ ಸಹಜ ಓಘದಲ್ಲಿ ನಿರಾಯಾಸವಾಗಿ ಬೆರೆಯುತ್ತ ಬರಹದ ಧ್ವನಿಶಕ್ತಿಯನ್ನು ಹೆಚ್ಚಿಸಿವೆ. ಹಾಗಾಗಿ ಈ ಪ್ರಬಂಧ ಇಂತದೇ ಜಾತಿಯದು ಎಂದು ವರ್ಗೀಕರಿಸುವುದು ಕಷ್ಟ ಮತ್ತು ತಪ್ಪು.

ಎಲ್ಲ ಒಳ್ಳೆಯ ಪ್ರಬಂಧಗಳಲ್ಲು ಇರುವಂತೆ ಇಲ್ಲು ಒಂದು ಪ್ರಸಂಗ ಯಾ ವಿದ್ಯಮಾನವಿದೆ, ಸ್ವಾನುಭಾವವಿದೆ, ಕೀಟಲೆಯಿದೆ, ಚಿಂತನೆಯಿದೆ, ಮೀರುವಿಕೆಯಿದೆ. ಇದೆಲ್ಲವೂ ಮನೆ ಮತ್ತು ಕುಟುಂಬ ವಾತಾವರಣದಲ್ಲಿ ದಿನನಿತ್ಯದ ಆವರಣದಲ್ಲಿ ನಡೆಯುವುದರಿಂದ ಪ್ರಬಂಧವು ನಿರೂಪಿಸುವ ಅನುಭವ-ಚಿಂತನೆ-ಕಾಣ್ಕೆ ನಮ್ಮಂತಹ ಸಾಧಾರಣ ಗೃಹಸ್ಥರದು ಕೂಡ ಎಂದೆನಿಸಿಬಿಡುತ್ತದೆ.

ಗೋಕುಲಾಷ್ಟಮಿಯ ಆಚರಣೆ ಶ್ರೀವೈಷ್ಣವ ಕುಟುಂಬದ ವಾತಾವರಣದಲ್ಲಿ ಹೇಗೆ ಜರುಗಿತು, ಜರುಗುತ್ತಿದೆ ಮತ್ತು ಜರುಗುತ್ತಲೇ ಇರುತ್ತದೆ ಎಂಬುದು ನಿರೂಪಣೆಯ ತಿರುಳು. ಶ್ರೀಕೃಷ್ಣ ಒಂದು ಭಾವವಾಗಿ ಹೇಗೆ ಹುಟ್ಟುತ್ತಾನೆ ಮತ್ತು ಏಕೆ ಹುಟ್ಟಬೇಕು ಎನ್ನುವುದು ನಿರೂಪಣೆಯ ಹೃದಯ.
ನನ್ನ ಓದಿಗೆ ಭೂಮಿಕೆಯಾಗಿ ಪುತಿನರ ಕೆಲವು ಮಾತುಗಳನ್ನು ಉಲ್ಲೇಖಿಸುತ್ತೇನೆ:

"ನಾನು ತಾತ್ವಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ಯಾವುದೋ ಒಂದು ವೈಯಕ್ತಿಕ ದೇವರೊಡನೆ ಅಥವಾ ಒಂದು ನಿರ್ದಿಷ್ಟ ಪರಂಪರೆಯೊಡನೆ ನನ್ನನ್ನು ಗುರುತಿಸಿಕೊಂಡಿಲ್ಲ. ನನಗೆ ಯಾವಾಗಲೂ ಒಬ್ಬ ಮುಕ್ತ ಮನುಷ್ಯನ ಪೂಜೆಯೇ ಮುಖ್ಯವೆನಿಸಿದೆ. (ನೋಡಿ: ಮಲೆ ದೇಗುಲ) ಒಬ್ಬ ವ್ಯಕ್ತಿ ಸಂಪೂರ್ಣ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಪೂಜೆಗೈಯಬೇಕು ಎಂದು ನನಗನ್ನಿಸುತ್ತದೆ.

ನಾನು ಪೂಜೆಯನ್ನೇನಾದರೂ ಮಾಡುವುದಾದರೆ ಅದು ನನ್ನದೇ ರೀತಿಯಲ್ಲಿ ಸ್ವಯಂ ಶುದ್ಧೀಕರಣಗೊಳ್ಳುವುದಕ್ಕೆ ಅಷ್ಟೆ. ನನ್ನನ್ನು ನಾನು ಶುದ್ಧಗೊಳಿಸಬೇಕೆಂಬ ತೀವ್ರವಾದ ಹಂಬಲ ನನಗೆ ಚಾಲನೆ ನೀಡುತ್ತದೆ. ನಾನು ಮಾಡುವ ಆಚರಣೆಗಳು ಆಳವಾದ ಸಾಂಕೇತಿಕತೆಯನ್ನು ಪಡೆದುಕೊಳ್ಳುತ್ತದೆ. ಆ ಆಚರಣೆಗಳು ಯಾವುದೇ ಸಾಂಪ್ರದಾಯಿಕ ಚೌಕಟ್ಟಿನಿಂದ ಬರುವುದಿಲ್ಲ. ನಾನವುಗಳಲ್ಲಿ ಅರ್ಥವನ್ನು ಹುಡುಕಿಕೊಳ್ಳುತ್ತೇನೆ." (ಶ್ರೀ ಎನ್.ಮನು ಚರ್ಕವರ್ತಿಯವರಿಗೆ ನೀಡಿದ ಸಂದರ್ಶನ, ಭೃಂಗಮಾರ್ಗ - ಪುಟ 450, ಸಂ.ಡಾಎಚ್.ಎಸ್.ರಾಘವೇಂದ್ರ ರಾವ್.)

ಈ ದೃಷ್ಟಿಕೋನದಿಂದಾಗಿಯೇ ಪ್ರಬಂಧದ ಸ್ವರೂಪ ಮತ್ತು ಅದು ಕಾಣಿಸುವ ಭಾವಲೋಕ ಎರಡೂ ಹೊಸ ಎತ್ತರಕ್ಕೆ ತಲುಪುತ್ತವೆ. ನಿಜವಾದ ಆಧ್ಯಾತ್ಮಿಕ ಹುಡುಕಾಟದಲ್ಲಿರುವ ಎಲ್ಲ ಸಂವೇದನಾಶೀಲರಂತೆ ಪುತಿನರು ಕೂಡ ಒಂದು ವೈಯಕ್ತಿಕ ಧರ್ಮ (Personal Religion)ದ ಹುಡುಕಾಟದಲ್ಲಿದ್ದಾರೆ. ಇಂತಹ ಸಂವೇದನಾಶೀಲರಿಗೆ ಸಾಂಸ್ಥಿಕ ಧರ್ಮ ಮತ್ತು ಅದರ ಚೌಕಟ್ಟು ಆಶಯಗಳಲ್ಲಿ ನಂಬಿಕೆಯಿರುವುದಿಲ್ಲ, ಉತ್ಸಾಹವಿರುವುದಿಲ್ಲ. ತಾನು ಹುಟ್ಟಿದ ಧರ್ಮ, ಜಾತಿ ಮತ್ತು ಹಿನ್ನೆಲೆಯ ಬಗ್ಗೆ ಸಂಕೋಚವಿರುವುದಿಲ್ಲ, ಮುಜುಗರವಿರುವುದಿಲ್ಲ. ಆದರೆ ಅದನ್ನು ವೈಭವೀಕರಿಸುವುದು ಇಲ್ಲ. ಬದಲಾಗಿ ವಿಮರ್ಶಾತ್ಮಕ ಧೋರಣೆ ಹೊಂದಿದ್ದು ಉಳಿದ ಧರ್ಮಗಳ, ವಿಚಾರಗಳ ಮೂಲತಿರುಳನ್ನು, ಸದಾಶಯಗಳನ್ನು ತಮ್ಮ ವಿಚಾರದ, ನಂಬಿಕೆಗಳ, ಆಚರಣೆಗಳ ಚೌಕಟ್ಟಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಮನೋಭಾವಕ್ಕೆ ಗಾಂಧಿ ನಮ್ಮ ಕಾಲದಲ್ಲಿ ಉತ್ತಮ ಉದಾಹರಣೆ. ಇದನ್ನೆಲ್ಲ ವಿವರಿಸಲು "ಆತ್ಮೀಕರಣ" ಎನ್ನುವ ಪದವನ್ನು ಪುತಿನ ಬಳಸುತ್ತಾರೆ.

ಈ ಮನೋಧರ್ಮದಿಂದಾಗಿ ಪ್ರಬಂಧದ ವಿವರಗಳು ಒಂದು ಶ್ರೀವೈಷ್ಣವ ಮನೆಯ ವಿವರಗಳಾಗಿದ್ದು ನಮಗೆ ಬೇರೊಂದು ಬೆಳಕಿನಲ್ಲಿ ಕಾಣುತ್ತದೆ. ವಿವರಗಳ ಸಾಂಕೇತಿಕತೆ, ಧ್ವನಿಶಕ್ತಿ ಮತ್ತು ಜೀವಂತಿಕೆಯ ಕಡೆ ನಾವು ಗಮನ ನೀಡುವಂತೆ ಒತ್ತಾಯಿಸುತ್ತವೆ. ಇದಕ್ಕಾಗಿ ಪುತಿನ ಪುರಾಣದ ಕೃಷ್ಣನ ಕಡೆಗೆ ಗಮನ ಕೊಟ್ಟಷ್ಟೇ, ಪ್ರತಿ ಮನೆಯಲ್ಲೂ ಇರುವ ಬಾಲಕೃಷ್ಣನ ಕುರಿತಂತೆ ಕೂಡ ನಮ್ಮ ಗಮನ ಸೆಳೆಯುತ್ತಾರೆ. ಪುರಾಣದ ಕೃಷ್ಣ, ಮನೆಯ ಮಗು ಬಾಲಕೃಷ್ಣ ಇಬ್ಬರೂ ಒಟ್ಟಿಗೇ ಇರುವ ಪ್ರಬಂಧದಲ್ಲಿ ಇವರಿಬ್ಬರು ಬೇರೆಬೇರೆಯಲ್ಲ ಎಂಬ ಸೂಚನೆಯೂ ಇದೆ. ಮನೆಯ ಮಗು ಬಾಲಕೃಷ್ಣ, ಪುರಾಣದ ಕೃಷ್ಣನನ್ನು ನಮ್ಮವನನ್ನಾಗಿಸುತ್ತಾನೆ, ಸಜೀವಗೊಳಿಸುತ್ತಾನೆ. ಈ ಜೀವಂತಿಕೆಯನ್ನು ಓದುಗರಲ್ಲಿ ಉದ್ದೀಪುಸುವುದೇ ಮನೆಯೊಳಗೆ ಇರುವ ಹಬ್ಬದ ವಾತಾವರಣ, ಸಂಭ್ರಮ, ಸಲಿಗೆ, ಕಾಯುವಿಕೆ - ಇವೆಲ್ಲವೂ ಪ್ರಬಂಧದ ವಿವರಗಳಲ್ಲಿ ನಮಗೆ ಸಿಗುತ್ತದೆ.

ಈ ಪ್ರಬಂಧವನ್ನು ಓದಿದಾಗ ನನ್ನಲ್ಲಿ ಹುಟ್ಟುವ ಮುಖ್ಯ ಪ್ರಶ್ನೆಯೆಂದರೆ "ಪಾವಿತ್ರ್ಯವನ್ನು ನಾಶಮಾಡುವುದು" ಹಾಗೆ ನಾಶಮಾಡುವುದರ ಮೂಲಕವೇ ಆಧುನಿಕರಾಗುವುದು ಮತ್ತು ಜಾತ್ಯಾತೀತವಾಗುವುದು ನಾವೆಲ್ಲ ತಿಳಿದುಕೊಂಡಷ್ಟು ಅನಿವಾರ್ಯವೇ ಎಂಬುದು. ಪುತಿನ ಪ್ರಬಂಧವನ್ನು ಓದಿದಾಗ ಆಧುನಿಕರಾದ ನಮ್ಮ ಚಿಂತನ ಕ್ರಮ ಎಲ್ಲೋ ಹಳಿತಪ್ಪಿದೆಯನ್ನಿಸಿತು. "ಪಾವಿತ್ರ್ಯ" ಎನ್ನುವುದನ್ನು ನಾವು ಧಾರ್ಮಿಕ, ಮತೀಯ ಪರಿಭಾಷೆಯಲ್ಲೇ ಗ್ರಹಿಸಬೇಕಿಲ್ಲ. ಧರ್ಮ ಮತ್ತು ಮತೀಯ ಚಹರೆಗಳನ್ನು ಮೀರಿದ "ಪಾವಿತ್ರ್ಯ" ಎನ್ನುವುದು ಕೂಡ ಬದುಕಿನಲ್ಲಿರುತ್ತದೆ. ಇಂತಹ ಪಾವಿತ್ರ್ಯದ ಕಲ್ಪನೆಯ ತಳಹದಿಯಿಲ್ಲದೆ ನಮ್ಮ ವೈಯಕ್ತಿಕ ಜೀವನವು ಸಾಮಾಜಿಕ ಜೀವನವು ನಡೆಯುವುದಿಲ್ಲ. ನಮ್ಮ ನಮ್ಮ ಅನುಭವ, ವೈಯಕ್ತಿಕ ಬದುಕಿನ ಹಿನ್ನೆಲೆಯಿಲ್ಲದೆ ಬರೆಯುವುದಾದರೆ, ಮಾತನಾಡುವುದಾದರೆ "ಪಾವಿತ್ರ್ಯ"ದ ಅಗತ್ಯ ನಮಗೆ ಕಾಣಲಾರದು. ಇದಲ್ಲದೆ ನಿಜವನ್ನೇ ಹೇಳಬೇಕಾದರೆ ನಾವೆಲ್ಲರೂ ನಮ್ಮ ನಮ್ಮ ಸ್ತರದಲ್ಲೇ "ಪಾವಿತ್ರ್ಯ"ದ ಹುಡುಕಾಟದಲ್ಲಿರುತ್ತೇವೆ. "ಪಾವಿತ್ರ್ಯ"ಕ್ಕಿರುವ ಇದ್ದ ನಿರ್ದಿಷ್ಟ ಮತ್ತು ಸೀಮಿತ ಅರ್ಥ, ಈ ಅರ್ಥಕ್ಕಿದ್ದ ಯಜಮಾನಿಕೆಯನ್ನು ಪ್ರಶ್ನಿಸುವುದು ಸರಿ. ಆದರೆ ಹೀಗೆ ಪ್ರಶ್ನಿಸುವ ಆತುರ ಮತ್ತು ಒರಟುತನದಲ್ಲಿ ಬದುಕಿನಲ್ಲಿ ಪಾವಿತ್ರ್ಯಕ್ಕಿರುವ ಮಹತ್ವವನ್ನು ಅಲ್ಲಗಳೆಯಬಾರದು. ಪಾವಿತ್ರ್ಯವನ್ನು ನಾಶಮಾಡಿ ಹೊಸ ಸಂಸ್ಕೃತಿಯನ್ನು ಕಟ್ಟುತ್ತೇನೆಂದು ಹೊರಟಿರುವವರು ಕೂಡ ಹುಡುಕಾಡುತ್ತಿರುವುದು ಪಾವಿತ್ರ್ಯದ ಪರ್ಯಾಯ ನೆಲೆಗಳನ್ನು ಮತ್ತು ಸ್ಥಾಪಿಸಲು ಪ್ರಯತ್ನಿಸುತ್ತಿರುವುದು ತಮ್ಮ "ಪಾವಿತ್ರ್ಯ"ದ ಕಲ್ಪನೆಯನ್ನು. ನಾಜೂಕಿಗೆಂದು, ಪ್ರಗತಿಪರರೆಂದು ಕಾಣಿಸಿಕೊಳ್ಳಲೆಂದು "ಪಾವಿತ್ರ್ಯ" ಪದವನ್ನು ಇಂತವರು ಬಳಸದೆ ಹೋಗಬಹುದು ಅಷ್ಟೇ.

ಪಾವಿತ್ರ್ಯ ನಾಶ ಮಾಡುವವರು ಮೊದಲಿಗೆ ಮತ್ತು ಕೊನೆಯದಾಗಿ ಪ್ರಶ್ನಿಸುವುದು ವಿದ್ಯುಕ್ತ ಆಚರಣೆಗಳನ್ನೂ ಮತ್ತು ಇದನು ಪ್ರತಿನಿಧಿಸುವ ಮೂರ್ತಿಗಳನ್ನು (Rituals and Icons). ಇವರಿಗೆ ಕಾಣಿಸುವುದು ಆಚರಣೆಯ ಬಾಹ್ಯ ವಿವರಗಳು ಮತ್ತು ವಾಚ್ಯಾರ್ಥ ಮಾತ್ರ. ಗೋಕುಲಾಷ್ಟಮಿ ಕೂಡ ಒಂದು ಆಚರಣೆಯೇ, ಕೃಷ್ಣನು ಕೂಡ ಒಬ್ಬ ಮೂರ್ತಿಯೇ. ಇದನ್ನು ನೋಡುವ, ಒಳಗು ಮಾಡಿಕೊಳ್ಳುವ ಕ್ರಮ ಮಾತ್ರ ಈ ಪ್ರಬಂಧದಲ್ಲಿ ಬೇರೆ.

ಪ್ರಬಂಧದ ಎರಡನೇ ವಾಕ್ಯದಲ್ಲೇ "ಪವಿತ್ರತಮ" ಎನ್ನುವ ಪದವಿದೆ. ನಂತರ ಕಾಲಮಾನದ ಯಾವುದೇ ದಿನವಾಗಬಹುದಾದ ದಿನವೊಂದರ ಪ್ರಕೃತಿಯ ಸಣ್ಣ ವಿವರವೊಂದಿದೆ. ಪುರಾಣದ ಕೃಷ್ಣನನ್ನು ಮನೆಯ ಕೃಷ್ಣ, ಇಲ್ಲೇ ಹೀಗೇ ಕೃಷ್ಣ ಎಂದು ತೋರಿಸಿ ನಿರ್ದಿಷ್ಟಗೊಳಿಸುತ್ತದೆ. ಹಣತೆಯ ಬೆಳಕು ಫಲವಸ್ತ್ರದ ನೆಳಲಿನೊಡನೆ ಹಾಸುಹೊಕ್ಕಾಗಿ ಬೆರೆತಿದ್ದ ವಿವರ. ನೆಳಲು-ಬೆಳಕಿನಾಟ, ಕೃಷ್ಣನ ಮೇಲೆ ಬೀಳುತ್ತಿರುವ ಹಣತೆಯ ಬೆಳಕಿನ ವಿವರ ಇದೆಲ್ಲವೂ ಪ್ರಬಂಧಕ್ಕೆ ಬೇಕಾದ ಸದ್ಯದ ಮತ್ತು ಪೌರಾಣಿಕದ ಎರಡೂ ಪ್ರಪಂಚಗಳನ್ನು ಒಟ್ಟಿಗೇ ಸೂಚಿಸುತ್ತವೆ. ಮುಂದಿನ ಪ್ಯಾರಾಗಳ ವಿವರಗಳು ಕೂಡ ಕಾಲಾತೀತವಾದ ಒಂದು ಆಚರಣೆಯನ್ನು, ನಿರ್ದಿಷ್ಟ ದೇಶ ಕಾಲದ ಚೌಕಟ್ಟಿನೊಳಗೆ, ಕುಟುಂಬದ ಆವರಣದೊಳಗೆ ತರುವ ಪ್ರಯತ್ನವೇ ಆಗಿರುತ್ತದೆ. ಕೃಷ್ಣ ಮತ್ತು ಗೋಕುಲಾಷ್ಟಮಿ ಮನೆವಾರ್ತೆಯ ಒಂದು ಭಾಗವೇ ಆಗುತ್ತಾನೆ/ದೆ.

ಪ್ರಬಂಧಕಾರರ ತಂದೆಯ ಭಕ್ತಿಯಲ್ಲಿ ಪೂಜೆ ಮಾತ್ರವಿಲ್ಲ. ಪ್ರಾರ್ಥನೆ ಕೂಡ ಇದೆ. ಹಣತೆಯ ಬೆಳಕು ಇವರ ಮುಖದ ಮೇಲೆ ಕೂಡ ಬೀಳುವ ವಿವರವಿದೆ. ಪ್ರಾರ್ಥನೆಗೆ ಶಕ್ತಿ ಬರುವುದು, ತೇಜಸ್ಸು ಬರುವುದು ಏನನ್ನು ಪ್ರಾರ್ಥಿಸುತ್ತೇವೆ ಎಂಬುದರ ಮೇಲಲ್ಲ, ಪ್ರಾರ್ಥಿಸುವವನ ವ್ಯಕ್ತಿತ್ವ ಎಂತಹದೆಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಗಾಂಧಿಯ ಕೈಯಲ್ಲಿ ಪ್ರಾರ್ಥನೆ ಮತ್ತು ಉಪವಾಸಗಳು ಪಡೆದ ಅರ್ಥವನ್ನು ಇತರ ನಾಯಕರ ಕೈಯಲ್ಲಿ ಪಡೆಯಲಿಲ್ಲ. ಪ್ರಾರ್ಥನೆಗು ಆತ್ಮಶುದ್ಧಿಗು ಇರುವ ಅವಿನಾ ಸಂಬಂಧವನ್ನು ಸೂಚಿಸುವ ಈ ಸಾಲುಗಳನ್ನು ನೋಡಿ:

"ಜ್ಞಾನದಿಂದ ಓಜಸ್ವಿಯಾದ, ವ್ರತನೇಮಗಳಿಂದ ತೇಜಸ್ವಿಯಾದ, ಶಮದಮ ದಯಾದಿ ಗುಣಗಳಿಂದ ಪ್ರಸನ್ನವಾದ, ವಯಸ್ಸಿನ ಆಧಿಕ್ಯದಿಂದ ಗೌರವಾಧಿಷ್ಠನರಾದ, ಅಂದಿನ ಉಪವಾಸದಿಂದ ಶುಷ್ಕವಾದ ಮುಖವದು.....ನನ್ನ ತಂದೆಯವರ ಧ್ಯಾನಾಸಕ್ತವಾದ, ಪುರಾತನ ಆರ್ಯ ಸಂಸ್ಕೃತಿಯ ಅಕಳಂಕಿತ ಪಕ್ವ ಫಲದಂತಿರುವ, ಮುಖದ ಮುದ್ರೆ ಆ ಸಂಸ್ಕೃತಿಯ ಪಾತ್ರದಲ್ಲಿ ಹರಿದು, ಶ್ರದ್ಧೆಯ ನೆಲೆಗೊಂಡು, ವೈದಿಕ ಧರ್ಮ, ಕರ್ಮಗಳ ಕೂಲಗಳಿಂದ ನಿಯಮಿತವಾಗಿ, ಜ್ಞಾನಾರ್ಜನೆಯ ವೇಗದಿಂದ ನಿಷ್ಕಲ್ಮಶವಾಗಿ ಹಾದಿ ಸಾಗುತ್ತಾ ಸಾಗುತ್ತಾ ಕ್ರಮೇಣ ತಿಳಿದು, ಅನಂತದಲ್ಲಿ ಆತ್ಮ ನಿವೇದನ ಮಾಡಲು ಅಣಿಯಾದ ಜೀವನದಿಯ ಚಿತ್ರವಿದು."

ಪುರಾಣ ಶ್ರವಣ ಇಲ್ಲಿ ಯಾಂತ್ರಿಕ ವಿದ್ಯುಕ್ತ ಕ್ರಿಯೆಯಾಗುವ ಬದಲು ಅಂತರಂಗದ ಕೋಮಲತೆಗೆ, ಮನಸ್ಸಿನ ಮೃದುತ್ವಕ್ಕೆ ಪ್ರೇರಕವಾಗುತ್ತಿರುವುದು ಮುಖ್ಯ. ಪ್ರಬಂಧಕಾರನ ತಂದೆ-ತಾಯಿ ಇಬ್ಬರ ಹೃದಯದಲ್ಲೂ ನಚ್ಚಳಿದು ಇರುಳು ಮೂಡಿದೆ. ಪುರಾಣ ಶ್ರವಣದ ಸಂದರ್ಭದಲ್ಲೇ ಪ್ರಬಂಧಕಾರನ ತಂದೆಯ ಗೃಹಕೃತ್ಯದ ಜವಾಬ್ದಾರಿಯ ನೆನಪುಗಳಿಂದ ಪ್ರೇರಿತವಾಗುವ ಪ್ರಶ್ನೆಗಳು, ಮಧ್ಯಪ್ರವೇಶ, ಅಧಿಕಪ್ರಸಂಗದಂತೆ ಕಾಣುವ ಬದಲು ಕೃಷ್ಣ ಜನನದ ಕತೆಯ ಭಾವಕ್ಕೆ ಸಂಬಂಧ ಪಡೆದಿದೆ ಎನ್ನುವ ಸೂಚನೆ ಪ್ರಬಂಧಕಾರನ ಮಾಗಿದ ದೃಷ್ಟಿಕೋನಕ್ಕೆ ದ್ಯೋತಕ. ಸಾಮಾನ್ಯ ಮನೆಯೊಂದರ ಕೂಸೆ ತನ್ನ ಆಟ-ನೋಟಗಳಿಂದ ಇಷ್ಟೊಂದು ಮುದ್ದಾಗಿರ ಬಹುದಾದರೆ ದೇವಶಿಶು ಕೃಷ್ಣ ಇನ್ನು ಎಷ್ಟೊಂದು ಮುದ್ದಾಗಿರಬಹುದು, ಮೋಹಕವಾಗಿರಬಹುದು ಎಂಬ ಪ್ರಶ್ನೆ ಮನೆಯ ಹೊಸ ಪ್ರಭೆಯಲ್ಲಿ ಕಾಣಿಸುತ್ತದೆಂಬುದು ಗಮನಾರ್ಹ.

ಕೃಷ್ಣನ ಹುಟ್ಟು ಕಾಲಪ್ರವಾಹದ ದೃಷ್ಟಿಯಿಂದ ನಿರಂತರ. ದೇಶದ ಚೌಕಟ್ಟಿನ ಹಿನ್ನೆಲೆಯಲ್ಲಿ ಸರ್ವಾಂತರ್ಯಾಮಿ. ಈತನ ಜನನ "ಭಾರತ ಧರ್ಮವು ಭಾರತ ವರ್ಷದಲ್ಲಿ ಉಳಿದಿರುವವರೆಗೂ" ನಿರಂತರವೆಂಬುದು ಪುತಿನರ ಮಾತು. ಇಲ್ಲಿ ಪುತಿನ ಬಳಸುವ "ಭಾರತಧರ್ಮ"ವೆಂಬ ಮಾತು ಕುತೂಹಲಕರವಾಗಿದೆ. ಓದುಗರೇ, ಇಲ್ಲಿ ನೋಡಿ ಪುತಿನ "ಹಿಂದೂ ಧರ್ಮ" ಎಂಬ ಪದವನ್ನು ಬಳಸುತ್ತಿಲ್ಲ. ಆದ್ದರಿಂದ ಅವರು ಪ್ರಗತಿಪರರು, ಜಾತ್ಯಾತೀತರು ಎಂಬ Politically correct ಆದ Stance Reading ಮಾಡುವ ದುರುಳತನ ನನ್ನಲ್ಲಿಲ್ಲ. ಮಹಾಭಾರತದ ಆಗುಹೋಗುಗಳ ಹಿನ್ನೆಲೆಯಲ್ಲೇ ಹುಟ್ಟುವ ತಾತ್ವಿಕತೆ, ವಿಷಾದ, ಜೀವನ ಧರ್ಮದ ಬಗ್ಗೆ ಪುತಿನ ಗಮನವಿರಬಹುದೆಂದು ನನ್ನ ಊಹೆ.

ಈ ಪ್ರಬಂಧಕ್ಕೊಂದು ಬೆರಗಿದೆ, ಪ್ರಭೆಯಿದೆ (AURA). ಇದರ ಮೂಲವೇನು? ಪ್ರಬಂಧದ ವಿವರಗಳೇ, ಪೌರಾಣಿಕ ಪಾತ್ರವಾದ ಕೃಷ್ಣನೇ, ಪುತಿನರ ಗಮನ ಯಾವುದರ ಕಡೆಗಿದೆ? ಬದುಕಿನಲ್ಲಿ ಸೌಂದರ್ಯದ ನೆಲೆಗಳನ್ನು ಹುಡುಕುವ ಪುತಿನ ದೃಷ್ಟಿಕೋನದಿಂದ ಈ AURA ಸೃಷ್ಟಿಯಾಗಿದೆಯೆನಿಸುತ್ತದೆ. ಈ ಮಾತುಗಳನ್ನು ಗಮನಿಸಿ:

"ನನ್ನ ಕಾವ್ಯದ ಮೂಲಕ ಮತ್ತು ನನ್ನ ಧಾರ್ಮಿಕ ಅನುಭವದ ಮೂಲಕ ನಾನು ಇಡೀ ಮಾನವ ಕುಲವನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದೇನೆ. ಸೌಂದರ್ಯಾತ್ಮಕತೆಯ ಮೂಲಕ ನಾನು ಮಾನವತಾವಾದವನ್ನು ಕಂಡುಕೊಳ್ಳಲು ಶ್ರಮಿಸಿದ್ದೇನೆ. ರಾಮಾಯಣವನ್ನು ನೋಡುವ ಸಾಂಪ್ರದಾಯಿಕ ದೃಷ್ಟಿಕೋನವು ಭಕ್ತಿಭಾವಕ್ಕೆ ಕಿಂಕರವಾಗಿದೆ. ರಾಮಾಯಣ ಮತ್ತು ಭಗವದ್ಗೀತೆಗಳನ್ನು ಪವಿತ್ರ ಗ್ರಂಥಗಳಾಗಿಯಲ್ಲ, ಬದಲಾಗಿ ಅದ್ಭುತ ಕಲಾಕೃತಿಗಳು ಎಂಬಂತೆ ನೋಡುವುದನ್ನು ಪಶ್ಚಿಮವು ನನಗೆ ಕಲಿಸಿದೆ. ಅವುಗಳೆಡೆಗಿನ ನನ್ನ ಪ್ರತಿಕ್ರಿಯೆ ಸೌಂದರ್ಯಾತ್ಮಕವಾದುದು. ನಾನು ರಾಮಾಯಣವನ್ನು ಶೇಕ್ಸ್‌ಪಿಯರ್ ಅಥವಾ ಗಯಟೆಯನ್ನು ಓದಿದ ಹಾಗೆಯೇ ಓದುತ್ತೇನೆ. ಅದು ಒಬ್ಬ ಮಹಾಕವಿಯ ಮಹಾನ್ ಕಾವ್ಯ. ಒಂದು ಸಾಂಪ್ರದಾಯಿಕ ಮನಸ್ಸಿಗೆ ರಾಮಾಯಣವನ್ನು ಈ ರೀತಿ ನೋಡಲು ಸಾಧ್ಯವಾಗುವುದಿಲ್ಲ." (ಭೃಂಗಮಾರ್ಗ - ಪುಟಗಳು 450-452). ಒಂದು ಪುರಾಣ ಪ್ರಸಂಗವನ್ನು ಕಾಲಾತೀತವಾದ ಸೌಂದರ್ಯಾನುಭವವಾಗಿ ಸೃಷ್ಟಿಸಲು ಹೊರಟಿರುವುದರಿಂದಲೇ ಪ್ರಬಂಧದ ವಿವರಗಳು ಸ್ಥಾನಿಕ-ಕಾಲಬದ್ಧ ವಿವರಗಳಾಗಿದ್ದು ಕೂಡ ದೇಶಕಾಲದಿಂದ ಬಿಡುಗಡೆ ಪಡೆದಿವೆ, ಚಿಮ್ಮಿವೆ. ಪುರಾಣ ಪ್ರಸಂಗಗಳನ್ನು ಓದುವಾಗ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವ ಪಾವಿತ್ರ್ಯ-ದೈವಿಕ ಭಾವನೆಗಳ ಚೌಕಟ್ಟು ಮಾತ್ರವೇ ಈ ಪ್ರಬಂಧ ಓದುವಾಗ ನಮ್ಮಲ್ಲಿ ಜಾಗೃತವಾಗುವುದಿಲ್ಲ ಎಂಬುದು ಮುಖ್ಯ. ಈವತ್ತಿನ ಮತೀಯ ವಾತಾವರಣದಲ್ಲಿ ನಮ್ಮ ಪುರಾಣ ಪ್ರಸಂಗಗಳನ್ನು, ಮಹಾಕಾವ್ಯಗಳನ್ನು ಈ ದೃಷ್ಟಿಯಿಂದಲೂ ಓದಲು (ವ್ಯಾಖ್ಯಾನಿಸಲು ಮಾತ್ರವಲ್ಲ) ಅನುಭವಿಸಲು ಸಾಧ್ಯವಾಗಬೇಕೆಂಬ ಆಸೆ ನನ್ನ ಮರುಓದಿನ ಹಿಂದಿದೆ. ಆದರೆ ಹೀಗೆ ಓದುವಾಗ ನಮ್ಮ ಆಧುನಿಕ-ಪ್ರಗತಿಪರ ಓದಿನ ಮುಖ್ಯ ಶಾಪವಾದ Stance Reading (ನಿಲುವು ಪ್ರೇರಿತ ಓದು) ನ ಅಪಾಯಗಳ ಬಗ್ಗೆ ಕೂಡ ನಮಗೆ ಎಚ್ಚರವಿರಬೇಕು-ನಮ್ಮ ಬಗ್ಗೆಯೇ.

ನಮ್ಮ ಕಾಲದಲ್ಲಿ ಗಾಂಧಿ ಮಾತ್ರ ನಮ್ಮ ಆಧ್ಯಾತ್ಮಿಕ ಪರಂಪರೆಯ ಮಹೋನ್ನತ ಅಂಶಗಳನ್ನು ಪ್ರತಿನಿಧಿಸುತ್ತಾರೆ ಎಂದು ತಿಳಿದಿದ್ದ ಪುತಿನರಿಗೆ ಪಶ್ಚಿಮದ ಬಗ್ಗೆ ಭಯವಿರಲಿಲ್ಲ, ಆತಂಕವಿರಲಿಲ್ಲ. ಪಶ್ಚಿಮ, ಆಧುನಿಕತೆ, ನವ್ಯತೆ ಕುರಿತಂತೆ ಪುತಿನರ ನಿಲುವು ಸ್ಥೂಲವಾಗಿರಲಿಲ್ಲ, ಏಕಮುಖವಾಗಿರಲಿಲ್ಲ.

ಆದರೆ ಒಂದು ಸ್ತರದ ನವ್ಯತೆ ಮತ್ತು ಆಧುನಿಕತೆ ಮಾತ್ರ ಪಾವಿತ್ರ್ಯ ನಾಶವಾಗದೆ ಪರ್ಯಾಯ ಸಂಸ್ಕೃತಿಯೂ, ಹೊಸಕಾಲಕ್ಕೆ ಬೇಕಾದ ಆಧುನಿಕತೆಯೂ ನಮ್ಮ ಸಮಾಜದಲ್ಲಿ ಮೂಡಲಾರದೆಂದು ಖಚಿತವಾಗಿ ನಂಬಿತ್ತು. ಇಂತಹವರ ಸಾಹಿತ್ಯ ಕೃತಿಗಳಲ್ಲಿ ಧಾಂದಲೆಗೆ ಒಳಗಾಗಿದ್ದು Rituals. Ritualsಗಳ ಸಾಂಕೇತಿಕತೆಗೇ ಇವರೆಲ್ಲ ಹೆಚ್ಚು ಪ್ರತಿಕ್ರಿಯಿಸಿದರು ಎಂದು ಈಗ ಅನಿಸುತ್ತದೆ. Ritualsಗಳ ಸಾಂಸ್ಕೃತಿಕ ಆಯಾಮ, ಶ್ರೀಮಂತಿಕೆ ಮತ್ತು ಧ್ವನಿ ಇವರಿಗೆ ತಿಳಿಯಲೇ ಇಲ್ಲ. ರೂಪಕಗಳು, ಸಂಕೇತಗಳು ಎಂದು ನಾವು ಭಾವಿಸುವ Ritualsಗಳು ಸಂದೇಶ - ಅರ್ಥವಾಹಕಗಳು ಮಾತ್ರವಲ್ಲ ಅಥವಾ ಅಲ್ಲವೇ ಅಲ್ಲ. ಇದನ್ನೆಲ್ಲ ಆಚರಿಸುವವರ/ಪ್ರತಿಯೊಬ್ಬರ ನಡಾವಳಿ, ಉತ್ಸವ, ವ್ಯಕ್ತಿತ್ವಗಳ ಹಿನ್ನೆಲೆಯಲ್ಲಿ ಪ್ರತಿಸಲವೂ ಈ Ritualsಗಳು ನಿತ್ಯ ನೂತನವಾದ ಅರ್ಥ ಪಡೆಯುತ್ತವೆ ಎಂಬುದನ್ನು ಇವರು ಗ್ರಹಿಸಲಾರದೆ ಹೋದರು. ರೂಪಕ ಸಂಕೇತಗಳೇ ಕೊನೆಯ ಸತ್ಯವೆಂದು ತಿಳಿದವರ ದುರಂತವಿದು. "ಗೋಕುಲಾಷ್ಟಮಿ" ಪ್ರಬಂಧದ ಹಿಂದಿರುವ ತಾತ್ವಿಕತೆ ನನ್ನ ಮಾತನ್ನೇ ಸಮರ್ಥಿಸುತ್ತದೆಂದು ಭಾವಿಸುತ್ತೇನೆ. ಪಾವಿತ್ರ್ಯವೆನ್ನುವುದು ಕೊನೆಗೂ ಇರುವುದು ವಿಧ್ಯುಕ್ತ ಆಚರಣೆಗಳಲ್ಲೂ ಅಲ್ಲ, ಪ್ರತಿಮೆಗಳಲ್ಲೂ ಅಲ್ಲ. ಅದನ್ನು ಆಚರಿಸುತ್ತಿರುವವರ ಕೈಯಲ್ಲಿ. ಒಂದು ಕಾಲದಲ್ಲಿ Ritualsಗಳು ಗೊಡ್ಡುಗಳ ಕೈಯಲ್ಲಿ ಮತ್ತು ಶುಷ್ಕ ವಿಶ್ಲೇಷಕರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಈಗ ಸಮೂಹಸನ್ನಿಗಳ ಪುಂಡರ ಗುಂಪಿನ ಕೈಲಿ ಸಿಕ್ಕಿಹಾಕಿಕೊಂಡಿದೆ.

"ಗೋಕುಲಾಷ್ಟಮಿ" ಪ್ರಬಂಧದಲ್ಲಿ ನನಗೆ ತುಂಬಾ ಇಷ್ಟವಾದ ಇನ್ನೊಂದು ಸಂಗತಿಯೆಂದರೆ ಪ್ರಬಂಧದೊಳಗೆ ಅಡಕವಾಗಿರುವ ಮೌನದ ಸೂಚನೆಗಳು. ಈ ಮೌನ ಕೂಡ ಪ್ರಬಂಧಕಾರ ನಿರೂಪಿಸದೆ ಹೋದ ಆದರೆ ಪ್ರಬಂಧದ ಭಾಗವೇ ಆಗಿರುವ ಜಗತ್ತಿನ ಇನ್ನೂ ಹಲವು ಕೋನಗಳ ಕಡೆ ನಮ್ಮ ಗಮನ ಸೆಳೆಯುತ್ತದೆ. ಎಲ್ಲ ಉತ್ತಮ ಸಾಹಿತ್ಯ ಕೃತಿಗಳು ಎಷ್ಟೇ ಮಾತನಾಡಿದರೂ ಕೊನೆಗೆ ಆಶ್ರಯಿಸುವುದು ಮೌನವನ್ನೇ. ಇಂತಹ ಮೌನದ ಕೆಲವು ಕೋನಗಳ ಬಗ್ಗೆಯಾದರೂ ನಮ್ಮ ಗಮನವು ಮರು ಓದಿನ ಸಂದರ್ಭದಲ್ಲಿ ಜಾಗೃತವಾಗಬಹುದೆಂದು ನನ್ನ ಭಾವನೆ.

ಪುತಿನ ಸಮಕಾಲೀನರು ಬದುಕಿನಲ್ಲಿ ಪಾವಿತ್ರ್ಯದ ನೆಲೆಗಳನ್ನು ಹುಡುಕುವ ರೀತಿ ಕೂಡ ಒಬ್ಬರಿಂದ ಒಬ್ಬರಿಗೆ ಭಿನ್ನ. ನಾಸ್ತಿಕರು, ವಿಚಾರವಾದಿಗಳೂ ಆದ ಕಾರಂತರಂತವರ ಹುಡುಕಾಟ- ಎಲ್ಲಿ ಹೇಗೆ? ಪಾವಿತ್ರ್ಯವನ್ನು ಕಾರಂತರು ವ್ಯಕ್ತಿಯ ಚಾರಿತ್ರ್ಯ, ಮೌಲ್ಯನಿಷ್ಠೆ ಮತ್ತು ಪ್ರತಿಯೊಬ್ಬ ಮನುಷ್ಯನ ಸಮಾಜೋಪಯೋಗಿ ಆಯಾಮಗಳಲ್ಲಿ ಕಾಣುತ್ತಾರೆ. ವ್ಯಕ್ತಿಯ ಸಾಮಾಜಿಕ ಹಿನ್ನೆಲೆ, ಸ್ಥಾನಮಾನಗಳಿಗೆ ಕಾರಂತರು ಪ್ರಾಮುಖ್ಯತೆ ನೀಡುವುದಿಲ್ಲ. ಮಾಸ್ತಿಯಂತವರಿಗೆ ವೆಂಕಟಶಾಮಿಯ ಪ್ರಣಯದ ಕತೆ - ಪ್ರಸಂಗ ನಡೆಯುವ ಕುಗ್ರಾಮವೇ Spiritual Place ಆಗಿ ಕಾಣಿಸುತ್ತದೆ. ಕುವೆಂಪುಗೆ ಮದುಮಗಳು ಕಾದಂಬರಿಯ ಘೋಷವಾಕ್ಯದಲ್ಲಿ ಸೂಚಿಸುವಂತೆ ಪಾವಿತ್ರ್ಯವೆನ್ನುವುದು ಕಾಲ-ದೇಶ ಎರಡರ ದೃಷ್ಟಿಯಿಂದಲೂ ಸರ್ವವ್ಯಾಪಿ. ಇದನ್ನು ಹುಡುಕುವುದೇ ಕಲಾವಿದನ ಕರ್ತವ್ಯ. ಬೇಂದ್ರೆಯವರಿಗೆ ಬದುಕಿನ ಲೀಲಾ ಸ್ವಭಾವವೇ ಪಾವಿತ್ರ್ಯದ ಉಗಮ ಮತ್ತು ನಿತ್ಯ ನರ್ತನ. ಸಣ್ಣ ಸೋಮವಾರದಂತಹ ಪದ್ಯದಲ್ಲಿ ವ್ಯಕ್ತವಾಗುವ ಹಾಗೆ ಹಳಹಳಿಕೆಯಿಲ್ಲದಾಗ ಭೂತವು ವರ್ತಮಾನದಲ್ಲಿ ಪ್ರಕಟವಾಗುವ, ನಿಜವಾಗುವ ರೀತಿಯಲ್ಲೇ ಪಾವಿತ್ರ್ಯ ಉಂಟು.

ನವ್ಯ ತಲೆಮಾರಿನ ಲೇಖಕರು ಸ್ವಘೋಷಿತ ಪಾವಿತ್ರ್ಯ ನಾಶದ ವಕ್ತಾರರು-ಬರವಣಿಗೆಯ ಒಂದು ಹಂತದಲ್ಲಿ ಬರವಣಿಗೆ, ಕಾಲಮಾಗಿದಂತೆ ಇವರು ಕೂಡ ಪಾವಿತ್ರ್ಯದ ನೆಲೆಗಳನ್ನು ಹುಡುಕಿದವರೇ. ನವ್ಯ ಲೇಖಕರ ಸಂದರ್ಭದಲ್ಲಿ ಪಾವಿತ್ರ್ಯದ ಹುಡುಕಾಟ-ಬರವಣಿಗೆಯ ಕೊನೆ ಕೊನೆ ಹಂತಗಳಲ್ಲಿ ಹೇಗೆ ಜರುಗಿತು ಎಂಬುದು ಪ್ರತ್ಯೇಕ ಲೇಖನ-ಚರ್ಚೆಗೆ ವಸ್ತುವಾಗಬಲ್ಲದು.

(ಗಾಂಧಿಬಜಾರ್ ಸಾಹಿತ್ಯ ಪತ್ರಿಕೆಯ ಮಾರ್ಚ್ 2009ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)
(ಚಿತ್ರಗಳು: ವಿಜಯ ಕರ್ನಾಟಕ ಮತ್ತು ಉದಯವಾಣಿಯ ಸಾಪ್ತಾಹಿಕ ಪುರವಣಿಗಳಿಂದ ಕೃತಜ್ಞತಾಪೂರ್ವಕ )
ಮುಂದೆ ಓದಿ....

Saturday, March 21, 2009

ತನಗೆ ತಾನೇ ಹೇಳಿಕೊಂಡ ಕತೆಗಳು

ಪಿ. ಲಂಕೇಶ್ ಕೊನೆಯ ಕತೆಗಳ ಒಂದು ಸಾಂಸ್ಕೃತಿಕ ಓದು

Action is common to both reason and imagination. And in art each ougut to borrow from other. Technique is imagination aspiring to reason. Form is reason aspiring to imagination.
- Edward Said

ಈ ಸಂಕಲನದ ಕತೆಗಳ ಬಗ್ಗೆ ಮೊದಲಿಗೇ ಹೇಳಬೇಕಾದ ಮಾತೆಂದರೆ ಇದೆಲ್ಲವೂ ಲೇಖಕ ತನಗೆ ತಾನೇ ಹೇಳಿಕೊಂಡ, ಇನ್ನೂ ಹೇಳಿಕೊಳ್ಳುತ್ತಿರುವಂತೆ ಅನಿಸುವ ಕತೆಗಳು. ಸೃಜನಶೀಲ ಬರಹಗಾರನ ಜೀವನದಲ್ಲಿ ಇದೊಂದು ಅಪೂರ್ವ ಹಂತ. ಓದುಗರಿಗೆ, ಲೋಕಕ್ಕೆ, ಸಮಕಾಲೀನರಿಗೆ ಬರೆಯುವುದು ಎಂದಿಗೂ ಇದ್ದದ್ದೇ. ಕತೆಗಾರ ಕತೆಗಳನ್ನು ತನಗೆ ತಾನೇ ಹೇಳಿಕೊಳ್ಳುವುದಕ್ಕೆ ಇರುವ ಕಾರಣಗಳು ಪ್ರತಿಯೊಬ್ಬ ಲೇಖಕನ ಸಂದರ್ಭದಲ್ಲೂ ಭಿನ್ನವಾದ್ದು. ಈ ಕಾರಣಗಳ ಬಗ್ಗೆ ನಾವು ಊಹಿಸಬಹುದು ಮಾತ್ರ. ಹೀಗೆ ಊಹೆ ಮಾಡುವುದನ್ನು ಬಿಟ್ಟು ಇಲ್ಲಿಯ ಕತೆಗಳ ವಿಶಿಷ್ಟತೆಯನ್ನು ಗಮನಿಸಿದರೆ ಲಂಕೇಶರ ಬರವಣಿಗೆಯ ಬಗ್ಗೆ, ಕನ್ನಡ ಸಂಸ್ಕೃತಿಯ ಬಗ್ಗೆ ನಮಗೆ ತಿಳಿಯುವ ಸಂಗತಿಗಳಿಂದಾಗಿ, ಕತೆಗಾರ ತನಗೆ ತಾನೇ ಕತೆ ಹೇಳಿಕೊಳ್ಳುತ್ತಿರುವುದಕ್ಕೆ ಸತ್ಯಕ್ಕೆ ಹತ್ತಿರವಾದ ಕೆಲವು ಕಾರಣಗಳನ್ನಾದರೂ, ತಿಳಿಯಲು ನೆರವಾಗುತ್ತದೆಂದು ನನ್ನ ನಂಬಿಕೆ.

ಲೋಕದ ಕನ್ನಡಿಯಲ್ಲಿ ತನ್ನನ್ನು ಕಾಣುವುದು - ಪರಿಶೀಲಿಸಿಕೊಳ್ಳುವುದು, ತನ್ನ ಕನ್ನಡಿಯಲ್ಲಿ ಲೋಕವನ್ನು ಕಾಣುವುದು - ಪರಿಶೀಲಿಸುವುದು; ಈ ಎರಡು ರೀತಿಯ ನೋಡುವಿಕೆಗಳು ಬೇರೆಬೇರೆಯಲ್ಲ ಎನ್ನುವಂತೆ ಇಲ್ಲಿಯ ಕತೆಗಳಿವೆ. ಇಂತಹ ನೋಡುವಿಕೆ ಒಂದು ರೀತಿಯ ತಹತಹವನ್ನು ಒಳಗುದಿಯನ್ನು ಬರವಣಿಗೆಗೆ ನೀಡುತ್ತದೆ. ಈ ತಹತಹ ಒಳಗುದಿಯ ಅನುಭವ ಯಾವ ಸ್ಥರದ ಓದುಗನಿಗಾದರೂ ತಕ್ಷಣವೆ ತಟ್ಟುತ್ತದೆ. ತಕ್ಷಣವೇ ನೆನಪಿಗೆ ಬರುವುದು ಮಾಸ್ತಿಯವರ ಕೊನೆಯ ಕತೆ `ಮಾಯಣ್ಣನ ಕನ್ನಡಿ'. ಆ ಕತೆಯಲ್ಲೂ ಕೂಡ ಲೇಖಕ ಮಾತ್ರವಲ್ಲ ಮನುಷ್ಯ ಕೂಡ ಎರಡೂ ಕನ್ನಡಿಗಳಲ್ಲಿ ಕಾಣುವುದನ್ನು ಒಟ್ಟಿಗೇ ನೋಡಬೇಕೆಂಬ ಸೂಚನೆಯಿದೆ. ಸೂಚಿಸುವ ಕ್ರಮ ಮಾತ್ರ ಉದ್ವಿಗ್ನತೆಯದಲ್ಲ. ವಿಷಾದ ಮತ್ತು ಅನಿವಾರ್ಯತೆಯ ಸ್ಥಾಯಿಯಲ್ಲಿ ಮಾಸ್ತಿ ಕತೆಯನ್ನು ನಡೆಸುತ್ತಾರೆ. ಲಂಕೇಶರ ಬರವಣಿಗೆಯಲ್ಲಿ ಈ ರೀತಿಯ ನೋಡುವಿಕೆ ತನಗೇ ವಿಶಿಷ್ಟವಾದದ್ದು ಎಂದು ಒತ್ತಾಯದಿಂದ ಸೂಚಿಸುವಷ್ಟು `ಸ್ವಪ್ರಜ್ಞೆ' ಮತ್ತು ತೀವ್ರತೆಯಿದ್ದರೆ ಮಾಸ್ತಿಯವರ ಬರವಣಿಗೆಯಲ್ಲಿ ಈ ಸೂಚನೆಯೆಂಬುದು ಲೋಕವು ಇರುವ, ಇರಬೇಕಾದ ರೀತಿಯ ಮನೆವಾರ್ತೆಯ ಧಾಟಿಯಲ್ಲಿ ಪ್ರಕಟವಾಗುತ್ತದೆ. ನನ್ನ ಒಲವು ಮತ್ತು ಆಯ್ಕೆ ಮಾಸ್ತಿಯವರ ಕ್ರಮದ ಪರವಾಗಿ ಇದ್ದರೂ ಲಂಕೇಶರ ಬರವಣಿಗೆಯ ಕ್ರಮವನ್ನು ಪರಿಶೀಲಿಸುವುದು ನಮ್ಮ ಸಾಂಸ್ಕೃತಿಕ ಸನ್ನಿವೇಶ ಮೂಡಿಸುವ ಜವಾಬ್ದಾರಿ. ಲಂಕೇಶರ ಕತೆಗಳ ಸದ್ಯತನ ಇಂತಹ ಒತ್ತಾಯವನ್ನು ಓದುಗರ ಮೇಲೆ ಹಾಕುತ್ತದೆ.



`ಡಿಸೋಜಾನ ಊವಿನ ವೃತ್ತಿ' ಮತ್ತು `ಒಂದು ಸಂಬಂಧದ ದಾಖಲೆ' ಈ ಎರಡೂ ಕತೆಗಳನ್ನು ವಿವರವಾಗಿ ಪರಿಶೀಲಿಸಬಹುದು.

ಡಿಸೋಜಾ ಕತೆಯ ಶೇಷಗಿರಿ ವೈಯಕ್ತಿಕವಾಗಿ ಒಳ್ಳೆಯವನೇ. ಶೇಷಗಿರಿಯ ಸಲಹೆಗಳನ್ನು ಒಪ್ಪುವುದರಿಂದ ಡಿಸೋಜಾಗು ಲಾಭವಿದೆ. ಆದರೆ ಇದರಿಂದಾಗಿ ಡಿಸೋಜಾನ ವ್ಯಕ್ತಿತ್ವ ಪ್ರಕಟವಾಗಲಾರದು, ಅರಳಲಾರದು. ಆತ್ಮವಿಶ್ವಾಸ ತುಂಬಲಾರದು. ಶೇಷಗಿರಿಯ ಮೊದಲ ಸಲಹೆ - ಆರೆಸೆಸ್ ತಂಡದವರಿಗೆ ವ್ಯಾಯಾಮ ಹೇಳಿಕೊಡುವುದನ್ನು ಡಿಸೋಜಾ ನೇರವಾಗಿಯೇ ಒಪ್ಪುವುದಿಲ್ಲ. ಡಿಸೋಜಾ ಕ್ರಿಶ್ಚಿಯನ್ ಆದದ್ದರಿಂದ ಹಿಂದೂ ಜಾತಿಗಳ ಸಾಂಪ್ರದಾಯಿಕ ವೃತ್ತಿಗಳ ಬಂಧನವೂ ಆತನಿಗಿಲ್ಲ. ಹೂವಿನ ಮಾರಾಟವನ್ನು ಆತ ನಾಗರೀಕತೆಯ, ಆಧುನಿಕ ಪರಿಭಾಷೆ, ಲಯದಲ್ಲಿ ಮಾಡಲು ಸಿದ್ಧನಿದ್ದಾನೆ, ಉತ್ಸಾಹದಿಂದ್ದಾನೆ. ಸಮಾಜ, ಜನ ಮಾತ್ರ ಹೂ ಮಾರಾಟದ ವೃತ್ತಿಯನ್ನು ಡಿಸೋಜಾನ ಆಧುನಿಕತೆಯ ಪರಿಭಾಷೆಯಲ್ಲಿ ಪರಿಭಾವಿಸಲಾರರು. ಡಿಸೋಜಾನ ಮಾರಾಟದ ಶೈಲಿ, ಪರಿಭಾಷೆ ಸಾರ್ವಜನಿಕರಿಗೆ ಹೇಗೆ ಗೇಲಿಯ ವಸ್ತುವೋ, ಡಿಸೋಜಾಗೆ ಒಳ್ಳೆಯದನ್ನು ಬಯಸುವ ಶೇಷಗಿರಿಗೆ ಕೂಡ ಕುತೂಹಲದ ವಸ್ತುವೇ. ಡಿಸೋಜಾ ಎರಡೂ ರೀತಿಯ ಪ್ರತಿಕ್ರಿಯೆಗಳಿಂದಲೂ ಕಂಗಾಲು. ಶೇಷಗಿರಿಯ ಸೂಚನೆ ಮಾತ್ರ ಜಾತಿಪದ್ಧತಿಗೆ ತಕ್ಕ ಹಾಗೆಯೇ ಇದೆ. ಈ ಸೂಚನೆ ತಕ್ಷಣದ ಹುಮ್ಮಸ್ಸಿಗೆ ಕಾರಣವಾದರೂ ಡಿಸೋಜಾಗೆ ಯಾವುದೋ ವಿಚಿತ್ರ ಯಂತ್ರಕ್ಕೆ ಸಿಕ್ಕಿಹಾಕಿಕೊಂಡ ನೋವು ಮೂಡುತ್ತದೆ.

ಶೇಷಗಿರಿಯ ಗ್ರಹಿಕೆಯಲ್ಲಿರುವ ಮಿತಿಗಳನ್ನು ಈ ಕತೆ ವಿಶೇಷವಾದ ವ್ಯಂಗ್ಯವಿಲ್ಲದೆ ನಿರ್ಲಿಪ್ತ ಧಾಟಿಯಲ್ಲಿ ತಣ್ಣಗೆ ಹೇಳಲು ಪ್ರಯತ್ನಿಸುತ್ತದೆ ಎನ್ನುವುದಷ್ಟೇ ಈ ಕತೆಯ ವಿಶೇಷವಲ್ಲ. ದಲಿತರು, ಹಿಂದುಳಿದವರು ಜಾತಿಪದ್ಧತಿಗೆ ಸಂಬಂಧಿಸದ ವೃತ್ತಿಗಳನ್ನು ಯಾವ ಶೈಲಿಯಲ್ಲಿ, ಯಾವ ಪರಿಭಾಷೆ ಲಯದಲ್ಲಿ ಮಾಡಿದರೆ ಸಮಾಜವು ಅದನ್ನು ಒಪ್ಪಿಕೊಳ್ಳುತ್ತದೆ, ದಲಿತರು `ದಲಿತತನ'ದಿಂದ ಯಾವಾಗ ಸಮಾಜದ ಕಣ್ಣಲ್ಲಿ ಪಲ್ಲಟಗೊಳ್ಳುತ್ತಾರೆ, ಪಲ್ಲಟಗೊಳ್ಳಬೇಕು ಎಂಬ ಸಂದಿಗ್ಧದ ಕಡೆ ಕತೆ ನಮ್ಮ ಗಮನ ಸೆಳೆಯುತ್ತದೆ. ಕಲ್ಕತ್ತದ ಬಾಟಾ ಕಂಪನಿಗೆ ನಾನು ಹೋಗಿದ್ದಾಗ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ಮೇಲ್ವಿಚಾರಕರು ಮಾತ್ರವಲ್ಲ, ಚರ್ಮದ processing ಮುಂತಾದ ಕೆಲಸಗಳಲ್ಲೂ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿಯ ಹಿಂದೂಗಳು ನಿರತರಾಗಿದ್ದರು. ಹೀಗೆ ಮಾಡಿಯೂ ಕೂಡ ಅವರೆಲ್ಲ `ತಮ್ಮತನ'ದಿಂದ ಮನಸ್ಸಿನೊಳಗಡೆ ಪಲ್ಲಟಗೊಳ್ಳದೇ ಹೋಗಿರಬಹುದು. ಹಾಗೆ ಪಲ್ಲಟಗೊಳ್ಳಬೇಕೆಂಬ ಒತ್ತಾಯವನ್ನು ಕೂಡ ಸಮಾಜ ಹೇರದಿರಬಹುದು. ದಲಿತರು ಇದುವರೆಗೆ ಮುಂದುವರೆದ ವರ್ಗದವರು ಮಾಡುತ್ತಿದ್ದ ವೃತ್ತಿಗಳನ್ನು, ಹಿಂದಿನ ಶೈಲಿ, ಪರಿಭಾಷೆಯಲ್ಲಿ ಮಾತ್ರ ಮಾಡಿದಾಗಲೇ, ಸಮಾಜವು ಅವರನ್ನು `ಯಶಸ್ವಿ'ಯೆಂದು ಭಾವಿಸಬಹುದು. ಹಾಗಾದಾಗ ಅವರ `ದಲಿತತನ'ಕ್ಕೆ ಏನಾಗುತ್ತದೆ, ಏನಾಗಬೇಕು? ದಲಿತರಿಗೆ ಆಗಮಶಾಸ್ತ್ರದಲ್ಲಿ ತರಬೇತಿ ನೀಡಿ ಪೂಜಾರಿಗಳಾಗಿ ನೇಮಿಸಬೇಕೆಂಬ ಸರಕಾರದ ಯೋಜನೆಗಳೇ ಇವೆಯಲ್ಲ. ದಲಿತರಿಗೆ ಉದ್ಯೋಗಾವಕಾಶಗಳ, ಜೀವನಾವಕಾಶಗಳ ವಿಸ್ತರಣೆಯನ್ನು ಮಾತ್ರವೇ ಕುರಿತು ಯೋಚಿಸುವುದಿದ್ದರೆ ಈ ಕತೆಯ ಸಂದಿಗ್ಧಗಳು ಮುಖ್ಯವಲ್ಲ. ಇಂತಹ ಸನ್ನಿವೇಶವನ್ನು ಸಮಾಜಶಾಸ್ತ್ರಜ್ಞರು ಚರಿತ್ರಕಾರರು ಗಮನಿಸುವ ರೀತಿಯೇ ಬೇರೆ. `ಸಂವಾದ' ಮಾಸಿಕದಲ್ಲಿ ಪ್ರಕಟವಾದ ಚಂದ್ರಭಾನ್ ಪ್ರಸಾದ್‌ರ `ದಲಿತ್ ಡೈರಿ' ಯ ವಿಚಾರಗಳನ್ನು ಈ ಕತೆಯ ನಿಲುವು, ದಿಟ್ಟತನಗಳೊಂದಿಗೆ ಹೋಲಿಸಿ ನೋಡಬಹುದು. ಹೊಸ ಸನ್ನಿವೇಶದ ಸಂಕೀರ್ಣತೆಯನ್ನು ಚಂದ್ರಪ್ರಸಾದ್ ಗಮನಿಸುತ್ತಾರೆ. ಗಮನಿಸುವ ಸ್ತರ ಮಾತ್ರ ಬೇರೆ. ಆಗಸ್ಟ್ ೨೦೦೮ರ ಸಂಚಿಕೆಯಲ್ಲಿ ಬರೆದ ಈ ಮಾತುಗಳು ಈ ಕತೆಯ ಸಂದರ್ಭದಲ್ಲಿ ಗಮನಿಸಬೇಕಾದ್ದು. `ಎರಡು ಕಾರಣಗಳಿಗಾಗಿ ಈಗ ಸಮಯ ದಲಿತರ ಪರವಾಗಿದೆ. ಮೊದಲನೆಯದಾಗಿ ಅಭೂತಪೂರ್ವವಾದ ಆರ್ಥಿಕ ವಿಸ್ತರಣೆಯ ಪರಿಣಾಮವಾಗಿ ಜಾತಿಯ ಹಂಗಿಲ್ಲದ ಸಾವಿರಾರು ವೃತ್ತಿಗಳು ಅಸ್ತಿತ್ವಕ್ಕೆ ಬರುತ್ತಿವೆ. ಎರಡನೆಯದಾಗಿ ದಲಿತರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಗಣನೀಯವಾಗಿ ಆಸ್ತಿಯ ಒಡೆತನ ಇಲ್ಲದಿರುವುದರಿಂದ ನಗರ ಪ್ರದೇಶಗಳಿಗೆ ಅವರು ಸುಲಭವಾಗಿ ವಲಸೆ ಬರಬಹುದಾಗಿದೆ.' (ಸಂವಾದ, ಆಗಸ್ಟ್ ೨೦೦೮, ಪುಟ ೪೬) ಈ ವಿಶ್ಲೇಷಣೆಯ ಭರದಲ್ಲಿ ನಾವು ಮರೆಯಬಾರದ ಇನ್ನೂ ಒಂದು ಸಂಗತಿಯಿದೆ. ಮನುಷ್ಯನ ಶ್ರಮವನ್ನು ಬೇಡುವ, ಒಪ್ಪಿಕೊಳ್ಳುವ ಎಲ್ಲ ರೀತಿಯ ವೃತ್ತಿಗಳಿಗೂ ತನ್ನದೇ ಆದ ಒಂದು ಸೌಂದರ್ಯ, ಘನತೆ ಇದೆ. ಈ ಸೌಂದರ್ಯ, ಘನತೆ, ಜಾತಿಪದ್ಧತಿ ಮತ್ತು ಸಂಸ್ಕೃತಿ ನಿರ್ದಿಷ್ಟತೆಯನ್ನು ಮೀರಿದ್ದು ಕೂಡ ಆಗಿರುತ್ತದೆ. ಸದ್ಯದ ವಾತಾವರಣದ ತಹತಹದಲ್ಲಿ ಇದನ್ನು ಗಮನಿಸುವ ವ್ಯವಧಾನ ನಮಗಿಲ್ಲದೆ ಇರಬಹುದು.

`ಒಂದು ಸಂಬಂಧದ ದಾಖಲೆ' ಇನ್ನೊಂದು ರೀತಿಯ ಸಾಂಸ್ಕೃತಿಕ ಸಂದಿಗ್ಧವನ್ನು ಇನ್ನೂ ಸಂಕೀರ್ಣ ನೆಲೆಗಳಲ್ಲಿ ಪರಿಶೀಲಿಸುತ್ತದೆ. ಕೆಳವರ್ಗದ ಜನರ ಒಡನಾಟವನ್ನು, ಜೀವನಶೈಲಿಯನ್ನು, ಅವರ ಕತೆಗಳನ್ನು, ಅವರು ಹೇಳುವ ಕತೆಗಳನ್ನು ಮೇಲುವರ್ಗದವರು ತಮ್ಮ Psychological ಮತ್ತು Moral fillingಗಾಗಿ ಉಪಯೋಗಿಸಿಕೊಳ್ಳುವ ಸೂಕ್ಷ್ಮ ದುರಂತವನ್ನು ಮತ್ತು ಈ ರೀತಿಯ `ತುಂಬಿಕೊಳ್ಳುವಿಕೆ'ಯನ್ನು ಕೆಳವರ್ಗದವರು ಹಿಂತಿರುಗಿಸಿದಾಗ ಮೇಲುವರ್ಗದವರಲ್ಲಿ ಮೂಡುವ ಕಂಗಾಲುತನವನ್ನು ಈ ಕತೆ ಶೋಧಿಸುತ್ತದೆ. ಈ ತುಂಬಿಕೊಳ್ಳುವಿಕೆ ನಮ್ಮ ಸಾಮಾಜಿಕ ಸನ್ನಿವೇಶದ ಬೇರೆ ಬೇರೆ ಅವಸ್ಥೆಗಳಲ್ಲಿ ಯಾವ ರೀತಿ ನಡೆಯುತ್ತದೆ ಎಂಬುದರ ದಾಖಲೆ ಕೂಡ ಇಲ್ಲಿದೆ. ಮೊದಲನೆಯ ಪೀಳಿಗೆಯಲ್ಲಿ ಕೂಡ ಅನುಚರನಂತೆ ಕಾಣುವ ಕರಿಯಣ್ಣನ ತಂದೆ ನಿರೂಪಕನ ತಂದೆಗೆ ಆತ್ಮವಿಶ್ವಾಸ ತುಂಬುತ್ತಾನೆ. ಆದರೆ ಈ ತುಂಬುವಿಕೆ Psychological filling ಎಂದು ಗೊತ್ತಾಗದಷ್ಟು ಸರಳಗ್ರಹಿಕೆ ಆ ಕಾಲಮಾನದ್ದು. ಕರಿಯಣ್ಣ- ನಿರೂಪಕ - ರುದ್ರಮೂರ್ತಿಯ ಪೀಳಿಗೆಯಲ್ಲೂ ಕೂಡ ಕರಿಯಣ್ಣನ ವ್ಯಕ್ತಿತ್ವದ ಮಾತುಕತೆಯೇ ನಿರೂಪಕನಿಗೆ ಆಕರ್ಷಣೆ. `ತುಂಬಿತ್ತು, ಹಬ್ಬಿಹೋಗುತ್ತಿದ್ದ, ಆವರಿಸಿದ್ದಕ್ಕೆ' ಇಂತಹ ಪದಗಳ ಬಳಕೆಯನ್ನು ಗಮನಿಸಬಹುದು. ಈ ಸಾಲುಗಳನ್ನು ಗಮನಿಸಿ:

`ಈ ಗಮಾರನನ್ನೇಕೆ ಇಷ್ಟೊಂದು ಇಷ್ಟಪಡ್ತಿದೇನೆ ಎಂದು ನಾನು ಚಿಂತಿಸಿದೆ. ಕರಿಯಣ್ಣನ ಮಾತು, ಕತೆ, ಕನ್ನಡ ಗಾದೆಗಳ, ನುಡಿಕಟ್ಟಿನ ಗತ್ತು ಎಲ್ಲವನ್ನು ಮೀರಿದ್ದು ಅವನ ಆಳದಲ್ಲಿದ್ದ ನೆಮ್ಮದಿಯ ಚೇತನ..... ನಮ್ಮ ಎಲ್ಲ ಉದ್ವಿಗ್ನತೆಯನ್ನು ನೇವರಿಸಿ ಇಲ್ಲವಾಗಿಸಿ ಪ್ರೀತಿಯನ್ನು ಸ್ಫುರಿಸುವ ಯಕ್ಷಿಣಿ.....ದಪ್ಪ ಮೂಗಿನ ಪಕ್ಕದ ಕೆನ್ನೆ, ಕತ್ತಿನ ಸುಕ್ಕು, ಕಣ್ಣಿನ ಹೊಳಪು.....ನಿರಿಗೆಯ ರೆಕ್ಕೆಗಳು.'

`ಕರಿಯಣ್ಣನ ಕತೆಗಳಿಲ್ಲದೆ ನಾನು ಕಾಲ ಕಳೆಯುವುದೇ ಕಷ್ಟ ಎನಿಸಿತು.'

ಕರಿಯಣ್ಣನ ಮಗನ ಬೆಳವಣಿಗೆಯಿಂದ ಕರಿಯಣ್ಣ ಮತ್ತು ನಿರೂಪಕ ಇಬ್ಬರೂ ಕಂಗಾಲು. ಮಗ ಸುರೇಶ ಈ `ತುಂಬಿಕೊಳ್ಳುವಿಕೆ'ಯನ್ನು Reverseಮಾಡುವಷ್ಟು ಸಮಾಜ ಬದಲಾಗುತ್ತದೆ. ಮೇಲುವರ್ಗದವರನ್ನು ಕೀಳಂದಾಜಿನಲ್ಲಿ ಕಾಣುವುದು, ಗೇಲಿ ಮಾಡುವುದು, ಹಿಂಸೆಗೆ ಒಳಪಡಿಸುವುದು, ಇದುವರೆಗೆ ಶೋಷಣೆಗೆ ಒಳಗಾಗಿದ್ದವರು moral and psychological filling ಮಾಡಿಕೊಳ್ಳುವ ರೀತಿ. ಈ ಸುರೇಶ ನಿರೂಪಕನಿಗೆ ಕಪ್ಪಗೆ, ಕ್ರೂರವಾಗಿ ಕಾಣುತ್ತಾನೆ. ಸುರೇಶ `ತುಂಬಿಕೊಳ್ಳುವಿಕೆ'ಯನ್ನು Reverse ಮಾಡುತ್ತಾನೆ ಮಾತ್ರವಲ್ಲ - ತಂದೆಯ ತುಂಬಿಕೊಳ್ಳುವಿಕೆಯ ಬಗ್ಗೆ ಅಸಹ್ಯ ಪಟ್ಟುಕೊಂಡು ಪ್ರತಿಭಟಿಸುತ್ತಾನೆ ಕೂಡ.

ವಿಚಿತ್ರ ಸೆಳವುಗಳನ್ನುಳ್ಳ ಗಟ್ಟಿ ನಿಲುವಿನ ಕತೆಯಿದು. ಇಂತಹುದೇ ಸಂದರ್ಭವನ್ನು ಲಂಕೇಶ್ ಕಲ್ಲು ಕರಗುವ ಸಮಯ ಮತ್ತು ಉಲ್ಲಂಘನೆಯಂತಹ ಕತೆಗಳಲ್ಲಿ ಗ್ರಹಿಸಲು ಪ್ರಯತ್ನಿಸಿದ್ದಿದೆ. ಗ್ರಹಿಕೆ ಮಾತ್ರ ಭಾವನಾತ್ಮಕ ಲಯಗಳಿಂದ ಕೂಡಿದ್ದು ಕತೆಗಳ ಆಶಯ ನಮ್ಮ ಕಾಲದ ಸಾಮಾಜಿಕ ಅಪೇಕ್ಷೆಗಳಿಗನುಗುಣವಾಗಿ ಇರುವುದರಿಂದ ನಾವು ಒಪ್ಪಿರಬಹುದು. ಈ ಎರಡೂ ಕತೆಗಳಲ್ಲೂ ಇರುವ wish fulfilment- ಓದುಗನದ್ದು ಮತ್ತು ಲೇಖಕನದ್ದು - ಗುಣವನ್ನು ಕೂಡ ಗಮನಿಸಬೇಕು. ಆದರೆ ಈ ಕತೆ ಇಂತಹ wish fulfilmentನ್ನು ಪ್ರಶ್ನಿಸುತ್ತದೆ. ಈ ಪ್ರಶ್ನಿಸುವ ಛಾತಿ ಕತೆಯ ಒಡಲಿನಿಂದಲೇ ಮೂಡಿ ಬಂದಿದೆ.

ನಮ್ಮ ಕುತೂಹಲಕ್ಕಾಗಿ ಸಾಂಪ್ರದಾಯಿಕ ಸಂವೇದನೆಯವರೆಂದು ನಾನು ತಿಳಿದಿರುವ ಮಾಸ್ತಿಯಂತಹ ಲೇಖಕರು ಈ ಸನ್ನಿವೇಶವನ್ನು ಹೇಗೆ ಗ್ರಹಿಸುತ್ತಾರೆಂದು ನೋಡಬಹುದು. ಕರಿಯಣ್ಣನಂತವರ ಪಾತ್ರಗಳನ್ನು ಮಾಸ್ತಿ ಪ್ರತಿನಿಧೀಕರಣಕ್ಕೆ ಒಳಪಡಿಸುವುದೇ ಇಲ್ಲ. ವೆಂಕಟಿಗ, ವೆಂಕಟಶಾಮ, ಬೈಚೇಗೌಡ, ಜೋಗ್ಯೋರ ಅಂಜಪ್ಪ ಇವರೆಲ್ಲರನ್ನು ಮಾಸ್ತಿ ಒಂದು ವರ್ಗದ ಪ್ರತಿನಿಧಿಗಳಾಗಿ ಕಾಣುವುದಕ್ಕಿಂತ ಮನುಷ್ಯ ಮಾತ್ರರಾದವರು ಕಷ್ಟ ಸುಖವನ್ನು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಎದುರಿಸುವ ವ್ಯಕ್ತಿಗಳನ್ನಾಗಿ ನೋಡುತ್ತಾರೆ. ನವ್ಯ ಚಳುವಳಿಯ ನಂತರ ಪಾತ್ರಗಳನ್ನು ಪ್ರಾತಿನಿಧಿಕವಾಗಿ, ಸಾಂಕೇತಿಕವಾಗಿ, ರೂಪಕವಾಗಿ ಗ್ರಹಿಸುವುದು ಪ್ರಾರಂಭವಾಯಿತು. `ಭಾರತೀಪುರ'ದಂತಹ ಕಾದಂಬರಿ ಹೊಸ ಸನ್ನಿವೇಶವನ್ನು ಪ್ರತಿನಿಧೀಕರಣವನ್ನು (representataion) ಗೃಹೀತವಾಗಿ ಸ್ವೀಕರಿಸಿ ಇದರಿಂದಾಗಿ ಪ್ರಜ್ಞೆಯ ಮೇಲಾಗುವ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಶೋಧಿಸಲು ಪ್ರಯತ್ನಿಸುತ್ತದೆ. ಇಂತಹ ಪ್ರಯತ್ನಗಳಿಗೆ ಅಪವಾದವಿಲ್ಲವೆಂದಲ್ಲ. ರಾಘವೇಂದ್ರ ಖಾಸನೀಸರ `ತಬ್ಬಲಿಗಳು' ಓದುವಾಗ ಅಪ್ಪಿತಪ್ಪಿ ಕೂಡ ನಮ್ಮ ಮನಸ್ಸಿನಲ್ಲಿ ಪ್ರತಿನಿಧೀಕರಣದ ಛಾಯೆ ಜಾಗೃತವಾಗುವುದಿಲ್ಲ. ನಮ್ಮಂತಹ ಸಾಂಸ್ಕೃತಿಕ ಸಂದಿಗ್ಧದಲ್ಲಿ ಬದುಕುತ್ತಿರುವ ದಕ್ಷಿಣ ಆಫ್ರಿಕಾದ ಬರಹಗಾರ ಕುತ್ಸೆಯ Disgrace ಕಾದಂಬರಿ ಕೂಡ ಪ್ರತಿನಿಧೀಕರಣದಿಂದಾಚೆ ಕೈ ಚಾಚುತ್ತದೆ. ಕನ್ನಡದ ಮಟ್ಟಿಗೆ ಈಗ ಇದೆಲ್ಲ ಹಳೆಯ ಸಮಾಚಾರ. ನಿಜಜೀವನದಲ್ಲೂ, ಸಾಹಿತ್ಯ ಕೃತಿಗಳ ಓದಿನಲ್ಲೂ ಮನುಷ್ಯರು ಈಗ ನಮಗೆ ಸಾಮಾಜಿಕ ಚಹರೆಗಳಾಚೆ ಕಾಣುವುದೇ ಇಲ್ಲ. ಬ್ರಿಟಿಷರನ್ನು ಕೂಡ ಬ್ರಿಟಿಷರನ್ನಾಗಿ ನೋಡಲು ನಿರಾಕರಿಸುತ್ತಿದ್ದ ಗಾಂಧಿ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಲಂಕೇಶರ ಈ ಕತೆಗೆ ಇನ್ನೂ ಹೆಚ್ಚಿನ ಓದಿನ ಸಾಧ್ಯತೆಗಳಿವೆಯೆಂದು ನಾನು ತಿಳಿದಿದ್ದೇನೆ.

ಲಂಕೇಶರ ಜೀವನ ದೃಷ್ಟಿಕೋನದ ಬಗ್ಗೆ ಇಲ್ಲಿಯ ಎಲ್ಲಾ ಕತೆಗಳನ್ನು ಒಟ್ಟಾಗಿಯೇ ನೋಡುತ್ತಾ ಕೆಲವು ಪ್ರಶ್ನೆಗಳನ್ನು ಎತ್ತಬೇಕೆನಿಸುತ್ತದೆ. ಈ ಕತೆಗಳು ಲೇಖಕರ ಕೊನೆಯ ಕತೆಗಳಾಗಿರುವುದರಿಂದ, ಜೀವನದ ಕೊನೆ ಮತ್ತು ನಾವು ಬರಹದ ಹಿಂದೆ ಎಲ್ಲೋ ಹೊಂಚುಹಾಕುತ್ತಿರುವ ಭಾವವನ್ನು ಓದುಗರಲ್ಲಿ ಹುಟ್ಟಿಸುವುದರಿಂದ ಈ ಪ್ರಶ್ನೆಗಳನ್ನು ಕೇಳಲೇಬೇಕಾದ್ದು ಅನಿವಾರ್ಯ.

ಇಲ್ಲಿಯ ಕತೆಗಳ ನಾಯಕರು, ನಿರೂಪಕರು - ಎಲ್ಲರೂ ನಿವೃತ್ತರು, ಇಳಿವಯಸ್ಸಿನವರು. ಪದೇ ಪದೇ ಇದರ ಪ್ರಸ್ತಾಪ ಬರುತ್ತದೆ. ಬದುಕಿನ ಸಂದಿಗ್ಧತೆಯ ತೀವ್ರ ಅರಿವು ಇರುವಂತೆಯೇ ಬದುಕಿನಿಂದ ಸುಸ್ತಾದ, ಖೇದಗೊಂಡ, ಹತಾಶೆಗೊಂಡ ಭಾವನಾವಿನ್ಯಾಸ ಎಲ್ಲ ಕತೆಗಳ ಹಿಂದೂ ಇದೆ. ದೇಹದ ವಿಹ್ವಲತೆ, ವಯಸ್ಸಾಗುವಿಕೆಯ ಬಗ್ಗೆ ಇಳಿವಯಸ್ಸಿಗೂ ಹೆಚ್ಚೆನ್ನುವಷ್ಟು ಹಚ್ಚಿಕೊಳ್ಳಲಾಗಿದೆ. ಶೋಧನೆಗೆ ಭೂಮಿಕೆಯನ್ನು ಸೃಷ್ಟಿಸಿಕೊಳ್ಳಲು ಈ ರೀತಿಯ ಭಾವವಿನ್ಯಾಸವನ್ನು ಲೇಖಕ ಪೂರ್ವಪಕ್ಷವಾಗಿ ಸೃಷ್ಟಿಸುತ್ತಿದ್ದಾನೆ ಎಂಬ ಮಾತನ್ನು ಒಪ್ಪುವುದು ಕಷ್ಟ. ಏಕೆಂದರೆ ಒಂದೇ ರೀತಿಯ ಗ್ರಹಿಕೆ ನಿಲುವು ಎಲ್ಲ ಕತೆಗಳಲ್ಲೂ ವ್ಯಕ್ತವಾಗುತ್ತದೆ. ಈ ಮಾತುಗಳನ್ನು ಗಮನಿಸಿ:

ಎಲ್ಲ ಸಂಬಂಧಗಳು ಉಂಟು ಮಾಡುವ ವೇದನೆ (ಪುಟ ೬೧)

ಆಲಿಂಗನದ ಮಹಾ ಕಿಚ್ಚಿನಲ್ಲಿ ಮಾತ್ರ ಸಂಸಾರದ ತಣ್ಣನೆಯ ಸ್ಪರ್ಶದ ನರಕ ತಿಳಿಯುತ್ತಿದೆ. ಹುಟ್ಟಿಸಲಾರದ, ರೂಪಿಸಲಾರದ ನಿಷ್ಠೆ ಮನುಕುಲದ ಅನೇಕಾನೇಕ ಅನಗತ್ಯ ಗಂಟೆಗಳಂತೆ ಕಾಣತೊಡಗುತ್ತದೆ. ಪ್ರೇಮ, ಕಾಮ, ಮಿಥುನ ಎಲ್ಲವೂ ಬರೀ ಮಾತುಗಳು (ಪುಟ ೫)

ಹೆಸರು ಹಿನ್ನೆಲೆ ನೆನಪು ಎಲ್ಲವನ್ನೂ ತೊಳೆದು ಹಾಕಿ ದೇಹದ ಮಟ್ಟದಲ್ಲಿ ಬದುಕಿದರೆ.....(ಪುಟ ೧೮)

ನಾಗರೀಕತೆಯ ಕ್ಲಿಷ್ಟ ಹಂದರ ವಿಸ್ಮಯಗೊಳಿಸುತ್ತಿತ್ತು (ಪುಟ ೩೭)

ಎಲ್ಲದರಿಂದ ತಪ್ಪಿಸಿಕೊಳ್ಳಬೇಕೆಂದು ಮಾಡಿದ್ದ ನಿರ್ಧಾರ (ಪುಟ ೫೮)

ಇಂಥ ಮಹಾವೃದ್ಧಾಪ್ಯ ಜಟಿಲವಾದ್ದು. ಅಲ್ಲಿ ಸುಸ್ತಿನಿಂದಾಗಿಯೇ ಬಂದ ಮಹಾ ವಸ್ತುನಿಷ್ಠೆ ಇರುವಂತೆಯೇ ಅಚ್ಚರಿಗೊಳಿಸುವ ಹೊಸ ವಿಷಯಗಳನ್ನು ಕೇಳಲು ಆಶಯವಿರುತ್ತದೆ. (ಪುಟ ೭೭)

ಈ ಧೋರಣೆ ಮತ್ತೆ ಮತ್ತೆ ಎನ್ನುವಂತೆ ಮರುಕಳಿಸುವುದರಿಂದ ಬದುಕಿನ ಸಾರ್ಥಕತೆ ಮತ್ತು ಪೂರ್ಣತೆ ಬಗ್ಗೆ ಇದು ಏನನ್ನು ಸೂಚಿಸುತ್ತದೆ? ದೇಹ ಮನಸ್ಸು ತಾನು-ಅನ್ಯರು, ಸಾವು-ಬದುಕು, ಕ್ಷಣ-ಅನಂತ ಇವುಗಳ ನಡುವೆ ಇರುವ ವೈರುಧ್ಯವನ್ನು ಪ್ರತಿಯೊಬ್ಬ ಮನುಷ್ಯನೂ ತನ್ನ ಅನುಭವದ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡು ಮಾಗುತ್ತಾ ಹೋಗುತ್ತಾನೆ. ಇಂತಹ ಮಾಗುವಿಕೆಯ ಬಗ್ಗೆ ಲಂಕೇಶರಿಗೆ ನಂಬಿಕೆಯಿಲ್ಲವೆನಿಸುತ್ತದೆ. ಈ ಮಾಗುವಿಕೆಗೆ ಅಗತ್ಯವಾದ ಒಂದು ನಿರ್ದಿಷ್ಟ ವ್ಯಕ್ತಿತ್ವವನ್ನು ಇವರ ಪಾತ್ರಗಳು ಇಳಿವಯಸ್ಸಾದರೂ ತಲುಪದೇ ಇರುವುದು, ಇನ್ನೂ ಇವರ ವ್ಯಕ್ತಿತ್ವಗಳು ನಿರ್ಮಾಣಗೊಳ್ಳುವ ಹಪಾಹಪಿಯಲ್ಲೇ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ. ಇವರ ಪಾತ್ರಗಳಿಗೆ ಸೃಜನಶೀಲ ಮಾಗುವಿಕೆಯೆಂಬುದು ಇಲ್ಲ. ಒಟ್ಟು ಸಂಕಲನದಲ್ಲಿ ಮುಂದಿನ ಪೀಳಿಗೆಯೆಂಬುದೇ ಇಲ್ಲವೇನೋ ಅನಿಸುತ್ತದೆ. ತನ್ನ ಜೊತೆಯೂ, ಮುಂದಿನ ಪೀಳಿಗೆಯ ಜೊತೆಯೂ, ಸುತ್ತಲ ಬದುಕಿನ ಜೊತೆಗೂ ಆತ್ಮೀಯತೆಯನ್ನು ಅನುಭವಿಸಲಾಗದ ಸ್ಥಿತಿಯಲ್ಲಿ ಸ್ಥಾಯಿಯಾಗಿ ನಿಂತ ಪಾತ್ರಗಳು ಇವು. ಲೇಖಕನೊಬ್ಬನ ದೃಷ್ಟಿಕೋನ ಹೀಗೇ ಇರಬಹುದಾದರೆ ತಪ್ಪೇನು ಎಂಬ ಪ್ರಶ್ನೆ ಸರಿಯೇ. ಆದರೆ ಈ ದೃಷ್ಟಿಕೋನ ಬದುಕಿನ ಪೂರ್ಣತೆ, ಸಾರ್ಥಕತೆ ಮತ್ತು ಒಟ್ಟಾರೆ ಜೀವನ ಸಫಲತೆಯ ಬಗ್ಗೆ ಏನನ್ನು ಹೇಳುತ್ತದೆ ಎಂದು ಗಮನಿಸಬೇಕಾದ್ದು ಕೂಡ ವಿಮರ್ಶೆಯ ವ್ಯಾಪ್ತಿಯಲ್ಲಿ ಬರುತ್ತವೆಂದು ನಾನು ನಂಬಿದ್ದೇನೆ.

ಮೇಲಿನ ಸಂಗತಿಗೂ ಲಂಕೇಶರಿಗೆ epiphancy(ಸತ್ಯದರ್ಶನ, ಸಾಕ್ಷಾತ್ಕಾರ)ಯ ಸ್ವರೂಪದ ಬಗ್ಗೆ ಇರುವ ನಂಬಿಕೆಗೂ ಸಂಬಂಧವಿದೆಯೆನಿಸುತ್ತದೆ. ಸತ್ಯದರ್ಶನವೆಂಬುದು ಲಂಕೇಶರಲ್ಲಿ ಚಿಂತಾಮಣಿಯಲ್ಲಿ ಯಾವುದೋ ಒಂದು ದಿವ್ಯ ಘಳಿಗೆಯಲ್ಲಿ ಕಾಣುವ ಮುಖವಲ್ಲ. ಕ್ರಮೇಣವಾಗಿ ಪ್ರಜ್ಞೆ ವಿಕಾಸವಾಗುವ ಹನುಮದ್ವಿಕಾಸವೂ ಅಲ್ಲ. ಒಂದು ಒತ್ತಡದಲ್ಲಿ, ಒಂದು ಒತ್ತಾಯದಲ್ಲಿ ಮನುಷ್ಯ ತನ್ನ ನಿಜಸ್ವಭಾವವನ್ನು, ವ್ಯಕ್ತಿತ್ವವನ್ನು ತಿಳಿಯುತ್ತಾನೆ. ಈ ರೀತಿಯ ಒತ್ತಡ, ಒತ್ತಾಯವನ್ನು ಸೃಷ್ಟಿಸಿ ಮನುಷ್ಯನನ್ನು ಅದಕ್ಕೆ ಮುಖಾಮುಖಿಯಾಗಿಸುವುದು ಅದಕ್ಕಾಗಿ ಅನಾವರಣಗೊಳಿಸುತ್ತಾ ಹೋಗಬೇಕಾದ್ದು ಲಂಕೇಶರ, ಅವರ ನಿರೂಪಕರ, ನಾಯಕರ ಗುರಿ. ಜೊತೆಗೆ ಇಂತಹ ವಾತಾವರಣವನ್ನು, ಒತ್ತಡವನ್ನು ಸೃಷ್ಟಿ ಮಾಡುವವನು ನೈತಿಕ ಉತ್ತಮಿಕೆಯಿಂದಲೂ ಕೂಡಿರುತ್ತಾನೆ. ಈ ಮಾದರಿ ಲಂಕೇಶರ `ತೆರೆಗಳು' ನಾಟಕದಿಂದ, ಪ್ರಾರಂಭದ ಕತೆಗಳಿಂದ, ಕೊನೆತನಕದ ಎಲ್ಲ ಬರಹಗಳಲ್ಲೂ ವ್ಯಕ್ತವಾಗುತ್ತದೆ. ಕತೆಗಳು ಹೀಗೆ ಸೃಷ್ಟಿಯಾಗುವ ಒತ್ತಡ-ಒತ್ತಾಯಗಳನ್ನು ನಿರೂಪಿಸುತ್ತಾ ಹೋಗಿ ಕೊನೆಯಲ್ಲಿ ಪಡೆಯುವ ತಿರುವಿನಲ್ಲಿ ಸತ್ಯದ ಕಡೆಗೆ ಮುಖ ಮಾಡುತ್ತವೆ. ಜೊತೆಗಾರ, ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ ಇಂತಹ ಕತೆಗಳಲ್ಲಿ ಈ ಅನಾವರಣ ವ್ಯವಧಾನದಲ್ಲಿ, ಧ್ವನಿಪೂರ್ಣವೂ ವಿವರವೂ ಆದ ನಿರೂಪಣೆಯಲ್ಲಿ ನಡೆದರೆ ಇಲ್ಲಿನ ಕತೆಗಳ ಓಘಕ್ಕೆ ಅಂತಹ ವ್ಯವಧಾನವಿಲ್ಲವೆನಿಸುತ್ತದೆ. ಲಂಕೇಶರ ಈ ಮಾದರಿಗೆ ನಾವು ಈಗಾಗಲೇ ಒಗ್ಗಿ ಹೋಗಿರುವುದರಿಂದ ಕತೆಯ ನಿರ್ದಿಷ್ಟ ರೀತಿಯ ಕೊನೆಗೆ ಕತೆಗಳು ರೂಢಿಯಿಂದ ಚಲಿಸುತ್ತಿವೆಯೇನೋ ಎಂಬ ಭಾವನೆ ಬರುತ್ತದೆ. ಸಂಕಲನದ ಕೊನೆಯಲ್ಲಿರುವ ಕ್ಷೀಜುವಿನ ಹಠ ಮತ್ತು ಪ್ರೇಮ ಎಂಬ ವಿಸ್ಮಯ - ಈ ಎರಡೂ ಪುನರ್ ಸೃಷ್ಟಿಸಿದ ಕತೆ/ಬರಹಗಳ epiphancyಯ ಸ್ವರೂಪಕ್ಕೆ ಕತೆಯ ವಿವರಗಳಲ್ಲೇ ಒಂದು ರೀತಿಯ ಸಾವಯವ ಸಿದ್ಧತೆಯಿದೆಯೆನಿಸುತ್ತದೆ. ಮತ್ತೆ ಇವೆರಡೂ ಬರಹಗಳು ಮಂಡಿಸುವ ದರ್ಶನ ಇತರ ಕತೆಗಳಿಗೆ ಹೋಲಿಸಿದರೆ open ended ಎನಿಸುತ್ತದೆ.

ಒಂದು ಒತ್ತಡದಲ್ಲಿ ಒತ್ತಾಯದಲ್ಲಿ ಮಾತ್ರ ಮನುಷ್ಯ ಸತ್ಯಕ್ಕೆ ಹತ್ತಿರವಾಗಬಲ್ಲ ಎಂಬ ನಂಬಿಕೆಗೂ ಲಂಕೇಶರಿಗೆ ಪ್ರವೃತ್ತಿಯ ಬಗ್ಗೆ ಇರುವ ಒಲವಿಗೂ ಸಂಬಂಧವಿದೆಯೆನಿಸುತ್ತದೆ. ಈ ಕತೆಯ ಕಲಿತವರು, ನಾಗರೀಕರು ಯಾರೂ ಧ್ಯಾನದಲ್ಲಿ, ಏಕಾಂತದಲ್ಲಿ ಸಾಮಾಜಿಕ ಸಾಹಚರ್ಯದಲ್ಲಿ ಸತ್ಯಕ್ಕೆ ಹತ್ತಿರವಾಗಲಾರರು. ತಟಕ್ಕನೆ ಅವರನ್ನು ಸತ್ಯದ ಕಡೆಗೆ ಹೊರಳಿಸುವಂತಹ ಒತ್ತಾಯವನ್ನು ನಿರ್ಮಾಣ ಮಾಡಬೇಕು. ಮನುಷ್ಯ ತನ್ನ ಪ್ರವೃತ್ತಿಗಳಿಗೆ ಹತ್ತಿರವಾಗಿದ್ದಾಗ ಮಾತ್ರವೇ ಸತ್ಯವನ್ನು ಕಾಣಬಲ್ಲ ಎಂಬ ನಿಲುವಿದು. ಮಂಜು ಕವಿದ ಸಂಜೆ ಕತೆಯ ಮಂಜು ಪ್ರಭುದೇವರ ಕೂಡುವಿಕೆಯ ನಿರೂಪಣೆಯನ್ನು ಗಮನಿಸಿ. A Suicide Note ಕತೆಯ ಈ ಮಾತುಗಳನ್ನು ನೋಡಿ: `ನಾನು ಮನುಷ್ಯಳಾಗಿ ನನ್ನಲ್ಲಿ ಪಶುವನ್ನು ಕಂಡದ್ದು ಆ ಕಾಲದಲ್ಲಿ ಮಾತ್ರ. ನನ್ನಲ್ಲಿನ ಪಶು ನನ್ನ ಹರೆಯದಲ್ಲಿ ಹುಮ್ಮಸ್ಸಿನಿಂದ ಕೂಡಿರುತ್ತದೆ. ನನ್ನ ದಾಹ ಸೂಚಿಸಿದ್ದನ್ನೆಲ್ಲ ಸ್ವೀಕರಿಸುತ್ತದೆ. ಅದಕ್ಕೆ ಪಾಪಪ್ರಜ್ಞೆ ಎನ್ನುವುದಿಲ್ಲ' ಕತೆಯ ಉದ್ದಕ್ಕೂ ಚಿರತೆಯ ಕಣ್ಣು, ಮೃಗ, ರಾಕ್ಷಸ ಇಂತಹ ಪದಗಳು ಸಿಗುತ್ತವೆ. ದೇಹದ ಮಟ್ಟದಲ್ಲಿ ಮಾತ್ರವೇ ಬದುಕುವ ಆಸೆ ವ್ಯಕ್ತವಾಗುತ್ತದೆ ಕತೆಯುದ್ದಕ್ಕೂ.

ಲಂಕೇಶರಲ್ಲಿ ನಾಗರೀಕತೆಯ, ವಿದ್ಯೆಯ, ಹೊಸ ಕಾಲದ ಸಮಾಜದ ಹಂಬಲದ ಜೊತೆಗೇ ಪ್ರಜ್ಞಾವಂತಿಕೆಯ ಜೀವಂತಿಕೆಯ ಬಗ್ಗೆ ಇರುವ ಅನುಮಾನ, ಪ್ರವೃತ್ತಿಯ ಸ್ವಭಾವ ಮತ್ತು ಶಕ್ತಿಯ ಬಗ್ಗೆ ಇರುವ ಒಲವು ಇನ್ನೂ ವಿವರವಾದ ಅಧ್ಯಯನಕ್ಕೆ ವಸ್ತುವಾಗಬಲ್ಲದು. ಲೇಖಕರ ಸಮಗ್ರ ಬರವಣಿಗೆಯ ಹಿನ್ನೆಲೆಯಲ್ಲಿ ಈ ದ್ವಂದ್ವ, ಬಿಕ್ಕಟ್ಟಿನ ಸ್ಥಿತಿಯ ಅರಿವು ಲಂಕೇಶರಿಗೇ ಇರಲಿಲ್ಲವೆಂದಲ್ಲ.

`ಯಾವುದೇ ಧ್ಯೇಯದ ಬಗ್ಗೆ ಮಹಾಏಕಾಗ್ರತೆಯನ್ನು ಅರ್ಪಣಾ ಭಾವವನ್ನು ಸಾಧಿಸಿದರೆ ಮಾತ್ರ ಒಬ್ಬಂಟಿತನ ಸಹ್ಯವಾಗುತ್ತದೆ.' (ಪುಟ ೬೯)

ಆದರೆ ಈ ಅರಿವು ನಾಲ್ಕು ಕಾಲ ನಿಲ್ಲಬಲ್ಲ ಬಲವಾಗಲಾರದೆಂಬುದೇ ಅವರ ನಂಬಿಕೆ.

ನಿರೂಪಿಸಿದ್ದೆಲ್ಲ ಕತೆ ಎಂದು ಭಾವಿಸಿರುವ ಈವತ್ತಿನ ಕಥನ ಸಂದರ್ಭದಲ್ಲಿ ಲಂಕೇಶರ ಕೊನೆಯ ಕತೆಗಳಿಗೆ ತುಂಬಾ ಮಹತ್ವವಿದೆ. ತಲ್ಲಣಗಳನ್ನು, ಹೊಸ ರೀತಿಯ ಅನುಭವಗಳನ್ನು ಎದುರು ಹಾಕಿಕೊಳ್ಳುವ, ಮೇಲೆ ಎಳೆದುಕೊಳ್ಳುವ, ಹಾಗೆ ಮಾಡುವುದರ ಮೂಲಕ ಜೀವನಾನುಭವವನ್ನು ಮೌಲ್ಯಮಾಪನ ಮಾಡುವುದಕ್ಕೆ ಮಾತ್ರ, ಅಂತಹ ಶಕ್ತಿ-ಛಾತಿಯಿದ್ದರೆ ಮಾತ್ರ ಕತೆ ಬರೆಯಬೇಕೆಂಬ ಅವರ ನಂಬಿಕೆಯಿಂದ ಈವತ್ತಿನ ಕತೆಗಾರರು ಕಲಿಯುವುದು ಬಹಳವಿದೆ. ನಿರೂಪಣೆ, ವರ್ಣನೆಯಲ್ಲಿ ಶೋಧನೆಯೂ ಹಾಸು ಹೊಕ್ಕಾಗಿರುತ್ತದಲ್ಲವೇ ಎಂಬ ಪೆದ್ದ ಪ್ರಶ್ನೆ ಕೇಳುವವರಿಗೆ ಇಲ್ಲಿಯ ಕತೆಗಳ ಮಹತ್ವ ದಕ್ಕುವುದಿಲ್ಲ.

(ದೇಶಕಾಲ ತ್ರೈಮಾಸಿಕ ಪತ್ರಿಕೆಯ ಹದಿಮೂರನೆಯ ಸಂಚಿಕೆ (ಅಕ್ಟೋಬರ್-ಡಿಸೆಂಬರ್ ೨೦೦೮)ಯಲ್ಲಿ ಪ್ರಕಟಿತ ಲೇಖನ)
ಚಿತ್ರಗಳು: ಅವಧಿ ಅಂತರ್ಜಾಲ ತಾಣ ಮತ್ತು ವಿಕ್ರಾಂತ ಕರ್ನಾಟಕ ವಾರಪತ್ರಿಕೆಗಳ ಕೃಪೆ.
ಮುಂದೆ ಓದಿ....

Sunday, February 22, 2009

ಕುವೆಂಪು ಮತ್ತು ಮತಾಂತರ

ಡಾ||ಎಸ್.ಎಲ್.ಭೈರಪ್ಪನವರಿಂದ ಪ್ರಣೀತಗೊಂಡ ಮತಾಂತರದ ಚರ್ಚೆಯನ್ನು ಈಚೆಗೆ ನಾವೆಲ್ಲ ಗಮನಿಸಿದ್ದಾಯಿತು. ಪ್ರಸಿದ್ಧರು, ಪಂಡಿತರು, ಪ್ರಗತಿಪರರೂ ಭಾಗವಹಿಸಿದ್ದ ಈ ಚರ್ಚೆ ತುಂಬಾ ತೆಳುವಾದ ಪರ-ವಿರೋಧಗಳ ನೆಲೆಯಲ್ಲಿ ನಡೆಯಿತು. ಭಾರತದಲ್ಲಿ ಮಾತ್ರ ಮತಾಂತರ ನಡೆಯುತ್ತಿಲ್ಲ, ನಡೆದಿಲ್ಲ. ಇದೊಂದು ಜಾಗತಿಕ ವಿದ್ಯಮಾನ. ಏಷ್ಯಾ, ಆಫ್ರಿಕಾದ ದೇಶಗಳು ಇತಿಹಾಸದ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಮತಾಂತರದ ಪ್ರಭಾವಕ್ಕೆ ಒಳಗಾಗಿವೆ. ವಸಾಹತುಶಾಹಿ ವಾಣಿಜ್ಯ ನೀತಿ, ವಿಜ್ಞಾನ ಇವುಗಳ ಮೂಲಕ ಮಾತ್ರವಲ್ಲದೆ ಪಶ್ಚಿಮವು ಮತಾಂತರದ ಮೂಲಕವೂ ಈ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಹಾಗಾಗಿ ಇಂತಹ ವಿದ್ಯಮಾನವೊಂದನ್ನು ಪರ-ವಿರೋಧಗಳ ಸರಳೀಕೃತ ನೆಲೆಯಲ್ಲಿ ಗ್ರಹಿಸಲಾಗುವುದಿಲ್ಲ. ಪಶ್ಚಿಮದ ಪ್ರಯತ್ನ-ಪ್ರಯೋಗಗಳನ್ನು ಬದಿಗಿಟ್ಟರೂ ಈ ದೇಶದ ಇತಿಹಾಸದಲ್ಲೇ ಬೇರೆ ಬೇರೆ ಧರ್ಮ-ಮತ-ಜಾತಿಗಳ ನಡುವೆ ಮತಾಂತರ, ಕಿತ್ತಾಟ ನಡೆದಿವೆ. ಈ ಪ್ರಕ್ರಿಯೆಗೆ ಆಧುನಿಕತೆಯ ಸಂದರ್ಭದಲ್ಲಿ ಬೇರೆ ಬೇರೆ ಆಯಾಮಗಳು ಪ್ರಾಪ್ತವಾಗಿವೆ. ಇದನ್ನೆಲ್ಲ ಭೈರಪ್ಪ ಪ್ರಣೀತ ಚರ್ಚೆ ಗಮನಿಸಲೇ ಇಲ್ಲ.

ಈ ಹಿನ್ನೆಲೆಯಲ್ಲಿ ನಮ್ಮ ಕುವೆಂಪು ಈ ಸಮಸ್ಯೆಯನ್ನು ಹೇಗೆ ಗ್ರಹಿಸಿದರು ಎಂಬ ಕುತೂಹಲಕ್ಕಾಗಿ ನಾನು "ಮದುಮಗಳು" ಕಾದಂಬರಿಯನ್ನು ಮತ್ತೆ ಓದಿದೆ. ಕುವೆಂಪು ಬ್ರಾಹ್ಮಣ್ಯದ ಬಗ್ಗೆ, ಜಾತಿಪದ್ಧತಿಯ ಬಗ್ಗೆ, ಹಿಂದೂಧರ್ಮದ ಬಗ್ಗೆ ಇದ್ದ ನಿಲುವು ನಮಗೆಲ್ಲ ಗೊತ್ತೇ ಇದೆ. ಆದರೂ ಕುವೆಂಪು ರೀತಿಯ ಕಲಾವಿದರೊಬ್ಬರು ಸೃಜನಶೀಲ ಒತ್ತಡ-ಚೌಕಟ್ಟಿನಲ್ಲಿ ಈ ವಿದ್ಯಮಾನವನ್ನು ಗ್ರಹಿಸುವ ರೀತಿಯನ್ನು ಓದುಗರ ಗಮನಕ್ಕೆ ತರಬೇಕೆಂದು ನನಗನ್ನಿಸಿತು.

ಕುವೆಂಪುಗೆ ಮತಾಂತರ ಕುರಿತಂತೆ ಪರ-ವಿರೋಧದ ಸರಳೀಕೃತ ನೆಲೆಗಳಿಲ್ಲ. ಈ ವಿದ್ಯಮಾನದ ಸಂಕೀರ್ಣತೆಯನ್ನು ಕುವೆಂಪು ಎಲ್ಲ ಸ್ತರಗಳಲ್ಲೂ ಗಮನಿಸಲು ಪ್ರಯತ್ನಿಸುತ್ತಾರೆ. ಆಮಿಷಗಳ ಮೂಲಕ ದುರ್ಬಲ ಮನಸ್ಸಿನ ಜನರನ್ನು ಮತಾಂತರಗೊಳಿಸುವುದನ್ನು ಕುವೆಂಪು ಒಪ್ಪುವುದಿಲ್ಲ. ಆದರೆ ಮತಾಂತರದಿಂದ ಮೂಡಿಬರುವ ಸಾಮಾಜಿಕ ಚಲನೆ-ತಿಳುವಳಿಕೆ, ಹೊಸ ರೀತಿಯ ಜ್ಞಾನದ ಪ್ರವೇಶ ಇವುಗಳನ್ನು ಸ್ವಾಗತಿಸುತ್ತಾರೆ. ರಾಮಕೃಷ್ಣ-ವಿವೇಕಾನಂದರ ದರ್ಶನವನ್ನು ಒಪ್ಪುವ ಕುವೆಂಪು ಮೂಢನಂಬಿಕೆ, ಜಾತಿಪದ್ಧತಿಯನ್ನು ವಿರೋಧಿಸುತ್ತಾರೆ. ಮತಾಂತರದ ಪ್ರಯತ್ನಗಳು ಇತಿಹಾಸದ
ಒಂದು ಘಟ್ಟದಲ್ಲಿ ಅನಿವಾರ್ಯವೂ, ಅಪೇಕ್ಷಣೀಯವೂ ಆದಂತಹ ಒಂದು ಪ್ರಕ್ರಿಯೆ ಎಂಬುದನ್ನು ಕೂಡ ಸೂಚಿಸುತ್ತಾರೆ. ಇಂತಹ ಸಂಕೀರ್ಣ ನಿಲುವುಗಳನ್ನು ಕಾದಂಬರಿಯ ವಿವರಗಳಿಂದಲೂ ತಿಳಿಯಬಹುದು. ಈ ವಿವರಗಳ ವಿಶೇಹವೆಂದರೆ ಮತಾಂತರದ ಮೌಲಿಕತೆ-ಅನಿವಾರ್ಯತೆಯ ಕಡೆಗೇ ಗಮನ ಕೊಡದೆ ಒಂದು ಕಾಲದ ದೈನಿಕ ಬದುಕಿನ ವಿವರಗಳು, ಆ ಕಾಲದ ಮನುಷ್ಯರ ಆಸೆ-ಆಕಾಂಕ್ಷೆಗಳ ಬಗ್ಗೆ ಕೂಡ ಕಾದಂಬರಿ ಗುಟ್ಟುಗಳನ್ನು ಬಿಟ್ಟುಕೊಡುತ್ತದೆ. ಮತಾಂತರಕ್ಕೆ ಪ್ರಯತ್ನಿಸುವವರ ಆತಂಕ, ಕಷ್ಟಗಳನ್ನು ಕೂಡ ಕುವೆಂಪು ಗಮನಿಸುತ್ತಾರೆ. ಮನುಷ್ಯರ ಚರಿತ್ರೆಗಳಿಂದ ತಪ್ಪಿಸಿಕೊಂಡಾಗ ಇಲ್ಲ ಮನುಷ್ಯರ ಚರಿತ್ರೆಯನ್ನು ಗಮನಿಸದೆ ಹೋದಾಗ ಮಾತ್ರ ನಾವು ಪರ-ವಿರೋಧದ ಸರಳೀಕೃತ ನೆಲೆಗಳಲ್ಲಿ ಮಾತನಾಡುತ್ತೇವೆ. ನಮಗೆ ಇರುವ ತೊಂದರೆಯೆಂದರೆ, ಮನುಷ್ಯ ಚರಿತ್ರೆಯ ಬಗ್ಗೆ ನಮ್ಮ ಗಮನಸೆಳೆಯುವಂತಹ ವೈಯಕ್ತಿಕ ಚರಿತ್ರೆಗಳು ನಮ್ಮಲ್ಲಿ ಇಲ್ಲದೆ ಇರುವುದು. ಕುವೆಂಪು ಕಾದಂಬರಿ, ಕಾರಂತರ `ಚೋಮನ ದುಡಿ' ಯಂತಹ ಕೃತಿಗಳ ಮೂಲಕ ಮಾತ್ರವೇ ನಾವು ಇಂತಹ ವೈಯಕ್ತಿಕ ಚರಿತ್ರೆಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ.

****

ಕ್ರೈಸ್ತಧರ್ಮದ ಪ್ರವೇಶ-ಪ್ರಭಾವವು ಈ ಕಾದಂಬರಿಯ ಒಟ್ಟು ವಿನ್ಯಾಸದೊಂದಿಗೆ ಬೇರೆ ಬೇರೆ ಸ್ತರಗಳಲ್ಲಿ ಹಾಸುಹೊಕ್ಕಾಗಿದೆ. ಸುಮಾರು ೧೮ನೇ ಅಧ್ಯಾಯದಿಂದ ಇದರ ವಿವರಗಳು ನಮಗೆ ಸಿಗುತ್ತವೆ. ಪಾದ್ರಿ ಜೀವರತ್ನಯ್ಯನ ಬೈಸಿಕಲ್ ಸವಾರಿಯ ಬಗ್ಗೆ ಗುತ್ತಿಯೂ ಸೇರಿದಂತೆ ಕೆಳಸ್ತರದ ಜನರಿಗೆ ಕುತೂಹಲ, ವ್ಯಂಗ್ಯ, ತಮಾಷೆ ತುಂಬಿದ ನಿಲುವುಗಳಿವೆ. ಸೈಕಲ್‌ನ ವಿವರಗಳು, ನಾನಾ ಭಾಗವು ಹುಟ್ಟಿಸುವ ಕೌತುಕ, ಸವಾರಿ ಮಾಡುವ ರೀತಿ ಎಲ್ಲವನ್ನೂ ಕುತೂಹಲ-ಅನುಮಾನದಿಂದ ನೋಡುತ್ತಾರೆ. ದೇವಯ್ಯಗೌಡನಿಗೆ "ಕುಡಿಸಿ, ಕುಣಿಸಿ, ಬುದ್ಧಿ ಕೆಡಿಸಿರುವುದು" ಕೂಡ ಇವರಿಗೆ ಗೊತ್ತಿದೆ. ಈ ಪಾದ್ರಿಯ ಪ್ರಭಾವದಿಂದಾಗಿ ಗೌಡನೊಬ್ಬ ಹೊಲೆಯನನ್ನು ಗಾಡಿ ಹೊಡೆಯುವುದಕ್ಕೆ ಇಟ್ಟುಕೊಳ್ಳುವುದು, ಹೊಲೆಯನನ್ನು ಮುಟ್ಟುವುದು ಕೂಡ ಸಾಧ್ಯವಾಗಿರುವುದು ಕೂಡ ಗೊತ್ತಾಗಿದೆ. ಈ ವಿದ್ಯಮಾನದ ಬಗ್ಗೆ ಗುತ್ತಿಯಂಥವರಿಗೆ ಖಚಿತವಾದ ನಿಲುವಿಲ್ಲ ಅಷ್ಟೇ. ದೇವಯ್ಯ ಗೌಡ ಪಾದ್ರಿಯ "ಮಂಕುಬೂದಿ"ಗೆ ಒಳಗಾಗಿರುವುದು, ಪಾದ್ರಿಯ ಮಗಳ ಜೊತೆ ಸಖ್ಯ ಬೆಳೆಸಿ ಲಂಪಟನಾಗಿರುವುದು ಕೂಡ ಇವರ ಚರ್ಚೆಗಳಲ್ಲಿ ಬರುತ್ತದೆ.

ಪಾದ್ರಿ ತರುವ ಬೀಸೋಕಲ್ಲು ನಾಗರಿಕತೆ ತರುವ ಒಂದು ಹೊಸ ವಿವರ-ದೃಷ್ಟಿಕೋನ. ಹಾಗೆಯೇ ಪಾದ್ರಿಯ ವ್ಯಕ್ತಿತ್ವ ಕೂಡ. ಕುವೆಂಪು ಪಾದ್ರಿಯನ್ನು ಇದ್ದಲಿನಷ್ಟು ಕಪ್ಪಗಿದ್ದವನು, ನೇಟಿವ್ ಪಾದ್ರಿಯೆಂದೆಲ್ಲಾ ವಿವರಿಸುತ್ತಾರೆ. ಆತನ ವೇಷ-ಭೂಷಣ, ಚಹರೆಯೆಲ್ಲವೂ ಮೇಲುಜಾತಿಯ ಗೌಡರದ್ದಕ್ಕಿಂತಲೂ ವಿಭಿನ್ನವಾಗಿರುವುದರ ಜೊತೆಗೆ ಆಕರ್ಷಣೀಯವೂ ಕೂಡ ಆಗಿದೆ. ಹೊಲೆಯರ ಬಚ್ಚ ಈಗಾಗಲೇ ಹೊಸ ವ್ಯಕ್ತಿತ್ವ ಪಡೆದ ಸಂಭ್ರಮದಲ್ಲಿದ್ದಾನೆ. ತಮ್ಮ ಜೊತೆ ವಾಸಿಸುವ ಮನುಷ್ಯರನ್ನು ಮುಟ್ಟಲಾಗದವರು ಬೈಸಿಕಲ್‌ಅನ್ನು "ಮುಟ್ಟುತ್ತಾರೆ". ಈ "ಮುಟ್ಟುವ" ಪ್ರಸಂಗ ಮುಂದಿನ ದಿನಗಳಲ್ಲಿ ಕನ್ನಡದ ಬಹುತೇಕ ಕಥನಕಾರರು, ಕವಿಗಳು ಬಹುವಾಗಿ ಹಚ್ಚಿಕೊಂಡ ಒಂದು ವಿದ್ಯಮಾನದ ಆಗಮನವನ್ನು ಮುನ್ನೋಟದಿಂದ ಸೂಚಿಸುತ್ತದೆ. ದೇವರ ವಿಗ್ರಹವನ್ನು, ಸಾಲಿಗ್ರಾಮವನ್ನು ಮುಟ್ಟುವುದು, ಮೇಲುಜಾತಿಯವರನ್ನು ಮೊದಲು ಮುಟ್ಟುವುದು, ನಂತರ ಲೈಂಗಿಕವಾಗಿ, ವೈವಾಹಿಕವಾಗಿ ಒಳಗೊಳ್ಳುವುದು - ಆಕ್ರಮಿಸುವುದು. ಇದೆಲ್ಲಕ್ಕಿಂತ ಮುಂಚೆ ಕೆಳಸ್ತರದವರು ಈ ಕಾದಂಬರಿಯಲ್ಲಿ ಒಂದು "ಯಂತ್ರ"ವನ್ನು ಮುಟ್ಟುವುದು ಕುತೂಹಲಕರವಾಗಿದೆ. ಈ ಬೈಸಿಕಲ್ ಸವಾರಿಯನ್ನು ಹೊಲಗೇರಿಯ ಮುಕ್ಕಾಲುಮೂರುವಾಸಿ ಜನ-ಹೆಂಗಸರೂ-ಮಕ್ಕಳೂ ಸೇರಿದಂತೆ - ನೋಡುತ್ತಾರೆ. ಇಡೀ ಪ್ರಕರಣವನ್ನು ಕುವೆಂಪು, ವ್ಯಂಗ್ಯ, ತಮಾಷೆಯ ಜೊತೆಗೆ ವಸ್ತುನಿಷ್ಠತೆಯಿಂದ ಗಮನಿಸುತ್ತಾರೆ. ವ್ಯಂಗ್ಯ ತಮಾಷೆ ಪಾದ್ರಿಯನ್ನು ಕುರಿತಂತೆ ಮಾತ್ರವಲ್ಲ, ಅದನ್ನು ನೋಡುತ್ತಿರುವವರನ್ನು ಕುರಿತಂತೆಯೂ ಇದೆ. ಪಾದ್ರಿಯನ್ನೂ, ಆತನ ಜೀವನ ದೃಷ್ಟಿಯನ್ನೂ ಕೂಡ ಈ ಹೊಲೆಯರು ಮೌಲ್ಯಮಾಪನ ಮಾಡುತ್ತಾರೆ.

"ಇದು ಎಂಥಾದ್ದೋ ಇವರು ಹೇಳುವುದು? ಕಾಡಿಗೆ ಕೈ ಮುಗಿದು! ಒಂದು ದೇವರಿಲ್ಲ! ಗುಡಿಯಿಲ್ಲ! ನಮ್ಮ ಪೆರಡೂರು ಮೇಳದವರು ಇದಕ್ಕಿಂತಲೂ ಚೆನ್ನಾಗಿ ಹೇಳುತ್ತಾರಲ್ಲ ಭಾಗವತರಾಟದಲ್ಲಿ?" (ಪುಟ ೧೫೯)


೨೨ನೇ ಅಧ್ಯಾಯದಲ್ಲಿ ಕುವೆಂಪು ಕ್ರೈಸ್ತಧರ್ಮದ ಆಗಮನವನ್ನು ಇತಿಹಾಸದ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಇಟ್ಟು ನೋಡಲು ಪ್ರಯತ್ನಿಸುತ್ತಾರೆ. ಪಾದ್ರಿಯ ಚಟುವಟಿಕೆಗಳು-ವಿವೇಕಾನಂದರ ಧಾರ್ಮಿಕ ಪುನರ್‌ಜೀವನದ ಕನಸು-ಇವುಗಳ ನಡುವೆ ಒಂದು ಅಸಮ ಸ್ಪರ್ಧೆಯಿದೆಯೆಂಬುದು ಕುವೆಂಪು ಮಂಡಿಸುವ ಚೌಕಟ್ಟು. ಮತಾಂತರವೆನ್ನುವುದು ಒಂದು ಸ್ಪರ್ಧೆಯೆನ್ನುವ ಭಾವನೆ ಓದುಗರಲ್ಲಿ ಮೂಡುವಂತೆ ಪ್ರತಿಸ್ಪರ್ಧಿ, ಸಿಂಹಕಂಠ, ಖೆಡ್ಡಾ, ಬೇಟೆ - ಇಂತಹ ಪದಗಳನ್ನು ಬಳಸುತ್ತಾರೆ. ಆದರೆ ಇದಕ್ಕೆಲ್ಲ ಕಾರಣವಾಗಿರುವುದು ಇಲ್ಲಿಯ ಬ್ರಾಹ್ಮಣರ ಜೀವನ ರೀತಿ, ಸನಾತನ ಧರ್ಮದ ತಪ್ಪುಗ್ರಹಿಕೆ, ಮೂಢನಂಬಿಕೆ, ಕಂದಾಚಾರವೆಂಬುದನ್ನು ಗುರುತಿಸಿ ಭರ್ತ್ಸನಾಮಯವಾದ ಭಾಷೆಯಲ್ಲಿ ಟೀಕಿಸುತ್ತಾರೆ. ಆದರೆ ಪಾದ್ರಿಯ "ಉಪಯೋಗ" ಮತ್ತು "ಪ್ರಭಾವ" ಚಿನ್ನಪ್ಪ ಗೌಡ, ದೇವಯ್ಯ ಗೌಡರಂತಹ ಹೊಸಕಾಲದ ತರುಣರ ಕ್ರಾಪು, ಬಟ್ಟೆ, ವೇಷಭೂಷಣಗಳಷ್ಟಕ್ಕೆ ಸೀಮಿತವಾಗಿಲ್ಲ. ಪಾದ್ರಿಯ ಇಂಗ್ಲೀಷ್ ಜ್ಞಾನದಿಂದಾಗಿ ಕೂಡ ಆತ ಗೌಡರ ಮನೆಗಳಲ್ಲಿ ಸ್ವಾಗತಾರ್ಹ. ತಕ್ಕಮಟ್ಟಿಗೆ ಇಂಗ್ಲೀಷ್ ಬಲ್ಲ ಪಾದ್ರಿ ಹೊಸ ಕಾನೂನು, ಸರ್ಕಾರದ ವಿವರಗಳನ್ನು ಸಹ್ಯಗೊಳಿಸಬಲ್ಲ, ಪರಿಚಯ ಮಾಡಿಕೊಡಬಲ್ಲ ಏಜೆಂಟ್ ಕೂಡ. ಈ ಅಧ್ಯಾಯದಲ್ಲಿ ಬರುವ ಪಾದ್ರಿಯನ್ನು ಎಲ್ಲಿ, ಯಾರ ಜೊತೆ ಊಟಕ್ಕೆ ಕೂರಿಸಬೇಕು, ಹೇಗೆ ಆತಿಥ್ಯ ನೀಡಬೇಕು ಎಂಬ ಪ್ರಶ್ನೆ ಜಾತಿಪದ್ಧತಿಯಿಂದ ಹೊರಗಿರುವವರನ್ನು ಕೂಡ ಮುಟ್ಟಲು, ಒಳಗು ಮಾಡಿಕೊಳ್ಳಲು ಇರುವ್ ಆಯಾಮಗಗಳ ಕಡೆ ಗಮನ ಸೆಳೆಯುತ್ತದೆ. ಈ ವಿವರಗಳೆಲ್ಲವೂ ತಮ್ಮಷ್ಟಕ್ಕೆ ತಾವೇ ಮತನಾಡುವುದರಿಂದ ಹೆಚ್ಚು ಬರೆಯುವ ಅಗತ್ಯವಿಲ್ಲ.

ಈ ಅಧ್ಯಾಯದ ವಿಶೇಷವೆಂದರೆ ನಮಗೆ ಸಿಗುವ ದೇವಯ್ಯಗೌಡನ ಒಂದು ದಿನದ ವೈಯಕ್ತಿಕ ಇತಿಹಾಸ ಕಾದಂಬರಿ ಪ್ರಕಾರದಲ್ಲಿ ಮಾತ್ರ ಸಾಧ್ಯವಾಗುವಂತಹದು. ಪಾದ್ರಿಯ ಪ್ರಭಾವದಿಂದಾಗಿ ದೇವಯ್ಯನಿಗೆ ತನ್ನ ಜಾತಿಯವರ ರೀತಿ ನೀತಿ ಆಚರಣೆಗಳ ಬಗ್ಗೆ ತಿರಸ್ಕಾರ ಮೂಡಿದೆ. ಆದರೆ ಇಡೀ ಕುಟುಂಬವನ್ನು ಹೊಸ ವಿಚಾರಗಳ ಕಡೆ ಒಲಿಸುವಷ್ಟು ಬೌದ್ಧಿಕ ಸಾಮರ್ಥ್ಯ, ಪ್ರೀತಿ, ವಿವೇಚನೆ ಅವನಿಗಿಲ್ಲ. ಇತರರನ್ನು ಆತ ಕೀಳಾಗಿ ನೋಡಬಲ್ಲ ಮಾತ್ರವಷ್ಟೇ. ಇಂತಹ ದೇವಯ್ಯ ಚೆಲುವು ತುಂಬಿದ ತನ್ನ ಮೋಹದ ಹೆಂಡತಿಯ ಜೊತೆ ಹೇಗೆ ಸೆಟೆದುಕೊಂಡ, ಸೋತ, ಪ್ರೀತಿ ಮಾಡಿದ, ಇಂತಹ ಗಂಡನನ್ನು ಒಲಿಸಿಕೊಳ್ಳಲು ದೇವಮ್ಮ ಯಾವ ರೀತಿ ಆತಂಕಕ್ಕೊಳಗಾದಳು ಎಂಬುದನ್ನು ಸೂಚಿಸುವ ವಿವರಗಳು ಮನೋಜ್ಞವಾಗಿವೆ. ನಮ್ಮ ವೈಚಾರಿಕತೆ-ಆದರ್ಶ ಎಲ್ಲವೂ ಒಂದು ಆಪ್ತ ಭಾವನಾತ್ಮಕ ಸನ್ನಿವೇಶದಲ್ಲಿ ಹೇಗೆ ಪರೀಕ್ಷೆಗೊಳಗಾಗುತ್ತದೆ ಎಂಬುದು ಮುಖ್ಯ. ಎಲ್ಲ ವೈಚಾರಿಕತೆಗಳಿಂದಾಚೆಗೂ ಉಳಿಯುವ ಮನುಷ್ಯ ಪ್ರೀತಿಯ ಸಂಬಂಧದ ಲಯಗಳನ್ನು, ಧ್ವನಿಗಳನ್ನು ಈ ವಿವರಗಳು ಸೂಚಿಸುತ್ತವೆ.

ಇಂತಹ ವಲಯವೊಂದನ್ನು ಪ್ರವೇಶಿಸುವುದಕ್ಕೆ ಕಾದಂಬರಿಕಾರರಿಗೆ ಸಾಧ್ಯವಾಗಿರುವುದರಿಂದಲೇ ಮತಾಂತರದ ವ್ಯಾಪ್ತಿ, ಪ್ರಭಾವ, ಸಾರ್ಥಕತೆ ಬಗ್ಗೆ ಇದಮಿತ್ಥಂ, ಇದು ಸರಿ, ಅದೇ ತಪ್ಪು ಎನ್ನುವ ಧೋರಣೆ ತಳೆಯುವುದು ಸಾಧ್ಯವಾಗುವುದಿಲ್ಲ. ಆಸಕ್ತ ಓದುಗರು ಇಂತಹದೇ ಸಂದರ್ಭಗಳನ್ನು ಕಾರಂತರು ತಮ್ಮ `ಮೈಮನಗಳ ಸುಳಿಯಲ್ಲಿ' , ಭೈರಪ್ಪನವರು `ಆವರಣ' ಕಾದಂಬರಿಯಲ್ಲಿ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಬಹುದು. ನನ್ನ ಸೀಮಿತ ಓದನ್ನೇ ಆಧಾರವಾಗಿಟ್ಟುಕೊಂಡು ಸ್ವಲ್ಪ ಧೈರ್ಯ ಮಾಡಿ ಹೇಳಬಹುದಾದರೆ ಹೊಸ ತಲೆಮಾರಿನ ಬರಹಗಾರರಿಗೆ ಇಂತಹ ಆಪ್ತ ಸನ್ನಿವೇಶಗಳ ನಿರ್ವಹಣೆ ಇಷ್ಟೊಂದು ಧ್ವನಿಪೂರ್ಣವಾಗಿ ಇನ್ನೂ ಸಾಧ್ಯವಾಗಿಲ್ಲ. ಬೇರೆ ಬೇರೆ ಹಿನ್ನೆಲೆಗಳ-ಸಂಸ್ಕೃತಿಗಳ ಗಂಡು ಹೆಣ್ಣುಗಳ ಸಂಬಂಧವನ್ನು ಬಹುಪಾಲು ನಮ್ಮಲ್ಲಿ ಆಶಯಗಳ ಮಟ್ಟದಲ್ಲಿ ಇಲ್ಲ, ಆಸೆಯ ಪೂರೈಕೆ ನೆಲೆಗಳಲ್ಲೇ ಗ್ರಹಿಸಲಾಗುತ್ತದೆ. `ಕುಸುಮಬಾಲೆ' ಕೂಡ ಇದಕ್ಕೆ ಅಪವಾದವೇನಲ್ಲ.

೨೮ನೇ ಅಧ್ಯಾಯವು ಮತಾಂತರಕ್ಕೆ ಸಂಬಂಧಿಸಿದ ಹಾಗೆ ಇನ್ನೊಂದು ನೆಲೆಯನ್ನು ನಮಗೆ ಪರಿಚಯಿಸುತ್ತದೆ. ಕ್ರೈಸ್ತಧರ್ಮೀಯರಿಗೆ ಇಲ್ಲಿಯ ಸಂಸ್ಕೃತಿಯ, ಸ್ಥಾನಿಕ ಜೀವನ ಶೈಲಿ-ಮೌಲ್ಯ ಪದ್ಧತಿಗಳ ಪರಿಚಯವಿರಲಿಲ್ಲ. ಮೇಲು ಜಾತಿಯವರಿಗೆ ಮಾತ್ರ ಸಂಸ್ಕೃತಿ-ನಾಗರಿಕತೆಯಿದೆ, ಉಳಿದವರಿಗೆ ಇಲ್ಲ. ಹಾಗಾಗಿ ಅವರನ್ನೂ ತಮ್ಮ ಪ್ರಭಾವದ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬುದು ಮತಪರಿವರ್ತನಕಾರರಿಗೆಲ್ಲ ಇರುವ ಒಂದು ಗ್ರಹೀತ. ಆದರೆ ಈ ವರ್ಗದ ಜನರಲ್ಲೂ ಇರುವ ಲೋಕದೃಷ್ಟಿ, ಆಚರಣೆಗಳನ್ನು ಕೂಡ ಗಮನಿಸಿ ಮುಖಮುಖಿಯಾಗಬೇಕಾಗುತ್ತದೆ. ಆಫ್ರಿಕಾದ ದೇಶಗಳ ಉದಾಹರಣೆಯನ್ನು ಗಮನಿಸುವುದಾದರೆ ಕ್ರೈಸ್ತಧರ್ಮಕ್ಕೆ ಪರಿವರ್ತನೆಗೊಂಡೂ ಕೂಡ ಜನಾಂಗಗಳು, ಬುಡಕಟ್ಟುಗಳು ತಮ್ಮ ತಮ್ಮ ವಿಶಿಷ್ಟತೆಯನ್ನು ಉಳಿಸಿಕೊಂಡಿವೆ. ನಮ್ಮಲ್ಲು ಇಸ್ಲಾಂ, ಬೌದ್ಧ, ಕ್ರೈಸ್ತಧರ್ಮಕ್ಕೆ ಪರಿವರ್ತನೆಗೊಂಡವರೆಲ್ಲರೂ ತಮ್ಮ ತಮ್ಮ ಸಾಂಸ್ಕೃತಿಕ ವಿಶಿಷ್ಟತೆಯನ್ನು ಉಳಿಸಿಕೊಂಡೇ ಇದ್ದಾರೆ. ಇದೊಂದು ಸಂಕೀರ್ಣವಾದ ಪ್ರಕ್ರಿಯೆ. ಹೊಸದನ್ನು "ಪಡೆಯುವ" "ಒಪ್ಪಿಕೊಳ್ಳುವ" "ಒಳಗೊಳ್ಳುವ" ರೀತಿನೀತಿಗಳು ಒಂದೇ ರೀತಿಯಿರಬೇಕಾಗಿಲ್ಲ. ಮತಾಂತರಗೊಳ್ಳದವರೂ ಕೂಡ ತಮ್ಮ ದಿನನಿತ್ಯದ ಬದುಕಿನಲ್ಲಿ, ಜೀವನಶೈಲಿಯಲ್ಲಿ ಇತರ ಧರ್ಮ-ಸಂಸ್ಕೃತಿಗಳ ವಿವರಗಳನ್ನು ರೂಢಿಸಿಕೊಂಡಿರಬಹುದಲ್ಲವೇ! ಈ ಕುರಿತು ರೊವೆನಾ ರಾಬಿನ್‌ಸನ್ ಎಂಬ ಲೇಖಕಿ: Conversion-Continuity and Change ಎನ್ನುವ ಕೃತಿಯಲ್ಲಿ ವಿಶಿಷ್ಟವಾದ ಒಳನೋಟಗಳನ್ನು ನೀಡಿದ್ದಾರೆ.


ಹಿಂಸೆ, ಬಲವಂತದಿಂದ ಮಾತ್ರವೇ ಜನ ಮತಾಂತರಗೊಳ್ಳುತ್ತಾರೆ ಎಂದು ಭಾವಿಸುವುದು ತಪ್ಪು. ಇದು ಒಂದು ಕಾರಣವಾಗಿರಬಹುದು ಮಾತ್ರವಷ್ಟೇ. ಮತಾಂತರಗೊಳಿಸುವವರು ನೀಡುವ ಸೇವೆ, ಪ್ರಲೋಭನೆಗಳೆಲ್ಲವನ್ನು ಇವರು ನಿಸ್ಸಹಾಯಕತೆಯಿಂದಲೇ ನಿಷ್ಕ್ರಿಯವಾಗಿಯೇ ಸ್ವೀಕರಿಸುತ್ತಾರೆ ಎಂದು ಭಾವಿಸುವುದು ಕೂಡ ತಪ್ಪು. ಏನೇ ಆದರೂ ಮತಾಂತರಗೊಳ್ಳುವವರದು ಕೂಡ ಒಂದಲ್ಲ ಒಂದು ಹಂತದಲ್ಲಿ "ಆಯ್ಕೆ" ಇದ್ದೇ ಇರುತ್ತದೆ. ಮತಾಂತರಕ್ಕೆ ಬೇಕಾದ ಲೌಕಿಕ/ಸಾಂದರ್ಭಿಕ ಒತ್ತಡಗಳನ್ನು ಪರಿವರ್ತನಕಾರರು ಸೃಷ್ಟಿಸುತ್ತಾರೆ ಎಂಬುದನ್ನು ಗಮನಿಸಿಯೂ ಮತಾಂತರದ ಹಿಂದಿರುವ ಆಯ್ಕೆ, ಸಾಮಾಜಿಕ-ಸಾಂಸ್ಕೃತಿಕ ಅಭೀಪ್ಸೆಗಳನ್ನು ಗಮನಿಸಬೇಕಾಗುತ್ತದೆ. ಮಿಷನರಿಗಳ ಉದ್ದೇಶವೂ ಕೂಡ ಹೀಗೇ ಸಂಕೀರ್ಣವಾಗಿರುತ್ತದೆ. ಇವರ ಯೋಜನೆ-ಕಾರ್ಯಕ್ರಮಗಳಲ್ಲಿ ಕೂಡ ಧಾರ್ಮಿಕ, ಆರ್ಥಿಕ, ಸಾಮಾಜಿಕ ಆಯಾಮಗಳ ಕಲಸುಮೇಲೋಗರವಿರುತ್ತದೆ. ಇದನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ಮತಾಂತರದ ಇತಿಹಾಸವನ್ನು ಗಮನಿಸಿದಾಗ ಮಾತ್ರ ನಮಗೆ ಸತ್ಯಕ್ಕೆ ಹತ್ತಿರವಾದ ಚಿತ್ರ ಸಿಗುತ್ತದೆ. ( ಈ ಒಳನೋಟಗಳನ್ನು ಗಮನಿಸಿ ಗೋವಾದ ಸಾಂಸ್ಕೃತಿಕ ಇತಿಹಾಸವನ್ನು ಕುರಿತು ಬರೆದ ಪುಸ್ತಕ -A Daughter's Story-Maria Aurorra Couto ವನ್ನು ಓದುಗರು ಗಮನಿಸಬಹುದು.)

ಈ ಅಧ್ಯಾಯದಲ್ಲಿ ಕುವೆಂಪು ಪಾದ್ರಿಗೆ ಸ್ಥಾನಿಕ ವೈಶಿಷ್ಟ್ಯ ವಿವರಗಳ ಬಗ್ಗೆ ಇರುವ ಮೇಲುಸ್ತರದ ತಿಳುವಳಿಕೆಯನ್ನು ಕೆಳವರ್ಗದವರ ತಿಳುವಳಿಕೆಯೊಡನೆ ಮುಖಾಮುಖಿ ಮಾಡಿ ಗೇಲಿ ಮಾಡುತ್ತಾರೆ. ಈ ಗೇಲಿಯನ್ನು ಮೀರಿದ ಇನ್ನೊಂದು ಆಯಾಮವೆಂದರೆ ಪಾದ್ರಿಗೂ ಇರುವ ಕಷ್ಟ ಮತ್ತು ಹೆಣಗಾಟದ ಸೂಚನೆಗಳು ಇಲ್ಲಿ ನಮಗೆ ಸಿಗುವುದು. ದೇವಯ್ಯ ಪಾದ್ರಿಯನ್ನು ಒಪ್ಪುವುದು, ಮತಾಂತರಗೊಳ್ಳಲು ಸಿದ್ಧವಾಗುವುದು ಇದರ ಹಿಂದಿರುವ ಉದ್ದೇಶಗಳು ಕೂಡ ಪ್ರಾಮಾಣಿಕವಾದುದಲ್ಲ, ಘನವಾದುದಲ್ಲ. ದೇವಯ್ಯ ಕೂಡ ಪಾದ್ರಿಯನ್ನು "ಉಪಯೋಗಿಸಿ"ಕೊಳ್ಳುತ್ತಿರುತ್ತಾನೆ. ನಾವೆಲ್ಲರೂ ಸಮಾನ್ಯವಾಗಿ ಪರಿವರ್ತನಕಾರರ ಉದ್ದೇಶ, ಉಪಾಯ ತಂತ್ರಗಾರಿಕೆಯನ್ನು ಕುರಿತು ಮಾತನಾಡುತ್ತೇವೆ, ಮತಾಂತರಗೊಳ್ಳುವವರೆಲ್ಲ ಮುಗ್ಧರು ಅಮಾಯಕರು ಎಂಬಂತೆ. ಇಂತಹ ತಪ್ಪು ಕಲ್ಪನೆಯನ್ನು ಕೂಡ ಈ ವಿವರಗಳು ಒಡೆದು ಹಾಕುತ್ತವೆ. ಇತಿಹಾಸದಲ್ಲಿ ಮುನ್ನುಗ್ಗುವ, ಮೇಲೆ ಬರುವ ಆಸೆಯಲ್ಲಿ, ಯೋಜನೆಯಲ್ಲಿ ಮತಾಂತರವು ಕೂಡ ಮತಾಂತರಗೊಳ್ಳುವವರಿಗೆ ಒಂದು ಸಾಧನವಾಗಿರಬಹುದು, ಅಸ್ತ್ರವಾಗಿರಬಹುದು.

ನೇಟಿವ್ ಪಾದ್ರಿ, ಕರಿಪಾದ್ರಿಯೆಂದೆಲ್ಲ ಕುವೆಂಪುವಿನಿಂದ ಕರೆಸಿಕೊಳ್ಳುವ ಪಾದ್ರಿಯ ನಿತ್ಯ ಜೀವನದ ಕಷ್ಟಗಳು ಕೂಡ ಕಡಮೆಯೇನಲ್ಲ. ಈತನ ಬಗ್ಗೆ ಕಾದಂಬರಿಕಾರರ ವ್ಯಂಗ್ಯವೇನಿದ್ದರೂ, ಕೃತಿಯ ವಿವರಗಳು ಆತನ ಕಷ್ಟಗಳನ್ನು ಕೂಡ ಗಮನಿಸುತ್ತದೆ. ನೇಟಿವ್ ಪಾದ್ರಿಯಾದ್ದರಿಂದ ಜನರಿಗೆ ಆತನ ಬಗ್ಗೆ ವಿಶೇಷ ಗೌರವಾದರಗಳಿಲ್ಲ. ಅದೆಲ್ಲವೂ `ದೊಡ್ಡಪಾದ್ರಿ', `ಬಿಳಿಪಾದ್ರಿ'ಗೆ ಮೀಸಲು. ಉಪದೇಶಿಯಿಂದ ರೆವರೆಂಡ್ ಸ್ಥಾನಕ್ಕೆ ಬಡ್ತಿ ಪಡೆಯಲು ಹಳ್ಳಿಗರ ಜೊತೆ ಆತ (ಜೀವರತ್ನಯ್ಯ) ಏಗಬೇಕು. ಎಲ್ಲಕ್ಕಿಂತ ಆತನೂ ಮುಖ್ಯವಾಗಿ ಹೆಣ್ಣುಮಗಳೊಬ್ಬಳ ತಂದೆ. ದೇವಯ್ಯನಿಗೆ ಪಾದ್ರಿಯ ಮಗಳೊಡನೆ ಒಡನಾಟ ಆತನ ಲಂಪಟತನದ ಇನ್ನೊಂದು ಭಾಗ. ಮಗಳನ್ನೂ, ಅವಳ ದೇಹವನ್ನೂ, ಪಾದ್ರಿ ತನ್ನ ತಂದೆಯ ಕರ್ತವ್ಯ ನಿರ್ವಹಿಸಲು, ವೃತ್ತಿಯಲ್ಲಿ ಮುಂದೆ ಬರಲು ಮತ ಪರಿವರ್ತನೆಯ ಪುಣ್ಯ ಸಂಪಾದನೆ ಮಾಡಲು ಉಪಯೋಗಿಸಿಕೊಳ್ಳಬೇಕಾದ ಸಂಕಟದಲ್ಲಿದ್ದಾನೆ. ಲೇಖಕರ ಪ್ರಕಾರವೇ "ಆ ಜಾತಿಗೆ ಸೇರಿಸೋ ಹುಚ್ಚು ಬಿಡಿಸದೆ ಇದ್ರೆ ಆಗೋದಿಲ್ಲ ಆ ಪಾದ್ರಿಗೆ! ಬಾಕಿ ಎಲ್ಲ ಒಳ್ಳೆ ಮನುಷ್ಯನೇ!" (ಪುಟ ೪೮೨).

ಕಾದಂಬರಿಯ ಕೊನೆ ಕೊನೆಯ ಅಧ್ಯಾಯದ ವಿವರಗಳು ಕಲಾವಿದ ಕುವೆಂಪುಗಿಂತಲೂ ಹೆಚ್ಚಾಗಿ ವೈಚಾರಿಕ ಕುವೆಂಪುವನ್ನೇ ಮುನ್ನೆಲೆಗೆ ತರುತ್ತವೆ. ಜೊತೆಗೆ ಕತೆಯನ್ನೂ, ಕೃತಿಯನ್ನು ಮುಗಿಸುವ ಒತ್ತಾಯವು ಸೇರಿಕೊಂಡು ಕುವೆಂಪುರವರು ತಮ್ಮ ದರ್ಶನ-ಸಂದೇಶವನ್ನು ನೀಡುವ ಕಡೆಗೇ ಗಮನಕೊಟ್ಟಂತಿದೆ. ರೆವರೆಂಡ್ ಲೇಕ್‌ಹಿಲ್ ಹೇಳುವ ಮಾತುಗಳೆಲ್ಲ ಅಕ್ಷರಶಃ ಕುವೆಂಪು ಮಾತುಗಳೇ. ಲೇಕ್‌ಹಿಲ್ ಬಗ್ಗೆ ಅವರು ಹೇಳುವ ಮಾತುಗಳು ಹೀಗಿವೆ:

"ಕರೀ ಪಾದ್ರಿಯಂತಲ್ಲೋ; ನಿಜವಾಗಿಯೂ ದೊಡ್ಡ ಮನುಷ್ಯನೇ ಕಣೋ ಈ ಬಿಳಿ ಪಾದ್ರಿ" (ಪುಟ ೬೯೮). ಪುಟ ೬೯೭-೬೯೮ರಲ್ಲಿ ರೆವ್‌ರೆಂಡ್ ನೀಡುವ ಪುಟ ಪೂರ್ಣ ಉಪದೇಶ ಕುವೆಂಪು ವಿಚಾರಗಳೇ. ಇಷ್ಟೇ ಅಲ್ಲ ರೆವರೆಂಡ್‌ಗೆ ಮುಕುಂದಯ್ಯ ಕಾಣಿಸಿಕೊಳ್ಳುವ ರೀತಿ ಕೂಡ ಕಾದಂಬರಿಕಾರರ ಪಕ್ಷಪಾತವನ್ನು ಓದುಗರಿಗೆ ನಿವೇದಿಸುತ್ತದೆ:

"ಆದರೆ ಅವನ ಮುಖದಲ್ಲಿ ಅಲ್ಲಿದ್ದವರಾರಲ್ಲಿಯೂ ಇಲ್ಲದಿದ್ದ ಒಂದು ಸತ್ವಪೂರ್ಣ ತೇಜಸ್ಸನ್ನೂ ಸರಳ ಸುಂದರ ಪ್ರಸನ್ನತೆಯನ್ನೂ ದರ್ಶಿಸಿದ "ಲೇಕ್‌ಹಿಲ್"‌ರಿಗೆ (ಪುಟ ೬೯೬).

ಕುವೆಂಪು ಕಾದಂಬರಿಯ ಓದು ಮತಾಂತರದ ಸಂಕೀರ್ಣ ನೆಲೆಗಳನ್ನು ಗ್ರಹಿಸಲು ನಮಗೆ ನೆರವಾಗಬಹುದೆಂದು ನನ್ನ ಇಂಗಿತ. ಪರ-ವಿರೋಧದ ಸರಳ ನೆಲೆಗಳಲ್ಲಿ ನಾವು ಮಾತನಾಡುತ್ತಿದ್ದರೆ ಪರಿವರ್ತನಕಾರರ-ಮತಾಂತರಗೊಳ್ಳುವವರ - ಇಬ್ಬರ ಮನೋಭೂಮಿಕೆಗಳು ನಮಗೆ ತಿಳಿಯುವುದೇ ಇಲ್ಲ. ಸರಿಯಾಗಿ ಹೇಳಬೇಕಾದರೆ, ಕುವೆಂಪು ಮಲೆನಾಡಿನಲ್ಲಿ, ಕಾರಂತ ಕರಾವಳಿಯಲ್ಲಿ ಕಂಡು ಕೃತಿಯಲ್ಲಿ ಶೋಧಿಸಿದ ನೆಲೆಗಳಿಗಿಂತಲೂ ಈವತ್ತು ಮತಾಂತರ ಇನ್ನೂ ಸಂಕೀರ್ಣವಾಗಿದೆ. ಪರಿವರ್ತನಕಾರರು ಮತ್ತು ಮತಾಂತರಗೊಳ್ಳುವವರು - ಎರಡು ದೃಷ್ಟಿಯಿಂದಲೂ ಪರಿವರ್ತನಕಾರರಿಗೆ ಹಿಂದೆಂದೂ ಇಲ್ಲದಷ್ಟು ಹಣ-ಪ್ರಭಾವ- ಸಂಪನ್ಮೂಲಗಳಿವೆ. ಮತಾಂತರಗೊಳ್ಳುವವರಿಗೆ ಮತಾಂತರದ ಜೊತೆಗೆ ಹೆಚ್ಚಿನ ಶಿಕ್ಷಣ-ಉದ್ಯೋಗಾವಕಾಶಗಳ ಆಯ್ಕೆ ಮತ್ತು ಸ್ವಾತಂತ್ರ್ಯವಿದೆ, ಪ್ರಗತಿಯ ಆಸೆಯಿದೆ, ಪ್ರಜಾತಾಂತ್ರಿಕ ಚೌಕಟ್ಟಿದೆ.

ಇಷ್ಟೇ ಮುಖ್ಯವಾಗಿ ಮತಾಂತರವನ್ನು ವಿರೋಧಿಸುವ ಜನರೇ ಪುನರ್‌ಮತಾಂತರ, ಹಿಂಮತಾಂತರ (Reconversion)ದ ಪರವಾಗಿದ್ದಾರೆ. ಪುನರ್‌ಮತಾಂತರವೂ ಕೂಡ ಮತಾಂತರವೇ. ಮತಾಂತರ ತಪ್ಪೆನ್ನುವುದಾದರೆ ಪುನರ್ ಮತಾಂತರ ಕೂಡ ತಪ್ಪೇ ಎಂದು ವಾದಿಸಿ ತೃಪ್ತಿ ಪಡುವಹಾಗಿಲ್ಲ. ಪುನರ್ ಮತಾಂತರದ ವಕ್ತಾರರು ಉಪಯೋಗಿಸುವ ತಂತ್ರ-ಕಾರ್ಯಕ್ರಮಗಳು ಹೆಚ್ಚು ಕಡಮೆ ಮತಾಂತರದ ವಕ್ತಾರರ ಕ್ರಮಗಳಂತೆಯೇ ಇರುತ್ತವೆ. ಇಬ್ಬರಿಗೂ ಮತಾಂತರಗೊಳಿಸಬೇಕಾದ ಜನ ಒಂದು ರೀತಿಯ "ವಸ್ತು".

ಮತಾಂತರವನ್ನು ಗಾಂಧಿ ಕೂಡ ವಿರೋಧಿಸಿದ್ದರು. ರಾಮಕೃಷ್ಣ-ವಿವೇಕಾನಂದರು ಕೂಡ. ಇವರೆಲ್ಲ ಪ್ರಶ್ನಿಸಿದ್ದು ಮತಾಂತರದ ಉದ್ದೇಶಗಳನ್ನು, ನಿರರ್ಥಕತೆಯನ್ನು, ಮತಾಂತರದ ಹಕ್ಕನ್ನಲ್ಲ. ಆಧ್ಯಾತ್ಮಿಕ ಸಾಕ್ಷಾತ್ಕಾರದಲ್ಲಿ, ಮತ ಪರಿವರ್ತನೆಯಿಂದ ಪಡೆಯುವಂತಹದ್ದು ಏನೂ ಇಲ್ಲ ಎಂಬುದು ಇವರ ನಿಲುವಾಗಿತ್ತು. ಇಂಗ್ಲೆಂಡಿನಲ್ಲಿದ್ದಾಗ ಪ್ರೊಫೆಸರ್ ಮೈಟ್‌ಲ್ಯಾಂಡ್‌ರ ಸಂಪರ್ಕಕ್ಕೆ ಬಂದ ಗಾಂಧಿಗೆ ಹೊಸ ಧರ್ಮಗಳ, ಮತಾಂತರದ ನಿರರ್ಥಕತೆ ಗೊತ್ತಾಗಿತ್ತು. ಎಲ್ಲ ಧರ್ಮಗಳ ಮೂಲ ತಿರುಳನ್ನು ಹೊಸ ಕಾಲಕ್ಕೆ ಹೊಂದಿಸುವುದರ ಬಗ್ಗೆ ಅವರಿಗಿದ್ದ ಕಾಳಜಿಯ ಮುಂದೆ ಮತಾಂತರ ದೊಡ್ಡ ಸಮಸ್ಯೆಯಾಗಿ ಕಂಡಿರಲಾರದು. ಧರ್ಮದ, ಸಂಸ್ಕೃತಿಯ ಮೂಲಬೇರುಗಳಿಗೆ, ಆಶಯಗಳಿಗೆ ಹಿಂದಿರುಗುವುದು-ಸಮಾಜವನ್ನು ಮೂಢನಂಬಿಕೆ, ಜಾತಿಪದ್ಧತಿಯಿಂದ ಬಿಡುಗಡೆಗೊಳಿಸುವುದು - ಎರಡೂ ಕನಸನ್ನು ಒಟ್ಟಿಗೇ ಕಂಡಿದ್ದ ವಿವೇಕಾನಂದರಿಗೆ ಕೂಡ ಮತಾಂತರದ ಬಗ್ಗೆ ಕಡು ವಿರೋಧವಿತ್ತು. ಈವತ್ತು ಮತಾಂತರವನ್ನು ವಿರೋಧಿಸುತ್ತಿರುವವರ ನೆಲೆಗಳನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಬೇಕು. ಧಾರ್ಮಿಕ-ಸಾಂಸ್ಕೃತಿಕ ಕಾರಣಗಳಿಗಿಂತಲೂ ಹೆಚ್ಚಾಗಿ ಮತಾಂತರಗೊಳ್ಳುತ್ತಿರುವವರ "ಆಯ್ಕೆ"ಯ ಹಕ್ಕಿನ ಬಗ್ಗೆಯೇ ಒಂದು ಪ್ರಮಾಣದ ಅಸಹನೆ ಈವತ್ತಿನ ವಿರೋಧದಲ್ಲಿ ಎದ್ದು ಕಾಣುತ್ತದೆ. ಮತಾಂತರಗೊಳ್ಳುತ್ತಿರುವವರಲ್ಲಿ ಸೂಕ್ಷ್ಮರಾದವರು ಕೂಡ ತಮ್ಮ ತಮ್ಮ ಮನೋಲೋಕದ ಆಧ್ಯಾತ್ಮಿಕ ಲೌಕಿಕ ಪ್ರೇರಣೆಗಳ ಬಗ್ಗೆ ಬಿಚ್ಚು ಮನಸ್ಸಿನಿಂದ ಹೇಳಿಕೊಳ್ಳುವುದಿಲ್ಲ. ಹೇಳಿಕೊಳ್ಳುವಂತಹ ಸಾಂಸ್ಕೃತಿಕ ವಾತಾವರಣವೂ ಇಲ್ಲ. ಮತಾಂತರದಿಂದ ಮೇಲುಜಾತಿ ಹಿಂದೂಗಳ ಮನಸ್ಸಿನ ಮೆಲುಂಟಾಗುವ ಗಾಯವನ್ನು ಕಂಡು ಸಂತೋಷಪಡುವುದು ಮಾತ್ರವೇ ಇವರ ಉದ್ದೇಶವಾಗಿರಲಾರದು.


ಒಂದಲ್ಲ ಒಂದು ಕಾರಣಕ್ಕಾಗಿ ಇತಿಹಾಸದಲ್ಲಿ ಮೇಲುಜಾತಿಯವರು ಕೂಡ ಬೇರೆ ಬೇರೆ ಸಂದರ್ಭಗಳಲ್ಲಿ `ಮತಾಂತರ'ಗೊಂಡಿದ್ದಾರೆ. ಜೈನರು, ಕ್ರೈಸ್ತರು, ಸಾರಸ್ವತರು, ವೀರಶೈವರು, ವೈಷ್ಣವರು, ರಜಪೂತರು - ಹೀಗೇ. ಈವತ್ತು ನಾವು ಕೆಳಸ್ತರದ, ದಲಿತರ ಬಗ್ಗೆ ಏನು ಹೇಳುತ್ತೇವೋ ಅಂತಹ ಆ ಲೌಕಿಕ ಪ್ರಯೋಜನಗಳನ್ನೆಲ್ಲ ಮತಾಂತರದಿಂದ ಮೇಲುಜಾತಿಯವರು ಕೂಡ ಪಡೆದಿದ್ದಾರೆ. ಮಿಷನರಿಗಳ, ಪರಿವರ್ತನಕಾರರ ಗಮನವೂ ಮೊದಮೊದಲು ಇದ್ದದ್ದು ಮೇಲುಜಾತಿಗಳ ಕಡೆಗೇ. ಹೀಗೆಲ್ಲ ಇರುವಾಗ ಕೆಳಜಾತಿಗಳು-ವರ್ಗಗಳ ಮತಾಂತರದ ಬಗ್ಗೆ ಮಾತ್ರ ಹುಯಿಲೆಬ್ಬಿಸುವುದು ವಿಚಿತ್ರವಾಗಿ ಕಾಣುತ್ತದೆ.

ಭೈರಪ್ಪ ಪ್ರಣೀತ ಚರ್ಚೆಯನ್ನು ಕಾರಣವಾಗಿಟ್ಟುಕೊಂಡು ಈ ಲೇಖನವನ್ನು ರಚಿಸಿದ್ದರೂ ಪ್ರಗತಿಪರರು, ಜಾತ್ಯತೀತವಾದಿಗಳು ಮತಾಂತರದ ಸಂಕೀರ್ಣ ನೆಲೆಗಳನ್ನು ಗ್ರಹಿಸಿದ್ದಾರೆಂದು ನನ್ನ ಇಂಗಿತವಲ್ಲ. ಇವರ ಆಶಯಗಳು, ಉದ್ದೇಶಗಳ ಪ್ರಾಮಾಣಿಕತೆ-ಜನಪ್ರೀತಿಯಿಂದಲೇ ಕೂಡಿರಬಹುದಾದರೂ ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಇವರಿಗೇಕೆ ಪಡೆಯಲು ಸಾಧ್ಯವಾಗುತ್ತಿಲ್ಲ, ಜಾತಿವಾದಿಗಳು-ಕೋಮುವಾದಿಗಳಲ್ಲದವರು ಕೂಡ ಇವರನ್ನೇಕೆ ಒಪ್ಪುವುದಿಲ್ಲ ಎಂಬುದು ಯೋಚಿಸಬೇಕಾದ ವಿಚಾರ.

ಮತಾಂತರ ಕುರಿತಂತೆ ಚರ್ಚೆಯನ್ನು ನಾವು ಸಾಹಿತಿಗಳಿಗೆ - ಸಾಹಿತ್ಯ ಕೃತಿಗಳಿಗೇ ಮೀಸಲಾಗಿಟ್ಟರೆ ಕೆಲವು ತೊಂದರೆಗಳಾಗುತ್ತವೆ. ಕುವೆಂಪು ಅವರಾಗಲೀ, ಭೈರಪ್ಪನವರಾಗಲೀ ಒಂದು ಐತಿಹಾಸಿಕ ಸಂದರ್ಭದಲ್ಲಿ ಬರೆಯುವ ಲೇಖಕರಷ್ಟೇ. ಇಂತಹ ಸಂದರ್ಭದ ಒತ್ತಾಯಗಳನ್ನು ಮೀರಿ ಕೂಡ ಕೆಲವು ಪ್ರಶ್ನೆಗಳಿರುತ್ತವೆ. ತಾತ್ವಿಕವಗಿ ಮತಾಂತರ ಕುರಿತಂತೆ ಹಿಂದೂಧರ್ಮದ ನಿಲುವೇನು? ಹಿಂದೂಧರ್ಮ ಮತಾಂತರವನ್ನು ಒಪ್ಪುವುದಿಲ್ಲ, ಆಧ್ಯಾತ್ಮಿಕ ಹುಡುಕಾಟದಲ್ಲಿ ಅಗತ್ಯವೆಂದು ಭಾವಿಸುವುದೂ ಇಲ್ಲ. ಇದಕ್ಕೆ ಹಿಂದೂ ಧರ್ಮದ ಲೋಕದೃಷ್ಟಿಯೇ ಕಾರಣ. ಈ ನೋಟವನ್ನು ತತ್ವಶಾಸ್ತ್ರದ ಹಿನ್ನೆಲೆ-ಪರಿಭಾಷೆಯಲ್ಲಿ ಸಮರ್ಥವಾಗಿ ವಿವರಿಸುವ ಉತ್ತಮ ಲೇಖನವೊಂದು ಕನ್ನಡದಲ್ಲಿದೆ. ಶ್ರೀ ಜಿ.ಹನುಮಂತರಾವ್‌ರ ಈ ಬರಹವನ್ನು `ಪುಸ್ತಕ ಮನೆ' ಮಾಸಿಕವು ತನ್ನ ನವೆಂಬರ್ ಸಂಚಿಕೆಯಲ್ಲಿ ಪುನರ್‌ಮುದ್ರಿಸಿದೆ (ಪುಟ ೫-೧೮). ಈ ಬರಹದಲ್ಲೂ ಶ್ರೀ ಹನುಮಂತರಾವ್ ಗಾಂಧಿ ನಿಲುವುಗಳನ್ನು, ಪ್ರೊ||ಮೈಟ್‌ಲ್ಯಾಂಡ್‌ರ ಗಾಂಧಿ ಮೇಲಿನ ಪ್ರಭಾವವನ್ನು ಗಮನಿಸುತ್ತಾರೆ. ಇಂತಹದೊಂದು ಉತ್ತಮ ಲೇಖನ ಓದುಗರ ಗಮನಕ್ಕೆ - ಪುನರ್ ಓದಿಗೆ ಅರ್ಹವಾಗಿದೆ.

ಕರಾವಳಿ ಸೀಮೆಯಲ್ಲಿರುವ ಗೋವಾ ಪ್ರದೇಶವೂ ನಾಲ್ಕೈದು ಶತಮಾನಗಳಿಂದ ಮತಾಂತರವನ್ನು ಬೇರೆ ಬೇರೆ ಸ್ತರಗಳಲ್ಲಿ ಎದುರಿಸಿ ಈವತ್ತಿಗೆ ವಿಶಿಷ್ಟವಾದ ಸಾಂಸ್ಕೃತಿಕ ಚಹರೆಯನ್ನು ರೂಢಿಸಿಕೊಂಡು ಆಧುನಿಕವಾಗಿದೆ. ಈ ಇತಿಹಾಸವನ್ನು ಹೇಗೆ ನೋಡಬೇಕು? ಮಿಷನರಿಗಳ ದೃಷ್ಟಿಯಿಂದಲೇ, ಮತಾಂತರಗೊಂಡವರ ದೃಷ್ಟಿಯಿಂದಲೇ, ಗಮನಿಸಬೇಕಾದ ದಾಖಲೆಗಳು ಯಾವುವು, ಯಾವ ರೀತಿಯ ಅಧ್ಯಯನ ಕ್ರಮದಿಂದ ಸತ್ಯಕ್ಕೆ ಹತ್ತಿರವಾಗಬಹುದು - ಇಂತಹ ಸಮಸ್ಯೆಗಳನ್ನೆಲ್ಲ ತಮ್ಮೆದುರಿಗಿಟ್ಟುಕೊಂಡು Maria Aurora Coutoಬರೆದಿರುವ ಕೃತಿ "A Daughter's Story" ಕೂಡ ಮತಾಂತರ ಕುರಿತ ನಮ್ಮ ತಿಳುವಳಿಕೆಯನ್ನು ಇನ್ನಷ್ಟು ಸೂಕ್ಷ್ಮಗೊಳಿಸಬಹುದು, ಮಾನವೀಯಗೊಳಿಸಬಹುದು. ಈ ಪುಸ್ತಕವನ್ನು ಓದಲು ಕಾರಣರಾದ ಶ್ರೀ ಜಿ.ರಾಜಶೇಖರ್‌ರವರ ಪ್ರೀತಿ-ಪ್ರೋತ್ಸಾಹವನ್ನು ಇಲ್ಲಿ ನೆನೆಯುತ್ತೇನೆ.
(ಫೆಬ್ರವರಿ ತಿಂಗಳ ಹೊಸತು ಪತ್ರಿಕೆಯಲ್ಲಿ ಪ್ರಕಟಿತ ಲೇಖನ)
(ಚಿತ್ರಗಳು: ವಿಕ್ರಾಂತ ಕರ್ನಾಟಕ - ಕನ್ನಡ ವಾರಪತ್ರಿಕೆಯ ಕೃಪೆ)
ಮುಂದೆ ಓದಿ....

Sunday, January 25, 2009

ಗಾಂಧಿ ಓದಿದ್ದು ಬರೆದಿದ್ದು


ಗಾಂಧಿಯವರ ವ್ಯಕ್ತಿತ್ವಕ್ಕೆ ನಾನಾ ಆಯಾಮಗಳು. ಸಂತ, ರಾಜಕಾರಣಿ, ಸಂಘಟನಾ ಚತುರ, ಪಟ್ಟುಬಿಡದ ಮೌಲ್ಯಾನ್ವೇಷಕ, ರಾಜಕಾರಣದಲ್ಲಿದ್ದೂ ಅಧ್ಯಾತ್ಮದ ಹುಡುಕಾಟದಲ್ಲಿ ನಿರತನಾದವ - ಹೀಗೆ ಪಟ್ಟಿ ಬೆಳೆಸುತ್ತಲೇ ಹೋಗಬಹುದು. ಈ ಎಲ್ಲ ಆಯಾಮಗಳನ್ನು ಬಂಧಿಸಿದ್ದ ಏಕಸೂತ್ರವೆಂದರೆ ಗಾಂಧಿಯವರ ವ್ಯಕ್ತಿತ್ವದ ನಿರಂತರ ವಿಕಾಸ. ಈ ವಿಕಾಸಕ್ಕೆ ಬೆನ್ನೆಲುಬಾಗಿದ್ದುದು ಗಾಂಧಿಯವರಿಗೆ ವಿಶಿಷ್ಟವಾಗಿದ್ದ ನಿರಂತರ ಓದು ಮತ್ತು ಬರವಣಿಗೆ. ನಾವು ಗಾಂಧಿ ಕುರಿತ ಚರ್ಚೆಯಲ್ಲಿ ಅವರಿಗೆ ವಿಶಿಷ್ಟವಾಗಿದ್ದ, ಅವರೇ ರೂಪಿಸಿಕೊಂಡಿದ್ದ ಓದು ಮತ್ತು ಬರವಣಿಗೆಯ ರೀತಿಯ ಬಗ್ಗೆ ಹೆಚ್ಚು ಗಮನ ಕೊಟ್ಟಂತಿಲ್ಲ.

ನಿಜ, ಗಾಂಧಿ ಸಾಹಿತಿಯಲ್ಲ, ಕವಿಯಲ್ಲ, ಬರೆದಿರುವುದು ಕೂಡ ಎರಡೇ ಪುಸ್ತಕಗಳು - ಮೊದಲನೆಯದು ಹಿಂದ್ ಸ್ವರಾಜ್ ಮತ್ತು ಎರಡನೆಯದು ಆತ್ಮ ಚರಿತ್ರೆ. ಆದರೆ ಅವರ ಪತ್ರಿಕಾ ಬರಹಗಳು, ಕರಪತ್ರ, ಪತ್ರಸಾಹಿತ್ಯ - ಇವೆಲ್ಲವನ್ನೂ ಸೇರಿಸಿದರೆ ಸುಮಾರು 55 ಸಾವಿರ ಪುಟಗಳಾಗುತ್ತವೆ. ಈ ಕಾರಣಕ್ಕೆ ಮಾತ್ರವಲ್ಲದೆ ಇನ್ನೂ ಎರಡು ಮುಖ್ಯ ಕಾರಣಗಳಿಗಾಗಿ ಗಾಂಧಿಯವರ ಓದುಗಾರಿಕೆ-ಬರವಣಿಗೆಯ ರೀತಿಯನ್ನು ಗಮನಿಸಬೇಕಾಗಿದೆ. ಗಾಂಧಿಯವರ ಹಿಂದ್ ಸ್ವರಾಜ್ ಗೆ ಮುಂದಿನ ವರ್ಷ ನೂರು ವರ್ಷ ತುಂಬುತ್ತದೆ. ಶತಮಾನೋತ್ಸವಕ್ಕೆ ಸಿದ್ಧತೆಗಳಾಗುತ್ತಿವೆ. ಸಮೂಹ ಮಾಧ್ಯಮಗಳ ಪ್ರಭಾವದ ದೆಸೆಯಿಂದಾಗಿ ಓದುವ, ಬರೆಯುವ ಆಸಕ್ತಿ ಕಡಿಮೆಯಾಗುತ್ತಿದೆ. ಜತೆಗೆ ಸಾಹಿತ್ಯ-ಸಾಂಸ್ಕೃತಿಕ ವಲಯಗಳಲ್ಲಿ ನಡೆಯುತ್ತಿರುವ ಓದು, ಬರವಣಿಗೆಯು ಬಹುಪಾಲು ವೃತ್ತಿಪರ ವ್ಯಸನವಾಗಿಯೋ, ಹಾಗಲ್ಲದೆ ಹೋದಾಗ ಹವ್ಯಾಸಿಶೀಲರ ವಾರಾಂತ್ಯದ ಮನರಂಜನೆ-ಸಮಾರಂಭಗಳ ಶೋಕಿಯಾಗಿಯೋ ಆಗುವ ಹಂತಕ್ಕೆ ಬಂದು ನಿಂತಿದೆ. ತಾನೊಬ್ಬ ಸಾಹಿತಿ-ಪಂಡಿತನೆಂದು ತಿಳಿಯದ ಒಬ್ಬ ಮನುಷ್ಯ, ತನ್ನ ಅಂತರಂಗದ ವಿಕಾಸಕ್ಕೆ ಪೂರಕವಾಗಿ ಓದಲು-ಬರೆಯಲು ಹೊರಟಾಗ ಹೇಗಿರುತ್ತದೆ ಎಂಬುದನ್ನು ಗಾಂಧಿಯವರ ವ್ಯಕ್ತಿತ್ವದಿಂದ ತಿಳಿಯಬಹುದು. ಹೀಗೆ ತಿಳಿಯುವ ಮೂಲಕ ಶಿಥಿಲವಾಗುತ್ತಿರುವ ಓದು ಸಂಸ್ಕೃತಿಗೆ ಹೊಸ ಚಾಲನೆ ಕೊಡಬಹುದು.

ಟ್ಯಾಗೋರರಂತೆ ನಾನು ಕವಿಯಲ್ಲ!
ಗಾಂಧಿ ಹೆಚ್ಚು ಪುಸ್ತಕಗಳನ್ನು ಓದಿದವರಲ್ಲ. ಓದಲು ಆಸೆಪಟ್ಟವರೂ ಅಲ್ಲ. ಕವಿ, ಸಾಹಿತಿಯಾಗಬೇಕೆಂಬ ಹುಚ್ಚು ಕೂಡ ಇರಲಿಲ್ಲ. ರವೀಂದ್ರರಂತೆ ತಾನೇನು ಕವಿಯಲ್ಲ. ಹೊಸದೇನನ್ನೂ ಸೃಷ್ಟಿಸಲಾರೆ. ಹಾಗಾಗಿ ಸತ್ಯ, ಅಹಿಂಸೆಯಂತಹ ಪುರಾತನ ಕಲ್ಪನೆಗಳನ್ನು ತಾನು ಮತ್ತೆ ಮತ್ತೆ ಶೋಧಿಸಬೇಕೆಂದು ಗಾಂಧಿ ಪದೇ ಪದೆ ಹೇಳಿಕೊಳ್ಳುತ್ತಿದ್ದರು - ಸ್ವಲ್ಪ ತಮಾಷೆಯಿಂದ, ಸ್ವಲ್ಪ ಗಾಂಭೀರ್ಯದಿಂದ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಓದಿದ್ದು ಕೂಡ ಕೆಲವೇ ಪುಸ್ತಕಗಳು. ರಾಮಾಯಣವನ್ನು ಓದಲು ಪ್ರಾರಂಭಿಸಿದ್ದು - ಭೂತ, ಪಿಶಾಚಿಗಳ ಭಯದಿಂದ ಪಾರಾಗಲು ಪಾರಾಯಣವೊಂದೇ ದಾರಿಯೆಂದು ಬಂಧುಗಳೊಬ್ಬರು ಹೇಳಿಕೊಟ್ಟಿದ್ದರಿಂದ! ವಿದ್ಯಾಭ್ಯಾಸದ ದಿನಗಳಲ್ಲಿ ಪಠ್ಯಪುಸ್ತಕಗಳಿಂದಾಚೆಗೆ ಓದಲಿಲ್ಲ. ಸಕ್ರಿಯವಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿದ ಮೇಲೆ ಓದಲು ಸಮಯವೇ ಸಿಗಲಿಲ್ಲ. ಹಾಗಾಗಿ ನನ್ನ ಪುಸ್ತಕ ಜ್ಞಾನ ತುಂಬಾ ಕಡಿಮೆಯಾಯಿತು. ಆದರೆ ಇದರಿಂದಾಗಿ ತನಗೇನೂ ನಷ್ಟವಾಗಲಿಲ್ಲ. ಸೀಮಿತ ಓದಿನಿಂದಾಗಿ ಓದಿದ ಪುಸ್ತಕಗಳನ್ನೆಲ್ಲ ಚೆನ್ನಾಗಿ ಮನನಮಾಡಲು ಸಾಧ್ಯವಾಯಿತು ಎಂದೇ ಆತ್ಮಚರಿತ್ರೆಯಲ್ಲಿ ಗಾಂಧಿ ಬರೆದುಕೊಂಡಿದ್ದಾರೆ. ಇಂಗ್ಲೆಂಡಿಗೆ ಓದುವುದಕ್ಕೆ ಹೋದ ಮೇಲೆ ತಾಯಿಗೆ ವಚನಕೊಟ್ಟಿದ್ದಂತೆ ಸಸ್ಯಾಹಾರಿಯಾಗಿ ಉಳಿಯಲು ಸಸ್ಯಾಹಾರಿ ಸಂಘಟನೆಯವರು ಪ್ರಕಟಿಸುತ್ತಿದ್ದ ಪುಸ್ತಕಗಳನ್ನೇ, ಕರಪತ್ರಗಳನ್ನೇ ಓದುತ್ತಿದ್ದುದು. ಬರೆಯುತ್ತಿದ್ದುದು ಕೂಡ ಸಂಘಟನೆಯ ಪತ್ರಿಕೆಗಳಿಗೇ. ಒಳಮನಸ್ಸಿನ, ಒಳಹಸಿವಿನ ತೀವ್ರತೆಗೆ, ಅಗತ್ಯಕ್ಕೆ ಬೇಕಾದಷ್ಟು ಓದುವುದನ್ನು, ಬರೆಯುವುದನ್ನು ಗಾಂಧಿ ಇಲ್ಲಿಂದಲೇ ಪ್ರಾರಂಭಿಸಿದಂತೆ ಕಾಣುತ್ತದೆ. 19ನೇ ವರ್ಷದಲ್ಲಿ ದಿನಚರಿ ಬರೆಯಲು ಶುರುವಿಟ್ಟುಕೊಂಡ ಗಾಂಧಿಯ ಆ ದಿನದ ದಿನಚರಿಗಳಲ್ಲೂ ಕಾಣುವುದು ಒಳಮನಸ್ಸಿನ ತಾಕಲಾಟದ ದಾಖಲೆಯೆ. ಜೀವನದಲ್ಲಿ ಯಾರನ್ನೂ ಯಾರೂ ಆಕಸ್ಮಿಕವಾಗಿ ಭೇಟಿ ಮಾಡುವುದಿಲ್ಲ ಎಂಬ ಗಾದೆ ಮಾತಿನಂತೆ ಸಸ್ಯಾಹಾರಿಗಳ ಸಂಘಟನೆಯ ಮೂಲಕವೇ ಗಾಂಧಿ ಬುದ್ಧ-ಭಗವದ್ಗೀತೆಯ ಬಗ್ಗೆ ಬರೆದಿದ್ದ ಎಡ್ವಿನ್ ಆರ್ನಾಲ್ಡ್, ಭಾರತೀಯ ತತ್ತ್ವಶಾಸ್ತ್ರದಲ್ಲಿ ಆಸಕ್ತಿಯಿದ್ದ ಆನಿಬೆಸೆಂಟ್ - ಇಂಥವರೊಡನೆ ಸಂಪರ್ಕಕ್ಕೆ ಬಂದುದು.

ಓದಬೇಕು ಮೂಲಪಠ್ಯ
ಯಾವುದೇ ಸಂಗತಿ, ವಿದ್ಯಮಾನ ಕುರಿತಂತೆ ಮೂಲಪಠ್ಯವನ್ನೇ ಓದಬೇಕು. ಎರಡನೆ ಮೂರನೆ ದರ್ಜೆಯ ಪುಸ್ತಕಗಳನ್ನು ಓದಬಾರದು ಎಂಬುದು ಗಾಂಧಿ ಈ ಹಂತದಲ್ಲಿ ರೂಢಿಸಿಕೊಂಡ ಇನ್ನೊಂದು ನಿಯಮ. ಗಾಂಧಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಕೆಲವು ಮಿತ್ರರು ಪ್ರಯತ್ನಿಸಿದಾಗ ಓದಿದ್ದು ಕ್ರಿಶ್ಚಿಯನ್ ಧರ್ಮದ ಇತಿಹಾಸವನ್ನು, ಬೈಬಲ್‌ನ ಮೂಲಪಠ್ಯವನ್ನು. ಎಲ್ಲ ಧರ್ಮಗಳ ಮೂಲತಿರುಳು ಒಂದೆ ಎಂಬ ನಂಬಿಕೆ ಜಾಗೃತವಾದದ್ದು ಇಂತಹ ಮೂಲ ಪಠ್ಯಗಳ ಓದಿನಿಂದಲೇ. ಎಡ್ವರ್ಡ್ ಮೈಟ್‌ಲ್ಯಾಂಡ್ ಎಂಬ ಕ್ರಿಶ್ಚಿಯನ್ ಗುರುವೊಬ್ಬನ ಚಿಂತನೆ ಮಾತ್ರ ಗಾಂಧಿಯ ಮೇಲೆ ತುಂಬಾ ಪರಿಣಾಮ ಬೀರಿತು. ಈಗ ನಮಗೆ ಬೇಕಾಗಿರುವುದು ಇನ್ನೊಂದು ಧರ್ಮವಲ್ಲ. ಈಗಾಗಲೇ ಇರುವ ಧರ್ಮಗಳ ಸರಿಯಾದ ಮತ್ತು ಪ್ರಾಮಾಣಿಕ ವ್ಯಾಖ್ಯಾನ ಎಂಬ ಮೈಟ್‌ಲ್ಯಾಂಡ್ ಚಿಂತನೆ ಮತ್ತು ಯಾವ ಧಾರ್ಮಿಕ ಗ್ರಂಥಗಳನ್ನೂ ಚಾರಿತ್ರಿಕ ದಾಖಲೆಗಳೆಂದು ಓದಬಾರದೆಂಬ ಆತನ ಸೂಚನೆ, ಧರ್ಮ ಮತ್ತು ಧಾರ್ಮಿಕ ಗ್ರಂಥಗಳನ್ನು ಕುರಿತಂತೆ ಗಾಂಧಿ ಯೋಚಿಸುವ ದಿಕ್ಕನ್ನೇ ಬದಲಾಯಿಸಿತು. ಇಲ್ಲೂ ಕೂಡ ನಾವು ಕಾಣುವುದು ಓದಿದ್ದನ್ನ ತನ್ನ ಅಂತರಂಗದ ಆಳಕ್ಕೆ ತೆಗೆದುಕೊಂಡು ತನ್ನ ನಂಬಿಕೆಗಳನ್ನೇ ಪರಿಶೀಲಿಸಿಕೊಳ್ಳುವ ಪ್ರವೃತ್ತಿಯನ್ನು.

ರಾಮಾಯಣ ಮಹಾಭಾರತಗಳು ಚಾರಿತ್ರಿಕ ಕೃತಿಗಳಲ್ಲ. ಆ ಕೃತಿಗಳಲ್ಲಿ ಚಾರಿತ್ರಿಕ ಸತ್ಯಗಳನ್ನು ಹುಡುಕುವುದು ತಪ್ಪು. ಬದಲಾಗಿ ಈ ಕೃತಿಗಳು ಮುಖ್ಯವಾಗಿ ತಾತ್ತ್ವಿಕ ಕಾವ್ಯ. ಇಂತಹ ಕಾವ್ಯಕ್ಕೊಂದು ಸುಮ್ಮನೆ ನಿರ್ದಿಷ್ಟ ಸನ್ನಿವೇಶ ಎಂಬ ನಂಬಿಕೆಗನುಗುಣವಾಗಿ ಈ ಮಹಾಕಾವ್ಯಗಳ ಮೂಲ ಆಶಯದ ಕಡೆಗೇ ನಾವು ಮನಸ್ಸು ಕೊಡಬೇಕೆಂದು ಗಾಂಧಿ ಪರಿಭಾವಿಸಿದರು. ಈ ನಂಬಿಕೆಗನುಗುಣವಾಗಿಯೇ ಗಾಂಧಿಗೆ ಚಾರಿತ್ರಿಕ ರಾಮನಲ್ಲಿ ಯಾವತ್ತೂ ಆಸಕ್ತಿಯಿರಲಿಲ್ಲ. ನಿರಂತರ ರಾಮ, ಇನ್ನೂ ಆಗುತ್ತಿರುವ ರಾಮನ ಬಗ್ಗೆಯೇ ಗಮನ. ಮಹಾಭಾರತವನ್ನು ಕೂಡ ಗಾಂಧಿ ಇದೇ ರೀತಿ ವ್ಯಾಖ್ಯಾನಿಸಿದರು. ಪಶ್ಚಿಮದವರ ಚರಿತ್ರೆಯ ಕಲ್ಪನೆಯೇ ಮೂಲಭೂತವಾಗಿ ತಪ್ಪು. ದಿನನಿತ್ಯದ ಬದುಕಿನ ಸಣ್ಣಪುಟ್ಟ ಘಟನೆಗಳು- ಬೆಳವಣಿಗೆಯ ಆಧಾರದ ಮೇಲೆಯೇ ತತ್ತ್ವಶಾಸ್ತ್ರವನ್ನು ನಿರ್ಮಿಸಬೇಕೆಂಬ ಮಹಾಭಾರತದ ತಿಳಿವಳಿಕೆಯೇ ರೋಮನ್ ಇತಿಹಾಸ ಬರೆದ ಗಿಬ್ಬನ್ ಪುಸ್ತಕಗಳ ಒಳನೋಟಕ್ಕಿಂತ ದೊಡ್ಡದು ಎಂದು ಗಾಂಧಿ ವಾದಿಸಿದರು. ಈ ರೀತಿಯ ಖಚಿತ ಮತ್ತು ವಿನೂತನ ನಿಲುವುಗಳಿಗೆ ಇವತ್ತಿನ ಚಿಂತನಕಾರರು ಬರುವುದು ಎಷ್ಟು ಕಷ್ಟ ಮತ್ತು ಯಾಕೆ ಇವರಿಗೆಲ್ಲ ಇಂತಹ ಕಷ್ಟವಾಗುತ್ತಿದೆ ಎಂದು ಯೋಚಿಸಿದಾಗ ಗಾಂಧಿ ತಮ್ಮ ಸೀಮಿತ ಓದನ್ನು ಸ್ವಂತಕ್ಕೆ ಅನ್ವಯಿಸಿಕೊಂಡು ಓದಿ-ಬರೆದು-ಚಿಂತಿಸುತ್ತಿದ್ದ ರೀತಿಯ ಮಹತ್ವ ಅರ್ಥವಾಗುತ್ತದೆ.

ರಸ್ಕಿನ್ ತಂದಿತ್ತ ಪ್ರೇರಣೆ
ಗಾಂಧಿ ಓದುತ್ತಿದ್ದ ಪುಸ್ತಕಗಳೇ ಹಾಗಿರುತ್ತಿದ್ದವೋ, ಇಲ್ಲ ಅವರು ಓದುತ್ತಿದ್ದ ರೀತಿಯಿಂದಾಗಿ ಪುಸ್ತಕಗಳು ಹಾಗೆ ಪ್ರಭಾವ ಬೀರುತ್ತಿದ್ದವೋ? ಈ ಪ್ರಶ್ನೆ ಗಾಂಧಿಯ ವ್ಯಕ್ತಿತ್ವದ ದೃಷ್ಟಿಯಿಂದ ಮಾತ್ರವಲ್ಲ, ಓದುಗನ ಸ್ಪಂದನಶೀಲತೆ ಕುರಿತಂತೆ ಇರುವ ನೂರಾರು ನವ್ಯೋತ್ತರ ಚಿಂತನೆಗಳ ದೃಷ್ಟಿಯಿಂದಲೂ ಮುಖ್ಯವಾದದ್ದು. ಸರ್ವೋದಯದ ಕಲ್ಪನೆ, ದೈಹಿಕ ಶ್ರಮದ ಮಹತ್ವ, ಜೀವರಾಶಿಗಳಲ್ಲೆಲ್ಲ ಅಂತರ್ಗತವಾಗಿರುವ ಆಧ್ಯಾತ್ಮಿಕ ಸಮಾನತೆ - ಇವನ್ನೆಲ್ಲ ಗಾಂಧಿ ತಮಗೆ ತಾವೇ ಸ್ಪಷ್ಟಗೊಳಿಸಿಕೊಂಡದ್ದು ಜಾನ್ ರಸ್ಕಿನ್‌ನ Unto this last ಎಂಬ ಕೃತಿಯ ಒಂದೇ ದಿನದ ಒಂದೇ ಪಟ್ಟಿನ ಓದಿನಿಂದ. ಹೆನ್ರಿ ಪೊಲಾಕ್ ಎಂಬ ಗೆಳೆಯ ಕೊಟ್ಟ ಈ ಪುಸ್ತಕವನ್ನು ಜೊಹಾನ್ಸ್‌ಬರ್ಗ್‌ನಿಂದ ದರ್ಬಾನ್‌ಗೆ ರೈಲಿನಲ್ಲಿ ಪ್ರಯಾಣಿಸುವಾಗ ಇಪ್ಪತ್ತನಾಲ್ಕು ಗಂಟೆಗಳಲ್ಲೇ ಓದಿ ಪುಸ್ತಕ ಮುಗಿಸುವ ಹೊತ್ತಿಗೇ ತಮ್ಮ ಜೀವನ ಶೈಲಿಯನ್ನು ಕೃತಿಗನುಗುಣವಾಗಿ ಪರಿವರ್ತಿಸಿಕೊಳ್ಳಲು ನಿರ್ಧರಿಸಿಬಿಟ್ಟರು. ಫೀನಿಕ್ಸ್ ಆಶ್ರಮದ ಸ್ಥಾಪನೆ, ಈ ಓದಿನ ಹಿನ್ನೆಲೆಯಲ್ಲೇ ಜರುಗಿದ್ದು. ಗಾಂಧಿ ಮತ್ತು ಮಿತ್ರರು ಸರಳ ಮತ್ತು ಋಜು ಜೀವನ ಪ್ರಾರಂಭಿಸಿದ್ದು ಇಲ್ಲೇ.

ಗಾಂಧಿಯ ಚರಿತ್ರೆ ಬರೆದ ಲೂಯಿ ಫಿಶರ್ ಈ ಬಗ್ಗೆ ಹೇಳುವ ಮಾತು ಕುತೂಹಲಕರವಾಗಿದೆ. ಗಾಂಧಿ ತಮ್ಮ ಇಡೀ ಜೀವನವನ್ನೆ ಪರಿವರ್ತಿಸಿಕೊಳ್ಳುವಂತದ್ದು ಜಾನ್ ರಸ್ಕಿನ್‌ನ ಪುಸ್ತಕದಲ್ಲಿ ಇದ್ದಿರಲಾರದು. ಮುಖ್ಯವಾದ ಮಾತೆಂದರೆ ಪ್ರಕೃತಿಯ ನಿಯಮ ಮತ್ತು ಲಯಕ್ಕನುಗುಣವಾಗಿ ಬದುಕಲು ಗಾಂಧಿಯಲ್ಲೇ ತುಡಿತ ಈಗಾಗಲೇ ಪ್ರಾರಂಭವಾಗಿದ್ದು ರಸ್ಕಿನ್‌ನ ಪುಸ್ತಕದ ಓದು ಗಾಂಧಿಯನ್ನು ಆ ಕಡೆ ಚಲಿಸುವಂತೆ ಮಾಡಿತಷ್ಟೆ. ಫಿಶರ್ ಹೀಗೆ ಹೇಳುತ್ತಾರೆ `ಪಠ್ಯಗಳು ತನಗೆ ಏನು ಹೇಳಬೇಕೆಂದು ಬಯಸುತ್ತಿದ್ದವೋ ಅದನ್ನೇ ಪಠ್ಯಕ್ಕೆ, ಪಠ್ಯದಿಂದ ಗಾಂಧಿ ಓದಿ ಬಿಡುತ್ತಿದ್ದರು. ಸೃಜನಶೀಲ ಓದುಗರಾಗಿದ್ದ ಗಾಂಧಿ ತಾವು ಓದುತ್ತಿದ್ದ ಪುಸ್ತಕದ ಸಹಲೇಖಕನಾಗಿ ಬಿಡುತ್ತಿದ್ದರು. ಪಠ್ಯಕ್ಕೆ ತಾನು ಕೊಡುವುದನ್ನೆಲ್ಲ ಕೊಟ್ಟು ತನಗೆ ಬೇಕಾದ್ದನ್ನು ಬಡ್ಡಿಯ ಸಮೇತ ವಾಪಾಸ್ ಪಡೆಯುತ್ತಿದ್ದರು.' ಸೆರೆಮನೆಯಲ್ಲಿ ಓದಿದ ಹೆನ್ರಿ ಡೇವಿಡ್ ಡೋರೋನ ನಾಗರಿಕ ಅಸಹಕಾರ ಕುರಿತ ಪ್ರಬಂಧಕ್ಕೆ ಕೂಡ ಗಾಂಧಿ ತೆರೆದುಕೊಂಡದ್ದು ಈ ರೀತಿಯಲ್ಲೇ. ಈ ಎರಡೂ ಕೃತಿಗಳನ್ನು ಗಾಂಧಿ ನಂತರದ ದಿನಗಳಲ್ಲಿ ಗುಜರಾತಿ ಭಾಷೆಗೆ ತರ್ಜುಮೆ ಮಾಡಿದರು.

ಛೆ ಛೆ, ಕತೆ, ಕಾದಂಬರಿ ಓದೋದೇ?!

ಗಾಂಧಿ ಓದುಗಾರಿಕೆಯ ಇನ್ನೊಂದು ವೈಶಿಷ್ಟ್ಯವೆಂದರೆ ಲಲಿತ ಬರವಣಿಗೆ ಅಥವಾ ಸೃಜನಶೀಲ ಬರವಣಿಗೆಯ ಬಗ್ಗೆ ಇದ್ದ ಕಡಿಮೆಯೆನ್ನುವಷ್ಟು ಒಲವು. ಹಿಂದ್ ಸ್ವರಾಜ್ ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಒಂದು ಪಟ್ಟಿಯಲ್ಲಿ ಯಾವುದೇ ಕತೆ-ಕಾದಂಬರಿ ನಾಟಕಗಳಿಲ್ಲ. ಟಾಲ್‌ಸ್ಟಾಯ್‌ಯ ಆರು ಕೃತಿಗಳಿವೆ. ಆತನ ಪ್ರಸಿದ್ಧ ಕಾದಂಬರಿಗಳಿಲ್ಲ. ಆತ್ಮಕತೆ ಮತ್ತು ಸ್ವೇಚ್ಛಾ ಮನೋಭಾವವನ್ನು ಪ್ರೇರೇಪಿಸುವ ಪಶ್ಚಿಮದ ಸಾಹಿತ್ಯವನ್ನು ಯುವಕರು ಓದಬಾರದು, ಸಂಯಮ ಮತ್ತು ಚಾರಿತ್ರ್ಯವನ್ನು ಬೋಧಿಸುವ ಟಾಲ್‌ಸ್ಟಾಯ್‌ನ ನೀತಿಪರ, ಧಾರ್ಮಿಕ ಸಾಹಿತ್ಯವನ್ನು ಓದಬೇಕೆಂದು ಗಾಂಧಿ ಕರೆಕೊಟ್ಟಿದ್ದರು. ಕವಿಗಳಿಗೆ, ಲೇಖಕರಿಗೆ ತಮ್ಮ ವಾದವನ್ನು ಮಂಡಿಸಲು ಉತ್ಪ್ರೇಕ್ಷೆಯ, ಅಲಂಕಾರಗಳ ಹಕ್ಕು ಮತ್ತು ಅಗತ್ಯವಿದೆ ನಿಜ, ಹಾಗೆಂದು ನಾನು ಅವರ ವಾದವನ್ನು ಯಾವಾಗಲೂ ಒಪ್ಪಬೇಕಿಲ್ಲ ಎಂದು ರವೀಂದ್ರರನ್ನು ಕುರಿತು ತಮಾಷೆ ಮಾಡಿದ್ದರು. `ಗಗನದಲ್ಲಿ ಹಾಡುತ್ತಾ ಹಾರಾಡುತ್ತಾ ಸಂತಸದಿಂದಿರುವ ಹಕ್ಕಿಗಳ ಸುಂದರ ಚಿತ್ರವನ್ನು ಕವಿಗಳು ನೀಡುತ್ತಾರೆ. ಈ ಹಕ್ಕಿಗಳು ಈಗಾಗಲೇ ದಿನದ ಊಟ ಮುಗಿಸಿವೆ. ಹಿಂದಿನ ರಾತ್ರಿ ನಿದ್ರಿಸುವಾಗ ಧಮನಿಗಳಲ್ಲಿ ಹೊಸ ರಕ್ತ ಹರಿದಿದೆ. ಚೈತನ್ಯವೇ ಇಲ್ಲದ ಮಾನವ ಹಕ್ಕಿಗಳು ರೆಕ್ಕೆಗಳನ್ನು ಪಟಪಟ ಬಡಿಯಲು ಕೂಡ ಕಷ್ಟಪಡುವುದನ್ನು ನಾನು ನೋಡಿದ್ದೇನೆ, ನರಳುತ್ತಿರುವ ರೋಗಿಗಳಿಗೆ ಕಬೀರನ ಪದ್ಯದಿಂದೇನಾಗಬೇಕು? ಹಸಿದವರಿಗೆ ಬೇಕಾಗಿರುವುದು ಚೈತನ್ಯ ತುಂಬಲು ಬೇಕಾದ ಶಕ್ತಿಯುತ ಆಹಾರವೆಂಬ ಒಂದೇ ಒಂದು ಕವನ. ಹಸಿದವರೇ ಅದನ್ನು ಸಂಪಾದಿಸಬೇಕು. ತಮ್ಮ ಶ್ರಮದಿಂದಲೇ ಸಂಪಾದಿಸಬೇಕು.'

ಬ್ರಿಟಿಷರ ಓದುಗಾರಿಕೆಯ ರೀತಿಯ ಬಗ್ಗೆ ಗಾಂಧಿ ಗೇಲಿ ಮಾಡುತ್ತಿದ್ದರು. ದಿನಪತ್ರಿಕೆಯ ಓದೇ ಬ್ರಿಟಿಷರ ಪರಮಗುರಿ, ದಿನಪತ್ರಿಕೆಯೇ ಬ್ರಿಟಿಷರಿಗೆ ಬೈಬಲ್ ಇದ್ದಂತೆ ಎಂದೆಲ್ಲ ತಮಾಷೆ ಮಾಡುತ್ತಿದ್ದ ಗಾಂಧಿ ಶಿಸ್ತುಬದ್ಧವಾಗಿ ಓದಿದ್ದು ಯರವಾಡ ಸೆರೆಮನೆಯಲ್ಲಿ ಇದ್ದಾಗ ಮಾತ್ರ. ಎರಡು ವರ್ಷಗಳ ಕಾಲ. ಸೆರೆಮನೆಯ ಗ್ರಂಥಾಲಯದಲ್ಲಿ ಸಿಕ್ಕ ಸುಮಾರು ನೂರೈವತ್ತು ಪುಸ್ತಕಗಳಲ್ಲಿ ತತ್ತ್ವಶಾಸ್ತ್ರ, ಬೇರೆ ಬೇರೆ ಧರ್ಮದ ಗ್ರಂಥಗಳು, ನಾಗರಿಕತೆಯ ಇತಿಹಾಸ ಕುರಿತ ಪುಸ್ತಕಗಳು ಈ ಓದಿನಲ್ಲಿ ಸೇರಿವೆ. ರವೀಂದ್ರರು, ಗಯಟೆ, ಬರ್ನಾಡ್ ಶಾ, ಕಿಪ್ಲಿಂಗ್‌ರ ಕೆಲವು ಸಾಹಿತ್ಯ ಕೃತಿಗಳು ಈ ಓದಿನಲ್ಲಿ ಸೇರಿವೆ. ಗಾಂಧಿ ಯಾವ ಪುಸ್ತಕವನ್ನೂ ಕೇವಲ ಓದುತ್ತಿರಲಿಲ್ಲವಂತೆ. ಪ್ರತಿ ಪುಸ್ತಕವನ್ನು `ಅಧ್ಯಯನ' ಮಾಡುತ್ತಿದ್ದರಂತೆ. ಪ್ರತಿ ಪುಟವೂ, ಪ್ರತಿ ವಿಚಾರವೂ ಮನಸ್ಸಿನ ಆಳವನ್ನು ಪ್ರವೇಶಿಸಿ, ಮೌಲ್ಯಮಾಪನಗೊಂಡು ಸ್ವೀಕೃತವಾಗಿಯೋ, ತಿರಸ್ಕೃತವಾಗಿಯೋ, ಹೊಸದಾಗಿಯೋ ಪರಿವರ್ತನೆಗೊಂಡು ಗಾಂಧಿ ಮುದ್ರೆಯೊಡನೆ ಹೊರಬರುತ್ತಿದ್ದುವಂತೆ. ಹೀಗೆ ಹೊರಬಂದ ಸಂಗತಿಗಳಲ್ಲಿ ತನ್ನದೇನಿದೆ, ತಾನೇನಿದ್ದರೂ ಕೇವಲ ಪುಸ್ತಕದ ಪ್ರತಿಧ್ವನಿ-ಪ್ರತಿಬಿಂಬ ಎಂದು ಗಾಂಧಿ ತೇಲಿಸಿಬಿಡುತ್ತಿದ್ದರಂತೆ.

ಗಾಂಧಿ ವಿವರವಾಗಿ ಬರೆದ ಒಂದೇ ಒಂದು ಪುಸ್ತಕ ವಿಮರ್ಶೆ ಕೂಡ ಓದು-ಬರವಣಿಗೆ ಬಗ್ಗೆ ನಿರ್ದಿಷ್ಟ ಒಳನೋಟಗಳನ್ನು ನೀಡುತ್ತದೆ. ಕ್ಯಾಥರೀನ್ ಮೇಯೋ ಭಾರತದ ಸ್ಥಿತಿ ಕೊಳಕಾಗಿದೆಯೆಂದು ದರಿದ್ರವಾಗಿದೆಯೆಂದು ಆರೋಪಿಸಿ ಬರೆದ ಪುಸ್ತಕ Mother India. Young India ಪತ್ರಿಕೆಯಲ್ಲಿ ಇದನ್ನು ವಿಮರ್ಶಿಸಿ ಗಾಂಧಿ ಪುಸ್ತಕವನ್ನು ಚರಂಡಿ ಇನ್‌ಸ್ಪೆಕ್ಟರ್‌ನ ವರದಿಯಂತಿದೆಯೆಂದು ಬರೆದರು. ಪುಸ್ತಕದಲ್ಲಿರುವ ವಿಷಯ-ಮಾಹಿತಿ, ಸಂಖ್ಯಾ ವಿವರಣೆ ಎಲ್ಲವೂ ನಿಜವಾದವು, ಆದರೆ ಪುಸ್ತಕ ಮಾತ್ರ ಒಟ್ಟಾರೆಯಾಗಿ ಅಪ್ರಾಮಾಣಿಕವಾದ್ದು, ಏಕೆಂದರೆ ಭಾರತದ ಪರವಾಗಿರುವ ಒಂದೇ ಒಂದು ಸಂಗತಿಯ ಕಡೆ ಕೂಡ ಲೇಖಕಿ ಗಮನ ಕೊಟ್ಟಿಲ್ಲವೆಂದು ಸೂಚಿಸಿದರು. ಕೃತಿಯೊಂದು ವಿವರಗಳಲ್ಲಿ ಪ್ರಾಮಾಣಿಕವಾಗಿದ್ದರೂ ಒಟ್ಟಾರೆಯಾಗಿ ಅಪ್ರಾಮಾಣಿಕ ಧ್ವನಿ ಹೊಂದಿರಬಹುದೆಂಬುದು ಮಹತ್ವದ ಒಳನೋಟ.

ದಿವ್ಯ ಗದ್ಯ
ತಾನು ತನ್ನ ಒಳಚೈತನ್ಯ ಸೂಚಿಸಿದಂತೆ ಅದರ ನಿರ್ದೇಶನದಂತೆ ಬರೆಯುತ್ತಾ ಹೋಗುತ್ತೇನೆ ಎಂದು ಗಾಂಧಿ ಬರೆದುಕೊಂಡಿದ್ದರೂ, ಬರವಣಿಗೆಯಲ್ಲಿ ಕಂಡು ಬರುವ ಇನ್ನಿಲ್ಲದ ಸಂಯಮ, ಕರಾರುವಾಕ್ ಪದಗಳ ಬಳಕೆ, ಭಾಷೆಯ ನೇರ ಸ್ಪಷ್ಟ ಗುಣದ ಕಾರಣಗಳನ್ನು ಕುರಿತು ಗಾಂಧಿ ಚಿಂತಕರು ವಿಶ್ಲೇಷಿಸುತ್ತ ಬಂದಿದ್ದಾರೆ.

ಸತ್ಯ ಮತ್ತು ಅಹಿಂಸೆಯ ಶೋಧಕರು, ಆರಾಧಕರೂ ಆಗಿದ್ದ ಗಾಂಧಿಯ ಒಳ ಜೀವನ ತುಂಬಾ ತಳಮಳದಿಂದ ಕೂಡಿದುದಾಗಿತ್ತು. ಈ ತಳಮಳವನ್ನು ನಿಯಂತ್ರಿಸಲು ಆತ್ಮ ಸಂಯಮವನ್ನು ಸಾಧಿಸಲು ಗಾಂಧಿ ಮಾಡುತ್ತಿದ್ದ ನಿರಂತರ ಪ್ರಯೋಗ-ಪ್ರಯತ್ನಗಳ ಇನ್ನೊಂದು ರೂಪವೇ ಬರವಣಿಗೆಯಲ್ಲೂ ಕಾಣುತ್ತಿದ್ದ ಸಂಯಮ, ನಿಗ್ರಹ, ಸ್ಪಷ್ಟತೆ. ಸೃಜನಶೀಲ ಕಲಾವಿದರಲ್ಲಾದರೆ ಪರಿವರ್ತನೆಗೊಳ್ಳುತ್ತದೆ. `ಸತ್ಯಶೋಧನೆ'ಯೆಂಬ ಆತ್ಮಚರಿತ್ರೆ ಬರೆದಾಗಲೂ ಗಾಂಧಿ ತಮ್ಮ ಎಲ್ಲ ಅನುಭವಗಳನ್ನು ಓದುಗರ ಮೇಲೆ ಹೇರಲಿಲ್ಲ. ಯಾವ ಯಾವ ಘಟನೆಗಳನ್ನು ಹೇಗೆ, ಎಷ್ಟು ಹೇಳಬೇಕು ಎಂಬ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಕೃತಿಯುದ್ದಕ್ಕೂ ನಾವು ಕಾಣುತ್ತೇವೆ. ತನ್ನೊಳಗಿರುವುದನ್ನೆಲ್ಲ ಹೇಳಿಬಿಡುತ್ತೇನೆಂದು ಹೊರಟು ಓದುಗನನ್ನು ಸೆಳೆಯುವ, ರಂಜಿಸುವ ಪ್ರಯತ್ನ ತನ್ನ ಬರವಣಿಗೆಯಾಗಬಾರದೆಂಬ ಎಚ್ಚರ ಗಾಂಧಿಯವರಲ್ಲಿ ನಿರಂತರವಾಗಿತ್ತು. ಹೀಗೆಯೇ ಆತ್ಮಚರಿತ್ರೆಯ ಬರವಣಿಗೆ ಬೇರೆ, ಆತ್ಮರತಿ-ಸ್ವಪ್ರೇಮ ಪ್ರದರ್ಶನ ಬೇರೆ ಎಂಬ ಖಚಿತ ತಿಳಿವಳಿಕೆ ಕೂಡ. ಒಳ ಮನಸ್ಸಿನ ಕ್ಷೋಭೆ, ಒತ್ತಾಯ, ತೀವ್ರತೆ ಮತ್ತು ಸಂದೇಶಕ್ಕನುಗುಣವಾಗಿ ಮಾತ್ರವೇ ಗಾಂಧಿ ಬರೆಯುತ್ತಿದ್ದುದು. ಲಂಡನ್‌ನಿಂದ ದಕ್ಷಿಣ ಆಫ್ರಿಕಾಕ್ಕೆ ಹಡಗಿನಲ್ಲಿ ಹಿಂದಿರುಗುತಿದ್ದಾಗ ಕೇವಲ ಹತ್ತೇ ದಿನಗಳಲ್ಲಿ `ಹಿಂದ್ ಸ್ವರಾಜ್' ನಂತಹ ಮಹತ್ವದ ಕೃತಿಯನ್ನು (15ನವೆಂಬರ್‌ನಿಂದ 22ನವೆಂಬರ್1990) ಬರೆದರು - ಹಡಗಿನಲ್ಲಿ ಸಿಕ್ಕ ಕಾಗದದ ಮೇಲೆಯೇ. ಇದಕ್ಕೆ ಮುಂಚೆ ಲಂಡನ್‌ನಲ್ಲಿ ಗಾಂಧಿ ಸಾವರ್ಕರ್‌ರನ್ನು ಭೇಟಿ ಮಾಡಿದ್ದರು. ಇತರ ಹಿಂದೂ ರಾಷ್ಟ್ರೀಯವಾದಿ ಮತ್ತು ಉಗ್ರಗಾಮಿಗಳನ್ನು ಕೂಡ. ಗಾಂಧಿಯ ಮನಪರಿವರ್ತನೆಗೆ ಇವರೆಲ್ಲ ಪ್ರಯತ್ನಿಸಿದ್ದರು. ವಾದ ವಿವಾದ ನಡೆದಿತ್ತು. ಮದನ್‌ಲಾಲ್ ಧಿಂಗ್ರಾ ಉನ್ನತ ಬ್ರಿಟಿಷ್ ಆಧಿಕಾರಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದ. ತನ್ನಷ್ಟೇ ಪ್ರಾಮಾಣಿಕರೂ, ದೇಶಪ್ರೇಮಿಗಳೂ ಆದವರಾದರೂ ಹಿಂಸೆಯಲ್ಲಿ ನಂಬಿಕೆ ಇಟ್ಟವರನ್ನು ಹೇಗೆ ತನ್ನೆಡೆಗೆ ಒಲಿಸಿಕೊಳ್ಳಬೇಕೆಂಬ ಒಳತೋಟಿಯಲ್ಲಿ ಇದನ್ನು ಬರೆದರು ಗಾಂಧಿ.

ತನ್ನೊಡನೆ ವಾದ ಮಾಡುತ್ತಿರುವವರು, ತನ್ನನ್ನು ಓದುತ್ತಿರುವವನು ಕೂಡ ತನಗೆ ಸಮಾನ ಮತ್ತು ತನ್ನಷ್ಟೇ ಪ್ರಾಮಾಣಿಕ ಎನ್ನುವುದು ಬಹುತೇಕ ಕಲಾವಿದರಿಗೆ, ಬರಹಗಾರರಿಗೆ ಗೊತ್ತಿರುವುದಿಲ್ಲ. ಪ್ರತಿಯೊಬ್ಬ ಓದುಗನನ್ನು ಹೀಗೆ ಆಧ್ಯಾತ್ಮಿಕವಾಗಿ ಸಮಾನವಾಗಿ ಬಗೆಯುವ ಒಳನೋಟವು ಈವತ್ತಿನ ನಿರಚನಾವಾದಿಗಳು ಮತ್ತು ನವ್ಯೋತ್ತರ ಚಿಂತಕರು ಹೇಳುವ ಪಠ್ಯದ ತೆರೆದ ಗುಣ ಮತ್ತು ಓದುಗನ ಸ್ವಾಯತ್ತತೆಯೆ ಕಲ್ಪನೆಗಿಂತ ಎಷ್ಟೋ ಮುಂದಿದೆಯೆಂಬುದನ್ನು ಇಲ್ಲಿ ಹೇಳಲೇ ಬೇಕು.

ಚರಿತ್ರೆಗಿಂತ ನಾಗರಿಕತೆಯ ಕಲ್ಪನೆಗೆ ಹೆಚ್ಚು ಒತ್ತು ಕೊಡುತ್ತಿದ್ದ ಗಾಂಧಿ ಕ್ಷಣಕ್ಷಣವೂ ಬದುಕಿದವರು, ಬದಲಾದವರು. ಇಂಥವರ ಒಳ ಜೀವನದ ವಿವರಗಳು ಯಾವುದೇ ರೀತಿಯ ಓದು ಮತ್ತು ಬರವಣಿಗೆಯಲ್ಲೂ ಸಮಗ್ರವಾಗಿ ದಾಖಲಾಗುವುದು ಕಷ್ಟವೇ ಸರಿ. ಏಕೆಂದರೆ ಗಾಂಧಿಗೆ ಬದುಕಿನಲ್ಲಿ ನಿರರ್ಥಕ ಕ್ಷಣವೆಂಬುದೆ ಇರಲಿಲ್ಲ. 1905ರ ಮಾರ್ಚ್ 25ರ ಇಂಡಿಯನ್ ಒಪೀನಿಯನ್ ಪತ್ರಿಕೆಯ ಸಂಚಿಕೆಯಲ್ಲಿ The value of stray moments ಎಂಬ ಟಿಪ್ಪಣಿಯಲ್ಲಿ ಗಾಂಧಿ ಯಾವುದೇ ಕೆಲಸ ಮಾಡದೆ, ಕೆಲಸವನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ಕೆಲಸದ ಬಗ್ಗೆಯೇ ಸುಮ್ಮನೆ ಯೋಚಿಸುತ್ತಾ ಕಳೆದುಹೋಗುವ ನಿರರ್ಥಕ ಸಮಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಬದುಕು ಮತ್ತು ಸಮಯ ಹೀಗೆ ಸುಮ್ಮನೆ ಕಳೆದು ಹೋಗಬಾರದೆಂಬ ನಿಲುವು ಕೂಡಾ ಗಾಂಧಿಯ ಓದು ಮತ್ತು ಬರವಣಿಗೆಯ ಸ್ವರೂಪವನ್ನು ನಿರ್ಧರಿಸಿದಂತಿದೆ.

ಗ್ರಂಥ ಋಣ: Gandhi - The Writer ಭವಾನಿ ಭಟ್ಟಾಚಾರ್ಯ
The Mahatma and the poet ಸವ್ಯಸಾಚಿ ಭಟ್ಟಾಚಾರ್ಯ
Gandhi's Truth ಏರಿಕ್ ಏರಿಕ್‌ಸನ್
Content and Communication in Hind Swaraj ಡಾ.ಕೆ.ರಾಘವೇಂದ್ರ ರಾವ್ ಪ್ರಬಂಧ.

(ವಿಜಯಕರ್ನಾಟಕ ಸಾಪ್ತಾಹಿಕದ ಅಕ್ಟೋಬರ್ ಐದರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)
ಚಿತ್ರಗಳು: ವಿಕ್ರಾಂತ ಕರ್ನಾಟಕ ಕನ್ನಡ ವಾರಪತ್ರಿಕೆಯ ಕೃಪೆ.
ಮುಂದೆ ಓದಿ....

Thursday, December 25, 2008

ಒಳನೋಟ, ಕಳಕಳಿ, ಬುದ್ಧಿವಾದ, ಪುನರುಕ್ತಿ...


ನಾಗಭೂಷಣರ ಈ ಸಮಾಜವಾದಿ ಸಂಕಥನಗಳು ಉದ್ದೇಶದಲ್ಲಿ ಸಮಾಜವೈದ್ಯನೊಬ್ಬನು ರೋಗಿಯ ನಿರಂತರ ಕಾಯಿಲೆ-ಕಸಾಲೆಯಿಂದ ಕೊಂಚವೂ ವಿಚಲಿತಗೊಳ್ಳದೆ ಪ್ರತಿದಿನವೂ ನೀಡುವ ಔಷಧಿ ಮತ್ತು ಕಷಾಯದ ಟಿಪ್ಪಣಿಗಳಂತಿವೆ. ಸಮಕಾಲೀನ ಕರ್ನಾಟಕಕ್ಕೆ, ಭಾರತಕ್ಕೆ, ಜಾಗತಿಕ ವಿದ್ಯಮಾನಗಳಿಗೆ ಗಾಂಧಿ-ಲೋಹಿಯಾ ವೈಚಾರಿಕತೆಯ ಚೌಕಟ್ಟಿನಲ್ಲಿ ಸಂವೇದನಾಶೀಲ ಬರಹಗಾರನೊಬ್ಬ ನೀಡಿದ ಕಳಕಳಿಯ ಪ್ರತಿಕ್ರಿಯೆಯಾಗಿ ಈ ಬರಹಗಳನ್ನು ಗಮನಿಸಬೇಕು.

`ಇದು ಭಾರತ! ಇದು ಭಾರತ!!' ಎಂಬ ಬರಹದಲ್ಲಿ ನಾಗಭೂಷಣ ಸಮಕಾಲೀನ ಕರ್ನಾಟಕದ ಸಮಾಜದ ಬಹುಪಾಲು ವಿಸಂಗತಿಗಳನ್ನು ಕರಾರುವಾಕ್ಕಾಗಿ ನಮೂದಿಸುತ್ತಾರೆ. ಈ ಬರಹದಲ್ಲಿ ನಮೂದಿಸಿರುವ ವಿಸಂಗತಿಗಳ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಇವೆಲ್ಲ ವಿಸಂಗತಿಯನ್ನು ಸೂಚಿಸುವುದರ ಜೊತೆಗೆ ಸದ್ಯದ ತಳಮಳ, ಬದಲಾವಣೆಯ ದಿಕ್ಕನ್ನು ಕೂಡ ಸೂಚಿಸುತ್ತದೆಂಬುದು ಮುಖ್ಯ. ಹೆಚ್ಚಾಗಿ ಸಾಮಾಜಿಕ-ರಾಜಕೀಯ ಜೀವನಕ್ಕೆ, ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವುದೇ ನಾಗಭೂಷಣರ ಉದ್ದೇಶದಂತಿದೆ. ಇದು ಬರಹದ ವ್ಯಾಪ್ತಿಗೆ-ಹರವಿಗೆ ನಾಗಭೂಷಣ ಹಾಕಿಕೊಂಡಿರುವ ಚೌಕಟ್ಟು. ಆದರೆ ಅಂಕಣಕಾರನೊಬ್ಬ ಬದುಕಿನ ವೈವಿಧ್ಯಗಳಿಗೂ ಸ್ಪಂದಿಸಬೇಕಾಗುತ್ತದೆ. ಡಿವಿಜಿ, ಪಿ.ಲಂಕೇಶ್-ಇಂತಹವರ ಬರಹಗಳಲ್ಲಿ ಈ ವೈವಿಧ್ಯವನ್ನೂ ನಾವು ಕಾಣುತ್ತೇವೆ. ನಾಗಭೂಷಣ್‌ಗೆ ಇದು ಗೊತ್ತಿಲ್ಲವೆಂದಲ್ಲ. ಈ ಸಂಗ್ರಹದಲ್ಲಿಲ್ಲದ, ಆದರೆ ನಂತರದ ಪತ್ರಿಕೆಯ ಸಂಚಿಕೆಗಳಲ್ಲಿ ನಾಗಭೂಷಣರೇ ತಮ್ಮ ತಂದೆ ಮತ್ತು ಬೆಕ್ಕನ್ನು ಕುರಿತ ಬರಹಗಳಲ್ಲಿ ತೀರಾ ಸಾರ್ವಜನಿಕ ವಿಷಯಗಳಾಚೆಗೂ ಕೈಚಾಚುವುದನ್ನು ಕಾಣಬಹುದು. ಇಂತಹ ಬರಹಗಳು ಹೆಚ್ಚಾದಷ್ಟು ಓದುಗ ನಾಗಭೂಷಣರ ಸಾಮಾಜಿಕ-ರಾಜಕೀಯ ವಿಶ್ಲೇಷಣೆಯನ್ನು ಇನ್ನೂ ವಿಶ್ವಾಸದಿಂದ, ಸಾವಧಾನದಿಂದ ಗಮನಿಸುತ್ತಾನೆ. ಸ್ವತಃ ಲೋಹಿಯಾರ ಬರಹಗಳಲ್ಲಿರುವ ಸಾಂಸ್ಕೃತಿಕ ವೈವಿಧ್ಯ-ಶ್ರೀಮಂತಿಕೆ ಮತ್ತು ನಾಗಭೂಷಣ ಮೂಲಭೂತವಾಗಿ ವಿಜ್ಞಾನ-ಗಣಿತಶಾಸ್ತ್ರದ ಹಿನ್ನೆಲೆಯಿಂದ ಬಂದವರಾದ್ದರಿಂದ ಈ ಮಾತು.

ಇಲ್ಲಿಯ ಬರಹಗಳನ್ನು ಓದುತ್ತಿದ್ದರೆ ನಾಗಭೂಷಣ ನಮ್ಮ ಸಮಕಾಲೀನ ಜೀವನದಲ್ಲಿ ನಿರಾಶೆ, ಹತಾಶೆ, ಕ್ಷುದ್ರತೆಗಳನ್ನು ಮಾತ್ರ ಗಮನಿಸುತ್ತಿರುವರೇನೋ ಎಂಬ ಭಾವ ಓದುಗರಲ್ಲಿ ಮೂಡಬಹುದು. ರಾಮದಾಸರನ್ನು ಕುರಿತ ಎರಡು ಬರಹಗಳು, ಬಿಹಾರದ ಕಾರ್ಮಿಕ-ಚಿಂತಕ ದಶರಥರನ್ನು ಕುರಿತ ಬರಹದಲ್ಲಿ ನಾಗಭೂಷಣ ಈ ಕಾಲದಲ್ಲಿ ನಿರೀಕ್ಷಿಸುವ ಕ್ರಿಯಾಶೀಲತೆಯ, ವ್ಯಕ್ತಿಚಾರಿತ್ರ್ಯದ ಸ್ವರೂಪದ ರೀತಿ ಯಾವುದಿರಬೇಕೆಂಬ ಸೂಚನೆ ನಮಗೆ ಸಿಗುತ್ತದೆ. ಇದೇ ರೀತಿಯ ಕ್ರಿಯಾಶೀಲತೆ-ಸಾಧನೆಯ ಸ್ವರೂಪವನ್ನು ನಾಗಭೂಷಣ, ಕ್ರೀಡೆ, ಉದ್ಯಮ, ಸಂಗೀತ, ವಿಜ್ಞಾನ ಕ್ಷೇತ್ರಗಳಲ್ಲೂ ಗುರುತಿಸುವುದಾದರೆ, ಎನ್.ಎಸ್.ಶಂಕರ್ ಹಿನ್ನುಡಿಯಲ್ಲಿ ಪರೋಕ್ಷವಾಗಿ ಸೂಚಿಸಿರುವಂತೆ ಓದುಗನ ವೈವಿಧ್ಯಮಯ ಭಾವಸ್ತರಗಳನ್ನು ಮೀಟಲು ಸಾಧ್ಯವಾಗಬಹುದು.

ಬರಹದುದ್ದಕ್ಕೂ ನಾಗಭೂಷಣ ಸೂಚಿಸುವ ಔಷಧಿ-ಕಷಾಯ ಒಂದೇ ರೀತಿಯದು, ಸಮಾಜವಾದಿ ಹಿನ್ನೆಲೆಯದು ಎಂಬ ಕಾರಣಕ್ಕೆ ಬರವಣಿಗೆಯ ಮಹತ್ವ ಕಡಿಮೆಯಾಗುವುದಿಲ್ಲ. ಗಾಂಧಿ-ಲೋಹಿಯಾರ ನಿರ್ದಿಷ್ಟ ತಾತ್ವಿಕ ಹಿನ್ನೆಲೆಯಲ್ಲಿಯೇ ವಿಶ್ಲೇಷಣೆ ನಡೆಯುವುದರಿಂದ ಹೀಗನ್ನಿಸಬಹುದು. ಸೂಚನೆಗಳ ಪುನರಾವರ್ತನೆಯಿದೆ ಎನ್ನಿಸಬಹುದು. ಆದರೆ ತಾತ್ವಿಕ ನಿರ್ದಿಷ್ಟತೆಯನ್ನು ಭಿತ್ತಿಯಾಗಿಟ್ಟುಕೊಂಡ ಎಲ್ಲ ಬರಹಗಳಲ್ಲೂ ಈ ಮಿತಿ ಇದ್ದೇ ಇರುತ್ತದೆ. ಈ ಮಿತಿಯ ಹೊರತಾಗಿಯೂ ನಾವು ಈ ಬರಹಗಳಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಪುಸ್ತಕದುದ್ದಕ್ಕೂ ಸ್ಥಾಯಿಯಾಗಿರುವ ನೈತಿಕ ತೀವ್ರತೆ, ಸಾತ್ವಿಕ ಸಿಟ್ಟು ಮತ್ತು ಮನಸ್ಸಿನ ಆರ್ದ್ರತೆ.

ಸಂವಾದ-ವಾಗ್ವಾದ ಸಂಸ್ಕೃತಿಯೆ ನಮ್ಮಲ್ಲಿ ಕ್ಷೀಣಿಸುತ್ತಿರುವುದನ್ನು ಖೇದದಿಂದ ಗುರುತಿಸುವ ನಾಗಭೂಷಣ ನೇರವಾಗಿಯೇ, ಆದರೆ ಪ್ರಚೋದಕವಾಗಿಯೇ ಬರೆಯುತ್ತಾರೆ. ತನ್ನ ವಿಚಾರ ಕುರಿತಂತೆ ಇನ್ನೊಬ್ಬರು ಎತ್ತುವ ಪ್ರಶ್ನೆಗಳನ್ನು ಕ್ಷುಲ್ಲಕವಾಗಿ ಪರಿಗಣಿಸದೆ ಉತ್ತರ, ಸ್ಪಷ್ಟನೆ ನೀಡುತ್ತಾರೆ. ಈ ಮನೋಭಾವ ಸುಪ್ರೀತ್ ಎಂಬ ಓದುಗರೊಬ್ಬರಿಗೆ ಹೆಚ್ಚಿನ ಓದಿಗೆ ಸೂಚನೆಗಳನ್ನು ಮಾತ್ರ ನೀಡುವುದಿಲ್ಲ, ತಾನು ಬರಹ ಮಾಡುತ್ತಿರುವ ಪತ್ರಿಕೆಯ ಸಂಪಾದಕರೊಡನೆ ಕೂಡ ಭಿನ್ನಮತವನ್ನು ಸೂಚಿಸುತ್ತದೆ. ಇದನ್ನು ಮೆಚ್ಚುತ್ತಲೇ ನಾಗಭೂಷಣ್‌ಗೆ ಇರುವ ಬುದ್ಧಿವಾದವನ್ನು ಮತ್ತೆ ಮತ್ತೆ ಹೇಳುತ್ತಲೇ ಹೋಗುವ ಪ್ರವೃತ್ತಿಯನ್ನು ಕೂಡ ಸೂಚಿಸಬೇಕು. ಪುಟ 97-99ರಲ್ಲಿ ಬಂಜಗೆರೆ ಜಯಪ್ರಕಾಶರಿಗೆ ಬರಹದುದ್ದಕ್ಕೂ ನೀಡುತ್ತಲೇ ಹೋಗುವ ಸೂಚನೆ-ಬುದ್ಧಿವಾದದಲ್ಲಿರುವ ಪುನರುಕ್ತಿಯನ್ನು ಓದುವಾಗ ಯಾರಿಗಾದರೂ ಬೇಸರವಾಗುತ್ತದೆ. ಬುದ್ಧಿವಾದ ಹೇಳುವುದು ಸಂವಾದ-ವಾಗ್ವಾದವನ್ನು ಬೆಳೆಸುವ ಸರಿಯಾದ ಕ್ರಮವಲ್ಲ.

ನಾಗಭೂಷಣರ ಕಾಳಜಿಯ ಸ್ವರೂಪ ಮತ್ತು ಅಧ್ಯಯನದ ಹರವು ಅಂಕಣ ಬರಹದ ವ್ಯಾಪ್ತಿಯನ್ನು ಮೀರಿದ್ದು. ಇಂತಹ ಕಡೆ ನಾಗಭೂಷಣರ ಶಕ್ತಿ ಚೆನ್ನಾಗಿ ಗೊತ್ತಾಗುತ್ತದೆ. ಮುಖ್ಯವಾಗಿ ನಾಗಭೂಷಣ್ ಅಕಾಡೆಮಿಕ್ ಸ್ವಭಾವದವರಲ್ಲವಾದ್ದರಿಂದ ಒಂದು ವಿದ್ಯಮಾನ, ಒಂದು ವಿಚಾರ-ಇವೆಲ್ಲವೂ ಸಮಾಜ ಜೀವನದಲ್ಲಿ ಹೇಗೆ ವ್ಯಕ್ತವಾಗುತ್ತವೆ ಎಂಬುದನ್ನೇ ಗಮನಿಸುತ್ತಾರೆ. ಸಾಮಾಜಿಕ ಚಳುವಳಿಗಳನ್ನು ಕುರಿತಂತೆ ಹೇಳುವ `ಒಂದು ಚಳುವಳಿ ಸಾಮಾಜಿಕ ಚಳುವಳಿ ಅನ್ನಿಸಿಕೊಳ್ಳಬೇಕಾದರೆ ಅದು ಜಾತಿ-ವರ್ಗಗಳನ್ನು ಮೀರಿ ಇಡೀ ಸಮಾಜವನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ತಾತ್ವಿಕತೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ ಹಾಗೂ ಅದರ ಆಧಾರದ ಮೇಲೆ ತನ್ನ ಹೋರಾಟವನ್ನು ಕಟ್ಟಿಕೊಳ್ಳಬೇಕಾಗುತ್ತದೆ' (ಪು.19) ಮಾತಿನಲ್ಲಿ ಸದ್ಯದ ಎಲ್ಲ ಚಳುವಳಿಗಳ ಮಿತಿಗಳನ್ನು ಗುರುತಿಸುವ ನೋಟವಿದೆ, ನೋವಿದೆ.

ಹೆಸರು ಹೇಳಿದರೆ ಸಾಕು. ಯಾರು ಏನು ಹೇಳುತ್ತಾರೆಂದು, ಬರೆಯುತ್ತಾರೆಂದು ಊಹಿಸಬಹುದು. ಈ ಹಿನ್ನೆಲೆಯಲ್ಲಿ ಈ ಸಂಪುಟದ ಉತ್ತಮ ಲೇಖನಗಳಲ್ಲೊಂದಾದ "ಬುದ್ಧ ಮತ್ತು ಹಿಂದೂ ಧರ್ಮ" ವನ್ನು ಗಮನಿಸಬೇಕು.

ಇದೇ ಸ್ವರೂಪದ ಇನ್ನೆರಡು ಬರಹಗಳು: `ಮೈ ಮರೆತಂತಿರುವ ನಮ್ಮ ಸೆಕ್ಯುಲರ್ ರಾಜಕಾರಣ' ಮತ್ತು `ಹಿಂದೂ ಕೋಮುವಾದ ಮತ್ತು ಬುದ್ಧಿಜೀವಿಗಳ ಪೀಕಲಾಟ'. ಕೋಮುವಾದಿಗಳ ಹಿಂಸೆ ಮತ್ತು ದುರುದ್ದೇಶ ಮತ್ತು ಸೆಕ್ಯುಲರ್‌ವಾದಿಗಳ ಸೀಮಿತ ಸಾಂಸ್ಕೃತಿಕ ಗ್ರಹಿಕೆ ಎರಡನ್ನೂ ಒಟ್ಟಿಗೇ ತರಾಟೆಗೆ ತೆಗೆದುಕೊಳ್ಳುವ ಬರಹಗಳು ಇವು. ಈ ಬರಹಗಳಲ್ಲಿ ವ್ಯಕ್ತವಾಗಿರುವ ವಿಚಾರಗಳ ಹಿನ್ನೆಲೆಯಲ್ಲಿ ಧರ್ಮ-ಸಂಸ್ಕೃತಿ-ರಾಜಕಾರಣಕ್ಕಿರುವ -ಇರಲೇಬೇಕಾದ ಸಂಬಂಧ, ಒತ್ತಾಸೆಗಳನ್ನು ಕುರಿತು ಮುಕ್ತಮನಸ್ಸಿನ ಚರ್ಚೆ ನಡೆಯುವುದಾದರೆ ಮತಾಂತರ ಕುರಿತಂತೆ ಈವತ್ತು ನಡೆಯುತ್ತಿರುವ ರೂಕ್ಷ ಸಂವಾದಕ್ಕೆ ಹೊಸ ದಿಕ್ಕು ತೋರಿದಂತಾಗುತ್ತದೆ.

ಸಂವಾದ ಪತ್ರಿಕೆ, ಆಕಾಶವಾಣಿಯಲ್ಲೆಲ್ಲ ಕ್ರಿಯಾಶೀಲರಾಗಿದ್ದಾಗ, ಸಾಹಿತ್ಯ ವಿಮರ್ಶೆ ನಾಗಭೂಷಣರ ಮುಕ್ತ ಆಸಕ್ತಿಗಳಲ್ಲೊಂದಾಗಿತ್ತು. ಇಲ್ಲಿಯ ಬರಹಗಳನ್ನು ಗಮನಿಸಿದರೆ ಅದು ಪ್ರಾಸಂಗಿಕವಾದಂತಿದೆ. ಈ ಬದಲಾವಣೆ ನಾಗಭೂಷಣರ ಬಗ್ಗೆಯೂ, ನಮ್ಮ ಸಾಂಸ್ಕೃತಿಕ ವಾತಾವರಣದ ಬಗ್ಗೆಯೂ ಏನನ್ನು ಹೇಳುತ್ತದೆ!?
(ವಾರಪತ್ರಿಕೆ `ವಿಕ್ರಾಂತ ಕರ್ನಾಟಕ' ಡಿಸೆಂಬರ್ 26 ಸಂಚಿಕೆಯಲ್ಲಿ ಪ್ರಕಟಿತ. ಚಿತ್ರಗಳು ಪತ್ರಿಕೆಯ ಕೃಪೆ.)

ಇದು ಭಾರತ! ಇದು ಭಾರತ!! (ಸಮಾಜವಾದಿ ಸಂಕಥನಗಳು-2)
ಲೇ: ಡಿ.ಎಸ್.ನಾಗಭೂಷಣ
ಪುಟ:296, ಬೆಲೆ:150 ರೂ.
ಪ್ರ: ರೂಪ ಪ್ರಕಾಶನ, ಮೈಸೂರು ಮುಂದೆ ಓದಿ....

Sunday, November 30, 2008

ಇವಾನ್ ಇಲಿಚ್ ಮತ್ತು ಮಂತ್ರೋದಯ - ಒಂದು ಜೊತೆ ಓದು

ನಮಗೆ ಗೊತ್ತಿಲ್ಲದೆ ನಾವು ಕೆಲವು ಕತೆಗಳನ್ನು ಒಟ್ಟಿಗೇ ಓದುತ್ತಿರುತ್ತೇವೆ. ಮಾಸ್ತಿಯವರ ಮಂತ್ರೋದಯ ಮತ್ತು ಟಾಲ್ಸ್ಟಾಯ್ Death of Ivan Ilyich ಕತೆಗಳನ್ನು ನಾನು ಹೀಗೇ ಬಹಳ ವರ್ಷಗಳಿಂದ ಒಟ್ಟೋಟ್ಟಿಗೇ ಓದಿಕೊಂಡು ಬಂದಿದ್ದೇನೆ. ಸ್ನೇಹಿತರಿಗೂ ಓದಲು ಸೂಚಿಸುತ್ತಿರುತ್ತೇನೆ. ಕನ್ನಡ ಬಾರದ ಗೆಳೆಯರಿಗೆ ಮಾಸ್ತಿಯವರ ಕತೆಯ ಸಾರಾಂಶ ಮತ್ತು ದರ್ಶನವನ್ನು ನಾನೇ ಹೇಳುತ್ತೇನೆ. ಕಾಲಾಂತರದಲ್ಲಿ ಕೂಡ ನನಗೆ ಎರಡು ಕತೆಗಳ ಜೊತೆ ಓದಿನಲ್ಲಿ ಶ್ರದ್ಧೆ-ಆಸಕ್ತಿ ಕಡಿಮೆಯಾಗಿಲ್ಲ. ಅನುಭವವನ್ನು ಓದುಗರೊಂದಿಗೆ ಹಂಚಿಕೊಳ್ಳುವುದು ಟಿಪ್ಪಣಿಗಳ ಉದ್ದೇಶ. ಇವೆರಡು ಕತೆಗಳನ್ನು ಹೋಲಿಸುವ, ಮೌಲ್ಯಮಾಪನ ಮಾಡುವ ವಿಮರ್ಶಾತ್ಮಕ ಉದ್ದೇಶ ನನ್ನದಲ್ಲವೆಂದು ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ.

ಕನ್ನಡದ ಓದು ಬಹಳ ವರ್ಷಗಳಿಂದ ಟಾಲ್ಸ್ಟಾಯ್ನನ್ನ ಸಂಸ್ಕೃತಿಯ ಒಳಗಿನವನನ್ನಾಗಿಯೇ ಸ್ವೀಕರಿಸಿದ. ಸ್ವೀಕಾರ 1934ರಲ್ಲಿ ಎಲ್.ಗುಂಡಪ್ಪನವರ ಟಾಲ್ಸ್ಟಾಯ್ ಕಥೆಗಳ ಕನ್ನಡಾನುವಾದದಿಂದ ಪ್ರಾರಂಭವಾಗುತ್ತದೆ. ಕುವೆಂಪು ಮಹಾ ಕಾದಂಬರಿಗಳ ಸ್ವರೂಪದ ಹಿಂದೆ ಟಾಲ್ಸ್ಟಾಯ್ ಎರಡೂ ಕಾದಂಬರಿಗಳ ಸ್ವರೂಪದ ಪ್ರಭಾವವಿದೆ. ಕುವೆಂಪುವಿನಲ್ಲಿ ಕಾಣುವ ಬೇಟೆ ಪ್ರಸಂಗಗಳು, ಮಗುವಿಗೆ ಮೊಲೆಯ ಹಾಲೂಡಿಸುವ ಪ್ರಸಂಗಗಳು ಟಾಲ್ಸ್ಟಾಯ್ ಕಾದಂಬರಿಗಳಲ್ಲೂ ಇವೆ. ಮಾಸ್ತಿ ತಮ್ಮ ಚಿಕವೀರ ರಾಜೇಂದ್ರ ಕಾದಂಬರಿ ಬರವಣಿಗೆಯ ಗುಣಮಟ್ಟದ ದೃಷ್ಟಿಯಿಂದ ಟಾಲ್ಸ್ಟಾಯ್ War and Peaceಗಿಂತ ಉತ್ತಮವೆಂದು ನಂಬಿದ್ದರು. "ಟಾಲ್ಸ್ಟಾಯ್ ಮಹರ್ಷಿಯ ಭೂರ್ಜ ವೃಕ್ಷಗಳು" ಎಂಬ ಪ್ರಸಿದ್ಧ ಕತೆಯೂ ಇದೆ. ಭೀಮಸೇನ ಜೋಶಿಯವರ ತಂದೆ ಗುರುರಾಜ ಜೋಶಿಯವರು "Anna Karenina" ಕಾದಂಬರಿಯನ್ನು "ಪ್ರೇಮಾಹುತಿ" ಎಂದು ಕನ್ನಡೀಕರಿಸಿದ್ದರು. ಕುವೆಂಪು - ಸೂಚನೆ - ಮಾರ್ಗದರ್ಶನದ ಮೇಲೆ ದೇಜಗೌ ಟಾಲ್ಸ್ಟಾಯ್ ಎರಡೂ ಕಾದಂಬರಿಗಳನ್ನು ಕುವೆಂಪು ನುಡಿಗಟ್ಟಿನಲ್ಲೇ ಅನುವಾದಿಸಿದರು. ಟಿ.ಪಿ. ಅಶೋಕ "ಫಾದರ್ ಸೆರ್ಗಿಯಸ್", ಜಿ.ಎನ್.ರಂಗನಾಥರಾವ್ ಟಾಲ್ಸ್ಟಾಯ್ ನೀಳ್ಗತೆಗಳು, .ಎಲ್.ನಾಗಭೂಷಣಸ್ವಾಮಿ - ಟಾಲ್ಸ್ಟಾಯ್ ನೀಳ್ಗತೆಗಳು - ಹೀಗೇ ಪರಂಪರೆ ಮುಂದುವರೆಯುತ್ತಲೇ ಇದೆ. .ಎಲ್.ಎನ್. War and Peace ಅನುವಾದ ಮುಗಿಸಿದ್ದರೆ, ಎಚ್.ಎಸ್.ರಾಘವೇಂದ್ರರಾವ್ "Anna Karenina" ಅನುವಾದವನ್ನು ಮುಗಿಸುತ್ತಿದ್ದಾರೆ. ಪಿ.ಲಂಕೇಶ್ ಕೆಲವು ಕತೆಗಳನ್ನು ರೂಪಾಂತರಿಸಿದ್ದಾರೆ. ಬಹು ಹಿಂದೆಯೇ ಕತೆಗಾರ ಆನಂದರು ಟಾಲ್ಸ್ಟಾಯ್ ಆತ್ಮಕತೆಯನ್ನು ಕನ್ನಡಕ್ಕೆ ತಂದಿದ್ದರು. ಎಲ್ಲ ಬರವಣಿಗೆಗಳಿಂದಾಗಿಯೂ ಟಾಲ್ಸ್ಟಾಯ್ ಪ್ರಸಿದ್ಧ ಕತೆಯನ್ನು ಮಾಸ್ತಿಯವರ ಕತೆಯೊಡನೆ ಒಟ್ಟಾಗಿ ಓದಲು ನನಗೆ ಪ್ರೇರಣೆ ಸಿಕ್ಕಿರಬಹುದು.

ಎರಡೂ ಕತೆಗಳು ಸಾವನ್ನು ಕುರಿತದ್ದೇ. ಕಾರಣಕ್ಕೇ ಬದುಕನ್ನು ಕುರಿತದ್ದು ಕೂಡ. ಸಾವನ್ನು ಒಪ್ಪಿಕೊಳ್ಳುವ, ಗೆಲ್ಲುವ, ವಿವರಿಸಿಕೊಳ್ಳುವ ಪ್ರಯತ್ನದಲ್ಲಿ ಎರಡು ಕತೆಗಳಲ್ಲಿ ಬದುಕನ್ನು ಕುರಿತ ದರ್ಶನವಿದೆ. ಹೀಗಾಗಿ ಇವುಗಳ ಜೊತೆ ಓದು ತಪ್ಪಿಲ್ಲದೆ ಇರಬಹುದೆಂದು ನನ್ನ ಭಾವನೆ.

ಇವಾನ್ ಇಲಿಚ್ ಕತೆಯನ್ನು ಟಾಲ್ಸ್ಟಾಯ್ 1884-1886 ಕಾಲಾವಧಿಯಲ್ಲಿ ಬರೆದರು. ಹೊತ್ತಿಗಾಗಲೇ ಇವರ ಎರಡು ಮಹಾ ಕಾದಂಬರಿಗಳು ಪ್ರಕಟವಾಗಿದ್ದವು. Anna ಕಾದಂಬರಿ ಬರೆದ ಏಳೆಂಟು ವರ್ಷಗಳ ನಂತರವೂ ಅವರು ಮತ್ತೆ ಸೃಜನಶೀಲ ಕಾದಂಬರಿ ರಚನೆಗೆ ಕೈಹಾಕಿರಲಿಲ್ಲ. ಮೇಲಾಗಿ ಟಾಲ್ಸ್ಟಾಯ್ ತಮ್ಮ ಬದುಕಿನ ಘಟ್ಟದಲ್ಲಿ ಸಾಹಿತ್ಯ - ಕಲೆಯ ಉದ್ದೇಶಗಳ ಕುರಿತಂತೆ ಬೇರೆಯೆ ರೀತಿಯಲ್ಲಿ ಯೋಚಿಸುತ್ತಿದ್ದರು. ಜೀವನದಲ್ಲಿ ಧರ್ಮ, ನೀತಿ, ಪ್ರೀತಿ, ದೈವಿಕತೆ ಇವುಗಳ ಸ್ಥಾನಮಾನವನ್ನು ಕುರಿತು ಚರ್ಚಿಸುವಂತಹ ನೀತಿ-ಧಾರ್ಮಿಕ ಕತೆಗಳು, ಲೇಖನಗಳ ಕಡೆಗೇ ಹೆಚ್ಚಾಗುತ್ತಿತ್ತು. ಆತ್ಮ ಜಿಜ್ಞಾಸೆ, ಒಳತೋಟಿ, ಆತ್ಮಪರೀಕ್ಷೆಗಳು ತೀವ್ರವಾಗಿದ್ದ ಬದುಕಿನ ಸಂದರ್ಭದಲ್ಲಿ ತನ್ನ ಜೀವನದ ಪರಮೋದ್ದೇಶವೇನು, ತನ್ನ ಜೀವನ ಸಾರ್ಥಕವಾಗಿದೆಯೇ ಇಲ್ಲವೇ ಎಂಬ ತಹತಹದಲ್ಲಿ ಬರೆದ ಘಟ್ಟದ ನೀಳ್ಗತೆಯಲ್ಲಿ ಮುಖ್ಯವಾದದ್ದು - ಇವಾನ್ ಇಲಿಚ್.

ಸಾಮಾಜಿಕವಾಗಿ, ಸಾಂಸಾರಿಕವಾಗಿ ಯಶಸ್ಸನ್ನು ಕಂಡಿದ್ದೇನೆಂದು ಭಾವಿಸಿದ್ದ ನ್ಯಾಯಾಂಗ ಇಲಾಖೆಯ ಅಧಿಕಾರಿಯೊಬ್ಬನ ಕೊನೆಯ ದಿನಗಳ ಕತೆ ಇಲಿಚ್. ಒಟ್ಟಾರೆಯಾಗಿ ಇಲಿಚ್ ಜೀವನ ವಿಫಲವಾಗಿತ್ತೆಂಬ ಧ್ವನಿಯಿಂದಲೇ ಕತೆ ಪ್ರಾರಂಭವಾಗುತ್ತದೆ. Appalling ಎಂಬ ಪದದಿಂದಲೇ ಕತೆ ಪ್ರಾರಂಭ. ಪದ ಕತೆಯಲ್ಲು Father Sergius ಕತೆಯಲ್ಲು ಮತ್ತೆ ಮತ್ತೆ ಎದುರಾಗುತ್ತದೆ. ಪದದ ಅರ್ಥವನ್ನು ಮೂಡಿಸುವಂತಹ Befell, Dismal, Aggravated ಇಂತಹ ಪದಗಳು ಕತೆಯುದ್ದಕ್ಕೂ ಎದುರಾಗುತ್ತವೆ. ಇಂತಹ ಪದಗಳಿಂದ ಮಾತ್ರ ವರ್ಣಿಸಲು ಸಾಧ್ಯವಿರುವ ಜೀವನ ನಡೆಸಿರುವ ಇಲಿಚ್ ತನ್ನ ದೇಹದ ಮಿತಿಯನ್ನು, ಕಾಯಿಲೆಯನ್ನು, ರೋಗರುಜಿನವನ್ನು ಕೂಡ ಪ್ರಾಮಾಣಿಕವಾಗಿ ಒಪ್ಪಲಾರ, ಎದುರಿಸಲಾರ. ತನ್ನ ದೇಹ, ತನ್ನ ರೋಗದ ಬಗ್ಗೆ ಕೂಡ ಆತನದು ಭಯಭೀತ, ಭ್ರಮಾದಿತ ಸ್ಥಿತಿ. ಸೋರಿಹೋಗುತ್ತಿರುವ ಜೀವನ, ಆರಿಹೋಗುತ್ತಿರುವ ಸಾಂಸಾರಿಕ-ಸಾಮಾಜಿಕ ಸಂಬಂಧಗಳನ್ನು ಕಂಡು, ತಿಳಿದು ಕೂಡ ಆತ ಭಯಭೀತ. ಸಾವಿನ ಭಯವಿದೆ ಆತನಿಗೆ. ಆದರೆ ಮೃತ್ಯುಪ್ರಜ್ಞೆಯ ಅರಿವಿನಿಂದ ಮೂಡಿಬರುವ ತಿಳುವಳಿಕೆ, ಸಮಾಧನವಿಲ್ಲ. ಇಡೀ ಬದುಕೆ `ನಿಜ'ದಿಂದ ದೂರ ಬಂದು ನಡೆಸಿದ ಘಟನಾವಳಿಗಳ ಸರಮಾಲೆಯಾಗಿ ಕಾಣುತ್ತದೆ. ಬಾಲ್ಯಜೀವನದ ದಿನಗಳು, ಸಂಬಂಧಗಳು ಮಾತ್ರ ನಿಜವಾಗಿದ್ದವು ಎನಿಸುತ್ತದೆ. ಟಾಲ್ಸ್ಟಾಯ್ ಪ್ರಕಾರ ಇದಕ್ಕೆಲ್ಲ ಇಲಿಚ್ ಜೀವನ ಶೈಲಿಯ ಜೊತೆಗೆ ಆತನಲ್ಲಿ ದೈವದ ಅಸ್ತಿತ್ವದಲ್ಲಿ ನಂಬುಗೆ ಇಲ್ಲದೆ ಹೋದದ್ದು ಕೂಡ ಕಾರಣ. ಇದಕ್ಕಿಂತ ಮುಖ್ಯವಾಗಿ ಇಲಿಚ್ ಬದುಕಿನುದ್ದಕ್ಕು ಮಾತಿನ ಧ್ವನಿ (Voice of Speaking)ಯನ್ನ ಕೇಳಿಸಿಕೊಳ್ಳುತ್ತಾ ಬಂದವನು, ಆತ್ಮದ ಧ್ವನಿ (Voice of Soul)ಯನ್ನಲ್ಲ. ಇಂತಹ ಇಲಿಚ್ ನಿಜದಿಂದ ದೂರಾಗಿ ತಾನು ನಡೆಸಿದ ತನ್ನ ಜೀವನದ ಬಗ್ಗೆ ನಿಜವನ್ನು ತಿಳಿದುಕೊಳ್ಳುವುದು, ಒಪ್ಪಿಕೊಳ್ಳುವುದು, ಸಾವನ್ನು ಕೂಡ ಸಾವಿನ ಭಯದಿಂದ ಗೆಲ್ಲುವುದು - ದಿಕ್ಕಿನಲ್ಲಿ ನಡೆಸಿದ ಪಯಣವನ್ನು ಕತೆ ನಮ್ಮದೆ ಪಯಣವೆನ್ನುವಂತೆ ನಮಗೆ ಸಾಕ್ಷಾತ್ಕಾರ ಮಾಡಿಕೊಡುತ್ತದೆ. ಸಾರ್ಥಕ ಜೀವನವೆಂದರೇನು ಎಂಬುದರ ಕಲ್ಪನೆ, ವಿಫಲ ಜೀವನದ ಚಿತ್ರಣವನ್ನು ಓದುವುದರ ಮೂಲಕ ನಮಗೆ ತಿಳಿಯುತ್ತದೆ. ತನ್ನ ಒಳತೋಟಿಯನ್ನು ಬರವಣಿಗೆಯನ್ನಾಗಿ ಪರಿವರ್ತಿಸುತ್ತಿದ್ದ ಟಾಲ್ಸ್ಟಾಯ್ ಕತೆಯ ನಂತರ ಬರೆದ ಕತೆ ಬರವಣಿಗೆಗಳಲ್ಲೆಲ್ಲ ಜೀವನದ ಸಾರ್ಥಕತೆಯ ಬಗ್ಗೆ ಜಿಜ್ಞಾಸೆ ಮುಂದುವರಿಯುತ್ತದೆ. ಒಟ್ಟಾರೆಯಾಗಿ ಆತನ ನಿಲುವು ನೀತಿಪರ-ಧಾರ್ಮಿಕ ಬರವಣಿಗೆ, ಸಸ್ಯಾಹಾರ, ಅಹಿಂಸೆ, ರಾಜ್ಯಾಧಿಕಾರವನ್ನು ವಿರೋಧಿಸುವುದು - ದಿಕ್ಕಿನಲ್ಲೇ ಸಾಗುತ್ತದೆ. ಮೊದಲೇ ಹೇಳಿದ ಹಾಗೆ Anna ಕಾದಂಬರಿ ಬರೆದ ಏಳೆಂಟು ವರ್ಷಗಳ ನಂತರ ಬರೆದ ನೀಳ್ಗತೆ ಇದು. ಕಾಲಾವಧಿಯಲ್ಲಿ ತತ್ವಶಾಸ್ತ್ರವನ್ನು ಬಹಳವಾಗಿ ಓದುತ್ತಿದ್ದ ಟಾಲ್ಸ್ಟಾಯ್ ದಿನಚರಿಯ ನೆರವಿನಿಂದ ಕೆಲವು ಉಲ್ಲೇಖಗಳನ್ನು, ಟಾಲ್ಸ್ಟಾಯ್ ಜೀವನ ಚರಿತ್ರಕಾರರು ಗುರುತಿಸಿದ್ದಾರೆ. ಇಲಿಚ್ ಕತೆಯ ಹಿಂದಿರುವ ಒಳತೋಟಿಯನ್ನು ಸ್ಪಷ್ಟ ಮಾಡಿಕೊಳ್ಳಲು ಇವು ನೆರವಾಗುವುದರಿಂದ ಕೆಲವನ್ನು ಇಲ್ಲಿ ಸೂಚಿಸುತ್ತಿದ್ದೇನೆ.

The life of body is an Evil and lie. And that is why we should desire its destruction as a blessiing.
- Socrates
Man will die and nothing will remain of him
-Solomon
We must free ourselves from life, from all possibilities of life
-Buddha

ಮಾಸ್ತಿಯವರ "ಮಂತ್ರೋದಯ" ಕತೆ ಈಶಾವ್ಯಾಸ ಉಪನಿಷತ್‌ನ ರಚನೆಗೆ ಕಾರಣನಾದ ವಾಮದೇವ ದ್ವೈಪಾಯನನ ಜೀವನ ಶೈಲಿ-ದರ್ಶನವನ್ನು ಕುರಿತದ್ದು. ಕತೆಯ ಶೀರ್ಷಿಕೆಯ ಜೊತೆಯೇ ಆವರಣದಲ್ಲಿ "ಕರ್ಮಯೋಗದ ಕೊನೆಯ ದಿನ" ಎಂದು ಸೂಚಿಸಲಾಗಿದೆ. ಕತೆಯ ಮೊದಲ ವಾಕ್ಯವೇ ಹೀಗಿದೆ.

"ಮಹರ್ಷಿ ವಾಮದೇವ ದ್ವೈಪಾಯನ ಅರುಣೇಯ ಆ ದಿನ ನೂರು ವರ್ಷದ ಬಾಳನ್ನು ಪೂರ್ಣ ಮಾಡುವರೆಂದು"

ಸೇವೆ, ತ್ಯಾಗ, ಆತ್ಮಜ್ಞಾನ, ಪ್ರಕೃತಿಯೊಡನೆ ತಾದ್ಯಾತ್ಮ-ಇದೆಲ್ಲವನ್ನು ತುಂಬಿಕೊಂಡವನು ಜೀವನವನ್ನು, ಹಾಗಾಗಿ ಸಾವನ್ನೂ ಹೀಗೆ ಸ್ವೀಕರಿಸುತ್ತಾನೆಯೆಂಬುದು ಕತೆಯ ತಿರುಳು. ಈ ಕತೆಯಲ್ಲಿ ಬರುವ ಪ್ರಕೃತಿಯ ಉಲ್ಲಾಸ ತುಂಬಿದ ವಿವರಗಳಾಗಲೀ, ಸಸ್ಯಲೋಕದ, ಸಣ್ಣ ಪುಟ್ಟ ಪ್ರಾಣಿಗಳ ವಿವರಗಳಾಗಲೀ ಆತ್ಮ ಜಿಜ್ಞಾಸೆಯಿಂದ ತುಂಬಿದ ಇಲಿಚ್ ಕತೆಯಲ್ಲಿ ಇಲ್ಲವೆಂಬುದನ್ನು ಗಮನಿಸಬೇಕು. ಸೂರ್‍ಯ, ಚಂದ್ರರು ಕೂಡ ಈ ಕತೆಯ ಭಾಗ. ತುಂಬಿದ ಸಾರ್ಥಕ ಜೀವನ ನಡೆಸಿದ ದ್ವೈಪಾಯನಿಗೆ ಸಾವಿನ ಭಯವೇ ಇಲ್ಲ. ತಾನು ಕಂಡದ್ದನ್ನೂ, ಬದುಕಿದ್ದನ್ನೂ ಸ್ಮರಿಸುತ್ತಲೇ ಜೀವನದ ಕೊನೆಯನ್ನು ಒಪ್ಪುವ ಈ ದರ್ಶನದಲ್ಲಿ ದ್ವೈಪಾಯನನ ಕೊನೆ ಕೊನೆಯ ಮಾತುಗಳು ಹೀಗಿವೆ.

"ಕೃತುವನ್ನು ಸ್ಮರಿಸು, ಕೃತವನ್ನು ಸ್ಮರಿಸು, ಧ್ಯೇಯವನ್ನು ಸ್ಮರಿಸು. ಸಾಧಿಸಿದ್ದನ್ನು ಸ್ಮರಿಸು"

"ಕೃತು ಯಾವುದು"

"ನೆಲವೆಲ್ಲ ನಂದನವನವಾಗಬೇಕು, ಇದರಂತೆ ಒಳಬಾಳು ಸುಂದರ ಸಫಲ ಆಗಬೇಕು"

ಸಾವನ್ನು ಒಪ್ಪುವ, ಗೆಲ್ಲುವ, ಸ್ವೀಕರಿಸುವ ಈ ದರ್ಶನದಲ್ಲಿ ಜೀವನದ ಸೃಷ್ಟಿಯ ನಿತ್ಯನೂತನತೆಯನ್ನೂ ಚರಾಚರ ಸ್ವಭಾವವನ್ನು ನಂಬಿದ ಧೋರಣೆಯು ತುಂಬಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಉಪನಿಷತ್‌ಗಳಲ್ಲೇ ತುಂಬ ಕಿರಿದಾದ, ಕೇವಲ ಹದಿನೆಂಟು ಶ್ಲೋಕಗಳನ್ನು ಮಾತ್ರ ಹೊಂದಿದ ಈ ಉಪನಿಷತ್ ದರ್ಶನವನ್ನೇ ಏಕೆ ತಮ್ಮ ಕತೆಯಲ್ಲಿ ಮತ್ತೆ ಪೃಥಕ್ಕರಿಸಲು ಮಾಸ್ತಿ ಆಯ್ಕೆ ಮಾಡಿಕೊಂಡರು? ಕತೆಯ ವಿವರಗಳು ಸೂಚಿಸುವಂತೆ ಉಪನಿಷತ್‌ನ ಈ ದರ್ಶನವೆಲ್ಲ ದ್ವೈಪಾಯನನ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿದೆ.

1. ಪೂರ್ಣತೆಯನ್ನು ಒಪ್ಪಿಕೊಳ್ಳುವುದು, ಪೂರ್ಣವಾಗಿ ಬಾಳುವುದೆಂದರೆ ಜಗತ್ತೆಂಬ ವಸ್ತು ಮತ್ತು ಬದುಕೆಂಬುದರ ಹಿಂದಿರುವ ತತ್ವವನ್ನು ಒಪ್ಪಿಕೊಳ್ಳುವುದು.

2. ಜಗತ್ತನ್ನು, ಬದುಕನ್ನು, ತ್ಯಾಗದಿಂದ, ಸೇವೆಯಿಂದ ಒಳಗು ಮಾಡಿಕೊಳ್ಳಲು ಪ್ರಯತ್ನಿಸುವುದು. ("ತೇನ ತ್ಯಕ್ತೇನ ಭುಂಜೀಥಾ')

3. ತಿಳಿಯುವುದು ಎಂದರೆ ಬೌದ್ಧಿಕವಾಗಿ ತಿಳಿಯುವುದಲ್ಲ. ಅನುಭವದಿಂದ ತಿಳಿಯುವುದು. ಎಲ್ಲ ಜೀವರಾಶಿಗಳಲ್ಲಿಯೂ ಜೀವನದ ಹಿಂದಿರುವ, ಸತ್ಯವನ್ನು ತಿಳಿದಾಗ ಅನುಭವ ಅನುಭಾವವಾಗುತ್ತದೆ. ಕೇವಲ ಅನುಭವದಿಂದ ಏನೂ ಪ್ರಯೋಜನವಾಗದು.

ಈ ಉಪನಿಷತ್‌ನ ವಿಶೇಷವೆಂದರೆ ಬದುಕಿನ ವಿಸರ್ಜನೆಗೆ ನಡೆಸುವ ಪ್ರಾರ್ಥನೆ, ಅಮೃತತ್ವಕ್ಕೆ ನಡೆಸುವ ಪ್ರಾರ್ಥನೆ, ಜೀವನದ ಸಾರ್ಥಕತೆಯ ಬಗ್ಗೆ ನಂಬುಗೆ, ಇವೆಲ್ಲ ಬೇರೆ ಬೇರೆಯಲ್ಲವೆಂದು ಸೃಷ್ಟಿಯನ್ನೇ ಪ್ರಾರ್ಥಿಸುವುದು.

17ನೆಯ ಶ್ಲೋಕದ ಕನ್ನಡಾನುವಾದವನ್ನು ನೋಡಿ.

"ನನ್ನ ಪ್ರಾಣ ಸರ್ವವ್ಯಾಪಿಯಾದ ಅಮೃತಾತ್ಮವನ್ನು ಸೇರಲಿ. ಈ ದೇಹ ಬೂದಿಯಾಗಲಿ. ಓಂ ಮನಸ್ಸೆ ಸ್ಮರಿಸು. ಮಾಡಿರುವುದನ್ನು ಸ್ಮರಿಸು. ಓಂ ಮನಸ್ಸೆ ಸ್ಮರಿಸು. ಮಾಡಿರುವುದನ್ನು ಸ್ಮರಿಸು"

ಪ್ರಾಸಂಗಿಕವಾಗಿ ಇಲ್ಲಿ ಹೇಳಬಹುದಾದ ಒಂದು ಮಾತೆಂದರೆ ಗಾಂಧಿಯ ದಿನನಿತ್ಯದ ಪ್ರಾರ್ಥನೆಯಲ್ಲಿ ಈ ಉಪನಿಷತ್ ಕೂಡ ಒಂದು ಭಾಗವಾಗಿತ್ತೆಂಬುದು. ಟಾಲ್‌ಸ್ಟಾಯ್ ಕತೆಯಲ್ಲಿ ಜಿಜ್ಞಾಸೆಯಿದೆ, ಪ್ರಾರ್ಥನೆಯಿಲ್ಲ. ತೀವ್ರತೆಯಿದೆ, ಸಮಾಧಾನವಿಲ್ಲ. ಶಾಂತಿಯಿಲ್ಲ, ಭರವಸೆಯಿಲ್ಲ.

ಎಲ್ಲ ಶ್ರೇಷ್ಠ ಲೇಖಕರು ಸಾವು, ದೈವ, ಕಾಮವನ್ನು ಕುರಿತು ತಮ್ಮದೇ ಆದ ದರ್ಶನವನ್ನು ಮಂಡಿಸುತ್ತಾರೆ. ಈ ಮೂರಂಶಗಳಲ್ಲಿ ಯಾವುದಾದರೂ ಒಂದಂಶದ ಗೈರುಹಾಜರಿಯಾದರೂ ಲೇಖಕನ ದರ್ಶನದಲ್ಲೇ ಏನೋ ಚ್ಯುತಿಯಿದೆಯೆಂದೇ ಲೆಕ್ಕ ಎಂಬುದೊಂದು ಈವತ್ತಿನ ಸಾಹಿತ್ಯಿಕ ನಂಬಿಕೆ. ಯಾವ ದರ್ಶನ ನಮಗೆ ಹೆಚ್ಚು ಪ್ರಸ್ತುತ, ಆತ್ಮೀಯವೆಂಬ ಪ್ರಶ್ನೆ ಈ ಎರಡೂ ಕತೆಗಳ ಜೊತೆ ಓದಿನಿಂದ ಜಾಗೃತವಾಗುತ್ತಲೇ ಇರುತ್ತದೆ.

ಆಧುನಿಕ ಸಾಹಿತ್ಯ ಚಿಂತನೆ, ಬಹುಪಾಲು ಮನುಷ್ಯ ಕೇಂದ್ರಿತ. ಹಾಗಾಗಿ ಸಾವಿನ ಅನುಭವ, ತಿಳುವಳಿಕೆಯೆಲ್ಲ ನಮಗೆ ನೆರವಾಗುವುದು ನಮ್ಮ ಮತ್ತು ಬದುಕಿನ ಸೀಮಿತತೆಯನ್ನು ಸೂಚಿಸಲು, ಬದುಕಿನ ಅಸಾಂಗತ್ಯವನ್ನು, ಅಪೂರ್ಣತೆಯನ್ನು ತಿಳಿಯಲು ಮಾತ್ರ. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಬಂದ ಬಹುತೇಕ ಕಥನಗಳು ನಾಟಕಗಳಲ್ಲಿ ಈ ನೋಟವೇ ಪ್ರಧಾನ. ಓದುಗನಾಗಿ ಮಾಸ್ತಿ ಕತೆಯ ದರ್ಶನವನ್ನು ಒಪ್ಪುವ ನನಗೂ ಸಾವನ್ನು ಕುರಿತು ಬರೆಯುವಾಗಲೆಲ್ಲ, ಚಿಂತಿಸುವಾಗಲೆಲ್ಲ ಹೆಚ್ಚು ಹತ್ತಿರವೆನಿಸುವುದು ಟಾಲ್‌ಸ್ಟಾಯ್‌ನ ಒಳತೋಟಿಯೇ. ಈ ವಿಪರ್ಯಾಸಕ್ಕೆ ನಮ್ಮ ತಲೆಮಾರಿನಲ್ಲಿ ಬದುಕಿನ ನಿರಂತರತೆ ಮತ್ತು ದೈವಿಕತೆಯ ಬಗ್ಗೆ ನಂಬಿಕೆ ಕಡಿಮೆಯಾಗಿರುವುದು ಕಾರಣವಿರಬಹುದು. ದೈವಿಕತೆ ಕುರಿತಂತೆ ನಾವು ಸ್ವತಂತ್ರವಾಗಿ ಯೋಚಿಸಿ, ತೀರ್ಮಾನಕ್ಕೆ ಬರುವುದಕ್ಕಿಂತಲೂ ಹೆಚ್ಚಾಗಿ ಇತರರು ಹೇಳಿದ್ದನ್ನು, ಬರೆದದ್ದನ್ನು ಓದಿ ಹಾಗೆ ಬಂದ ತಿಳುವಳಿಕೆಯನ್ನೆಲ್ಲ ಗೃಹೀತ ಸತ್ವವೆಂದು ನಂಬಿಬಿಟ್ಟಿದ್ದೇವೆ. ಧರ್ಮವೆಂದರೆ ಸಂಸ್ಕೃತಿ ಮಾತ್ರ, ಸಂಸ್ಕೃತಿಯೆಂದರೆ ಧಾರ್ಮಿಕ ಆಚರಣೆಗಳು ಮಾತ್ರ ಎಂಬ ತೆಳುನಂಬುಗೆ ಕೂಡ ನಮ್ಮನ್ನು ದಾರಿ ತಪ್ಪಿಸಿರಬಹುದು.

ಈ ಎರಡೂ ಕತೆಗಳನ್ನು ಕುರಿತು ಹೊಸ ಕಾಲದ ಹೊಸ ಸಂವೇದನೆಯ ಮಿತ್ರರೊಡನೆ ಚರ್ಚಿಸುವಾಗಲೆಲ್ಲ ಮಾಸ್ತಿಯವರ ಕತೆಯನ್ನು ಒಪ್ಪದವರೇ ಹೆಚ್ಚು. ಇಂತಹ ಮಿತ್ರರ ಪ್ರಕಾರ ಈ ಕತೆಯಲ್ಲಿ ವೈಯಕ್ತಿಕ ದರ್ಶನವಿಲ್ಲ, ಕತೆಯ ದರ್ಶನ ಲೇಖಕನ ಅನುಭವ, ವೈಯಕ್ತಿಕತೆಯಿಂದ ಒಡಮೂಡಿದ್ದಲ್ಲ. ಕಡ ಪಡೆದದ್ದು, ಆರೋಪಿಸಿಕೊಂಡದ್ದು. "ಮಂತ್ರೋದಯ" ರಾಚನಿಕವಾಗಿ ಕೂಡ ಕತೆಯೆನಿಸಿಕೊಳ್ಳಲಾಗದು. ಉಪನಿಷತ್ ವಾಕ್ಯಗಳ ಕನ್ನಡೀಕರಣದ ಸರಣಿಯದು. ಇದು ಓದುಗರಲ್ಲಿ ಸ್ವೀಕೃತವಾಗಲೆಂದು ದ್ವೈಪಾಯನನ ಜೀವನದ ವಿವರಗಳು ಕತೆಯಲ್ಲಿ ತುಂಬಿವೆಯಷ್ಟೆ. ಈ ಆಪಾದನೆಗಳು ಕೇಳುವಾಗ ನಿಜವೆನ್ನಿಸುವ ಭಾವನೆಯನ್ನು ಹುಟ್ಟಿಸಿದರೂ, ಕತೆ ಓದುವಾಗ ಮಾತ್ರ ನಿಜವೆನ್ನಿಸುವುದಿಲ್ಲ. ನಮ್ಮ ಮನಸ್ಸಿನ ಒಳಗಡೆ ಈ ದರ್ಶನದ ಬಗ್ಗೆ ಇರುವ ಗೌರವದಿಂದ ಹೀಗಾಗುತ್ತದೆಯೇ? ಎಲ್ಲ ಕತೆಗಳು ವೈಯಕ್ತಿಕ ತೀವ್ರತೆಯಿಂದಲೇ ಹುಟ್ಟಬೇಕು ಎಂಬ ನಿರೀಕ್ಷೆ ಸರಿಯೇ? ಈ ಕತೆಯ ದರ್ಶನ ಮಾಸ್ತಿಯವರು ಆರೋಪಿಸಿಕೊಂಡದ್ದು ಎಂಬುದು ನಿಜವಾದರೆ, ಮಾಸ್ತಿಯವರ ಇತರ ಕತೆಗಳ ದರ್ಶನಕ್ಕಿಂತ ಈ ಕತೆ ನೀಡುವ ದರ್ಶನ ನಿಜವಾಗಲೂ ತುಂಬ ಭಿನ್ನವಾಗಿದೆಯೇ? ಕತೆಯೊಂದು ನಮಗೆ ನಿಜವೆನ್ನಿಸಿ - ಪ್ರಸ್ತುತವಾಗಬೇಕಾದರೆ ಕತೆಯು ಆಧುನಿಕ-ನವ್ಯ-ಪರಿಭಾಷೆ-ಸ್ವರೂಪದಲ್ಲಿರುವುದು ಅನಿವಾರ್ಯವೇ! ಮಾನಸಿಕವಾಗಿ ಆಧುನಿಕ ಸಂವೇದನೆಯ ಹೊರಗಿರುವ ಓದುಗನ ಸ್ಪಂದನಕ್ಕೆ ಯಾವ ಬೆಲೆಯೂ ಇಲ್ಲವೇ? ಸಾಮಾಜಿಕ ಅಸ್ಮಿತೆ ಮತ್ತು ಇತಿಹಾಸದ ಚಲನೆ - ಇದೇ ಮುಖ್ಯವಾದ ಈವತ್ತಿನ ಸಾಂಸ್ಕೃತಿಕ ಸಂದರ್ಭದಲ್ಲಿ "ಮಂತ್ರೋದಯ"ದಂತಹ ಕತೆಗಳು ಕೇವಲ ದಾರ್ಶನಿಕ luxuryಯಲ್ಲವೇ?

ಮೇಲಿನ ಯಾವ ಪ್ರಶ್ನೆಗಳಿಗೂ ನನಗೆ ಉತ್ತರ ಗೊತ್ತಿಲ್ಲ. ಪ್ರಶ್ನೆಗಳಲ್ಲಿ ಸತ್ಯವಿದೆಯೆಂಬುದಕ್ಕೂ ಕೂಡ ಉತ್ತರವಿಲ್ಲ? ಅಭಿಪ್ರಾಯವಿಲ್ಲ. ಹೀಗಾಗಿ ಮತ್ತೆ ನಾನು ಎರಡೂ ಕತೆಗಳ ಜೊತೆ ಓದಿಗೇ ಹಿಂದಿರುಗುತ್ತೇನೆ. ಓದುಗರನ್ನು ಕೂಡ ಇಂತಹ ಓದಿಗೆ ಆಹ್ವಾನಿಸುತ್ತಾ. ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲವೆಂಬ ಆಶ್ವಾಸನೆಯೊಡನೆ.

(ಮೇಲಿನ ಚರ್ಚೆಗೆ ಪೂರಕವಾಗಿ ಈ ಎರಡೂ ಪುಸ್ತಕಗಳನ್ನು ಓದುಗರು ಗಮನಿಸಬಹುದು: ಎ.ಎನ್.ವಿಲ್ಸನ್‌ರ ಟಾಲ್‌ಸ್ಟಾಯ್ ಜೀವನಚರಿತ್ರೆ ಮತ್ತು ಸೋಮನಾಥಾನಂದರ ಉಪನಿಷತ್ ಭಾವಧಾರೆ (ರಾಮಕೃಷ್ಣ ಆಶ್ರಮದ ಪ್ರಕಟಣೆ). ನನ್ನ ಟಿಪ್ಪಣಿಯಲ್ಲಿ ನಮೂದಿಸಿರುವ ಬಹುತೇಕ ವಿಚಾರಗಳು ಈ ಎರಡೂ ಪುಸ್ತಕಗಳಿಂದ ಪಡೆದದ್ದು.)

( ಲೇಖನ ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ "ಒಂದಲ್ಲಾ ಒಂದೂರಿನಲ್ಲಿ" ತ್ರೈಮಾಸಿಕದ ನಾಲ್ಕನೇ ಸಂಚಿಕೆ (ನವೆಂಬರ್'೦೮-ಜನವರಿ'೦೯)ಯಲ್ಲಿ ಪ್ರಕಟಿತ.) ಮುಂದೆ ಓದಿ....