Monday, August 10, 2009

ನನ್ನ ಒಂದೆರಡು ಮಾತು

ಆಸಕ್ತಿ (೧೯೯೧), ಮನೋಧರ್ಮ (೨೦೦೧) ನನ್ನ ವಿಮರ್ಶಾತ್ಮಕ, ಸಾಂಸ್ಕೃತಿಕ ಬರಹಗಳ ಹಿಂದಿನ ಸಂಕಲನಗಳು. ಈಗ ಈ ಸಂಕಲನವನ್ನು ಹೊರತರಲು ನನಗೆ ಹಿಂಜರಿಕೆಯಿತ್ತು. ಈ ಹಿಂಜರಿಕೆ ಬೇಡವೆಂದು ಸೂಚಿಸಿ ಪ್ರೋತ್ಸಾಹಿಸಿದ ಸ್ನೇಹಿತರನ್ನೆಲ್ಲ ನೆನೆಯಬೇಕಾದ್ದು ನನ್ನ ಕರ್ತವ್ಯ.

ಶ್ರೀ ಎಂ.ವಿ.ವೆಂಕಟೇಶಮೂರ್ತಿಯವರು ಇಲ್ಲಿಯ ಕೆಲವು ಬರಹಗಳನ್ನು ತುಂಬಾ ಇಷ್ಟಪಟ್ಟು ಸಂಕಲನ ಹೊರತರಲು ಪ್ರೋತ್ಸಾಹಿಸುವುದರ ಜೊತೆಗೆ ವಸಂತ ಪ್ರಕಾಶನದ ಮಿತ್ರರಾದ ಶ್ರೀಮುರಳಿಯವರಿಗೆ ಫೋನ್ ಮಾಡಿ ಕೃತಿಯನ್ನು ಪ್ರಕಟಿಸುವಂತೆ ಕೋರಿದರು. ಶ್ರೀ ಮೂರ್ತಿಯವರ ಪ್ರೋತ್ಸಾಹ ಮತ್ತು ಶ್ರೀ ಮುರಳಿಯವರ ನೆರವು ಇಲ್ಲದಿದ್ದರೆ ಈ ಸಂಕಲನ ಹೊರಬರುತ್ತಿರಲಿಲ್ಲ. ಈ ಇಬ್ಬರು ಹಿತೈಷಿಗಳಿಗೆ ಮೊದಲ ವಂದನೆ.

ನನ್ನೆಲ್ಲ ಬರವಣಿಗೆಗಳನ್ನು ಪರಿಶೀಲಿಸಿ ಪ್ರೋತ್ಸಾಹಿಸುವ ಶ್ರೀ ಗಿರೀಶ್ ವಾಘ್ ಈ ಸಂಕಲನದ ಹಿಂದೆ ಕೂಡ ಒತ್ತಾಸೆಯಾಗಿದ್ದಾರೆ. ಪ್ರೂಫ್ ನೋಡುವುದರಲ್ಲು ನೆರವಾಗಿದ್ದಾರೆ.

ಕರ್ನಾಟಕದ ಹೊರಗಿರುವುದರಿಂದ, ಯಾವುದೇ ವಿಶ್ವವಿದ್ಯಾಲಯದ ವಿಮರ್ಶಕರ ಗುಂಪುಗಳ ಬೆಂಬಲವು ನನಗಿಲ್ಲದೆ ಇರುವುದರಿಂದ ಬರಹಗಳ ಪ್ರಕಟಣೆಗೆ ನಾನು ಕಿರುಪತ್ರಿಕೆಗಳನ್ನು, ಸಮೂಹಮಾಧ್ಯಮಗಳನ್ನು ನೆಚ್ಚಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಂತೂ ಸಂಪಾದಕರುಗಳನ್ನು ನಾನೇ ಪೀಡಿಸಿದ್ದೇನೆ. ಇಲ್ಲಿಯ ಬರಹಗಳನ್ನು ಪ್ರಕಟಿಸಿದ ದೇಶಕಾಲ, ಸಂಚಯ, ಹೊಸತು, ಒಂದಲ್ಲಾ ಒಂದೂರಿನಲ್ಲಿ, ಶೂದ್ರ, ಕನ್ನಡ ಅಧ್ಯಯನ, ಕನ್ನಡಪ್ರಭ, ಉದಯವಾಣಿ, ವಿಜಯಕರ್ನಾಟಕ, ವಿಕ್ರಾಂತ ಕರ್ನಾಟಕ - ಪತ್ರಿಕೆಗಳ ಸಂಪಾದಕರುಗಳಿಗೆ ಕೃತಜ್ಞ.

ಕೆಲವು ಲೇಖನಗಳು ಈಗಾಗಲೇ ಬೇರೆ ಬೇರೆ ಸಂಪುಟ-ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಇದರಿಂದಾಗಿ ನನ್ನ ಆತ್ಮವಿಶ್ವಾಸ ಹೆಚ್ಚಿದೆ. ಪುತಿನ, ಕುಸುಮಾಕರರ ಬರಹವನ್ನು ಆಯ್ಕೆ ಮಾಡಿದ ಡಾ||ಎಚ್.ಎಸ್.ರಾಘವೇಂದ್ರ ರಾವ್, ಕುವೆಂಪು, ಕನ್ನಡ ಕಾದಂಬರಿ ಪರಂಪರೆ ಬಗ್ಗೆ ಬರೆಯುವಂತೆ ಪ್ರೇರೇಪಿಸಿದ ಶ್ರೀ ಡಿ.ಎಸ್.ನಾಗಭೂಷಣ, ವಿ.ಸೀ. ಮತ್ತು ಬಿ.ಪಿ.ರಾಧಾಕೃಷ್ಣರನ್ನು ಕುರಿತು ಬರೆಯುವಂತೆ ಮಾಡಿದ ಶ್ರೀ ಎಂ.ವಿ.ವೆಂಕಟೇಶಮೂರ್ತಿ, ಆವರಣದ ಬಗ್ಗೆ ಬರೆಯಲು ಕಾರಣರಾದ ಶ್ರೀ ಗಿರೀಶ್ ರಾವ್, ಶ್ರೀ ಚಂದ್ರಶೇಖರಯ್ಯ, ಲಂಕೇಶ್ ಕತೆಗಳ ಬಗ್ಗೆ ಬರೆಸಿದ ಜಿ.ರಾಜಶೇಖರ, ಫಣಿರಾಜ್ ಮತ್ತು ವಿವೇಕ ಶಾನಭಾಗ ಇವರೆಲ್ಲರಿಗೆ ವಂದನೆಗಳು.

"ಗಾಂಧಿ ಬಜಾರ್" ಪತ್ರಿಕೆಯ ಸಂಪಾದಕರಾದ ಶ್ರೀ ಬಾಕಿನರವರು ಬಹುವರ್ಷಗಳಿಂದ ನನ್ನ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಶ್ರೀಯುತರ ನಿರಂತರ ಪ್ರೋತ್ಸಾಹಕ್ಕೆ ಕೃತಜ್ಞನಾಗಿದ್ದೇನೆ.

ಹಿರಿಯರಾದ ಡಾ||ಯು.ಆರ್.ಅನಂತಮೂರ್ತಿಯವರು ಈಚಿನ ದಿನಗಳ ಬರಹಗಳಿಗೆ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವುದರ ಜೊತೆಗೆ ಎಷ್ಟೋ ವಿಷಯಗಳ ಬಗ್ಗೆ ಮತ್ತೆ ಯೋಚಿಸುವಂತೆ ಮಾಡಿದ್ದಾರೆ. ಇವರೊಡನೆ ಒಡನಾಟ ಹೆಚ್ಚಲು ಇಲ್ಲಿಯ ಕೆಲವು ಬರಹಗಳಾದರೂ ಕಾರಣವಾಗಿವೆ ಎನ್ನುವುದೇ ನನಗೆ ಸಂತೋಷದ ಸಂಗತಿ. ಮೇಷ್ಟರ ಪ್ರೀತಿ ಮತ್ತು ಗಮನಕ್ಕೆ ಥ್ಯಾಂಕ್ಸ್.

ಈ ಸಂಕಲನದ ಒಂದು ಹೆಚ್ಚುಗಾರಿಕೆಯೆಂದರೆ ನನ್ನದಲ್ಲದ ಬರವಣಿಗೆಯು ಸೇರಿರುವುದು. ಜಿ.ರಾಜಶೇಖರ್, ಗಿರೀಶ್ ವಾಘ್, ಲಂಕೇಶ್ - ಇವರ ಪತ್ರಗಳು, ಜಿ.ಎನ್.ರಂಗನಾಥರಾವ್, ಲಕ್ಷ್ಮಣ ಕೂಡಸೆ ಇವರ ಬರಹಗಳೂ ಇಲ್ಲಿ ಸೇರಿವೆ. ಇವರೆಲ್ಲರ ಬರಹಗಳಿಂದಾಗಿ ಸಂಕಲನದ ಮೌಲಿಕತೆಗೊಂದು ಮೆರುಗು ಬಂದಿದೆ. ಇವರೆಲ್ಲರಿಗೂ, ಈ ಕೆಲಸದಲ್ಲಿ ನೆರವಾದ ಗೌರಿ ಲಂಕೇಶ್ ಮತ್ತು ಡಾ||ಎಂ.ಎಸ್.ಆಶಾದೇವಿಯವರಿಗೂ ವಂದನೆಗಳು.

ಸಾರಾಪುರದ ಶ್ರೀ ವಸಂತ ವಿ.ಬೆಳಗಾಂವ್‌ಕರ್ ಮತ್ತು ಕೊಲ್ಲಾಪುರ ಶ್ರೀಮತಿ ನಾಗರತ್ನ ಗ್ಯಾಲ್ ನನಗೆ ಪುಸ್ತಕಗಳು, ಪತ್ರಿಕೆಗಳನ್ನು ಒದಗಿಸುತ್ತಾ ನೆರವಾಗಿದ್ದಾರೆ. ಕೊಲ್ಲಾಪುರದಲ್ಲಿ ಮಾಡಿದ ಬಹುಪಾಲು ಬರವಣಿಗೆಯ ಮೊದಲ ಓದುಗರಾಗಿ ಶ್ರೀಮತಿ ನಾಗರತ್ನ ತುಂಬಾ ಸಮಯ ಮತ್ತು ಪ್ರೀತಿಯನ್ನು ನೀಡಿದ್ದಾರೆ.

ಈ ಬರಹಗಳ ಬರಹಗಾರ ನಾನೆಂಬುದು ಪೂರ್ಣಸತ್ಯವಾಗಲಾರದು. ಈ ಬರಹಗಳು ಸ್ನೇಹಿತರ ಜೊತೆ ನಡೆಸುತ್ತಲೇ ಇರುವ ಮಾತುಕತೆ, ವಿಚಾರ ವಿನಿಮಯದ ಒಂದು ಭಾಗವಷ್ಟೆ. ಎನ್.ವಿದ್ಯಾಶಂಕರ್, ಡಾ||ಎಚ್.ಎಸ್.ರಾಘವೇಂದ್ರ ರಾವ್, ಗಿರೀಶ್ ವಾಘ್ - ಇವರೆಲ್ಲರ ಒಳನೋಟ, ವಿಶ್ಲೇಷಣೆಗಳೆಲ್ಲ ಈ ಬರಹದಲ್ಲಿ ಬೆರೆತು ಹೋಗಿದೆ. ಗೆಳೆತನದ ಸಲಿಗೆಯಿಂದಾಗಿ ಇವರೆಲ್ಲರೂ ಇದನ್ನು ಮನ್ನಿಸುತ್ತಾರೆಂದು ನಂಬುತ್ತೇನೆ.

****

೧೯೬೫-೧೯೭೦ ಈ ಕಾಲಾವಧಿಯಲ್ಲಿ ನಾನು ಕನ್ನಡ-ಇಂಗ್ಲೀಷ್ ಸಾಹಿತ್ಯವನ್ನು ಓದಲು ಪ್ರಾರಂಭಿಸಿದ್ದು. ಬಹುಪಾಲು ಪುಸ್ತಕಗಳನ್ನು ಓದಿದ್ದು ನಮ್ಮ ಕಾಲೇಜು-ಸ್ಕೂಲ್ ಮೇಷ್ಟರುಗಳ ಸೂಚನೆಯ ಮೇರೆಗೆ. ಎಲ್ಲ ಪಂಥಗಳ ಎಲ್ಲ ಭಾಷೆಗಳ, ಎಲ್ಲ ಮನೋಧರ್ಮದ ಕೃತಿಗಳನ್ನು ಓದಲು ಈ ಮೇಷ್ಟರುಗಳು ಪ್ರೋತ್ಸಾಹಿಸುತ್ತಿದ್ದರು. ನನ್ನ ಓದುವಿಕೆ ಈವತ್ತೂ ಕೂಡ ಇದೇ ದಾರಿಯದು.

ನಾನೇ ಬರವಣಿಗೆಯ ಗೀಳನ್ನು ಹಚ್ಚಿಕೊಂಡ ಮೇಲೆ ಒಂದು ಸಂಗತಿ ನನಗೆ ಸ್ಪಷ್ಟವಾಯಿತು. ಸಾಹಿತ್ಯ ವಲಯದಿಂದ ಪ್ರೇರೇಪಣೆ ಪಡೆಯುವ ಓದು ಬಹುಪಾಲು ಒಂದು ಚಳುವಳಿಗೆ, ಒಂದು ಮನೋಧರ್ಮಕ್ಕೆ ಒಂದು ಲೇಖಕರ ಗುಂಪಿಗೆ ಮಾತ್ರ ಸೀಮಿತವಾಗಿರುತ್ತದೆ. ೧೯೬೫-೭೦ರ ಕಾಲಾವಧಿಯನ್ನೇ ತೆಗೆದುಕೊಂಡರೆ ಕಾರಂತ, ಕುವೆಂಪು, ಮಾಸ್ತಿ ಇಂತಹವರನ್ನು ಕುರಿತು ನವ್ಯ ಚಳುವಳಿಯ ತೀವ್ರ ದಿನಗಳಲ್ಲಿ ಒಳ್ಳೆಯ ಭಾವನೆಯೇನಿರಲಿಲ್ಲ. ಆದರೂ ನಮ್ಮ ಮೇಷ್ಟರುಗಳು ಇವರ ಕೃತಿಗಳನ್ನು ಓದಲು ಸೂಚಿಸುತ್ತಿದ್ದಂತೆಯೇ ಹೊಸ ಸಾಹಿತ್ಯ ಸಂವೇದನೆಯ ಸಂಸ್ಕಾರ, ತುಘಲಕ್ Outsiderನಂತಹ ಕೃತಿಗಳನ್ನು ಕೂಡ ಓದಲು ಸೂಚಿಸುತ್ತಿದ್ದರು. ಸಾಹಿತ್ಯ ವಲಯದೊಡನೆ ನನ್ನ ಎರಡು-ಮೂರು ದಶಕಗಳ ಒಡನಾಟದಿಂದ ಮೂಡಿರುವ ತಿಳುವಳಿಕೆಯೆಂದರೆ ನಮ್ಮ ಓದುವಿಕೆ ಈ ವಲಯದಿಂದ ಪ್ರೇರೇಪಣೆ ಪಡೆದಷ್ಟು ಪಾರ್ಶ್ವ ನೋಟದ್ದಾಗಿರುತ್ತದೆಂಬುದು. ಈ ಸಂಕಲನದ ಎಷ್ಟೋ ಬರಹಗಳ ಬಗ್ಗೆ ಕೆಲವರಾದರೂ ನನ್ನನ್ನು ಇದನ್ನೆಲ್ಲ ಈಗ ಓದುವ-ಬರೆಯುವ ತುರ್ತಾದರೂ ಏನಿತ್ತು ಎಂದು ಕೇಳಿದ್ದಾರೆ. ನನಗೆ ಸ್ಪಷ್ಟವಾಗಿ ಉತ್ತರ ಗೊತ್ತಿಲ್ಲ. ಈ ಕಾರಣಕ್ಕಾಗಿಯೂ ಈ ಸಂಕಲನಕ್ಕೆ "ಖಾಸಗಿ ವಿಮರ್ಶೆ" ಎಂಬ ಹೆಸರಿಟ್ಟಿದ್ದೇನೆ. ಇದಕ್ಕಿಂತ ಮುಖ್ಯವಾಗಿ ನನ್ನ ಮೆಚ್ಚಿನ ಲೇಖಕನೊಬ್ಬ ತನ್ನ ವಿಮರ್ಶಾ ಸಂಕಲನಕ್ಕೆ "INNER WORKING" ಎಂದು ಹೆಸರಿಟ್ಟಿರುವುದು ಕೂಡ ನನ್ನ ಪ್ರೇರಣೆಗಳಲ್ಲೊಂದು. ಎಷ್ಟೋ ಜನ ಸಮಕಾಲೀನ ವಿಮರ್ಶಕರ ಬರಹಗಳನ್ನು ಓದುವಾಗ ಅವರ ಬರಹಗಳಲ್ಲಿ ಗೈರುಹಾಜರಾಗಿರುವ ಒಳವ್ಯಕ್ತಿತ್ವ ನನಗೆ ಆಶ್ಚರ್ಯ ಹುಟ್ಟಿಸುತ್ತದೆ.
(ಹೊಸ ಕೃತಿ ಖಾಸಗಿ ವಿಮರ್ಶೆಗೆ ಬರೆದ ಮುನ್ನುಡಿ)

ಪರಿವಿಡಿ

ಭಾಗ -1
ನನ್ನ ಬರವಣಿಗೆಯ ಸ್ವರೂಪ ಮತ್ತು ಆಕಾಂಕ್ಷೆ
೧. ಸಾಹಿತ್ಯದಲ್ಲಿ ಸಮೀಕರಣಗಳು
೨. ಒಂದು ಸಂದರ್ಶನ
೩. ಓದುಗನ ಏಕಾಂತ
೪. ಬರಹಗಾರನ ತಲ್ಲಣಗಳು

ಭಾಗ -2
ಕತೆ, ಕಾದಂಬರಿ, ಕಾವ್ಯ, ಪ್ರಬಂಧ
೧. ನಮ್ಮ ಕಾದಂಬರಿ ಪರಿಸರ
೨. ಕುವೆಂಪು ಮತ್ತು ಮತಾಂತರ
೩. ಕುವೆಂಪು - ಬಹುಶಿಸ್ತೀಯ ನೋಟ
೪. ವಂದೇ ಮಾತರಂ ಕಾದಂಬರಿ
೫. ಕಂಡದ್ದು ಕಾಣದ್ದು
೬. ‘ಆವರಣ’ - ಕೃತಿ ಮತ್ತು ವಿದ್ಯಮಾನ
೭. ಬಯಲು ಬಸಿರು
೮. ಬಿಳಿ ಹುಲಿ
೯. ಹಾಲೂಡಿಸುವ ಪ್ರಸಂಗ
೧೦. ಲಂಕೇಶ್ ಹೇಳಿಕೊಂಡ ಕತೆಗಳು
೧೧. ಇಲಿಚ್ ಮತ್ತು ಮಂತ್ರೋದಯ
೧೨. ನೆಲೆಯಿಲ್ಲದ ಸಂಪಾದನೆ
೧೩. ನಿಧಾನ ಶ್ರುತಿ
೧೪. ಪುತಿನ ಪ್ರಬಂಧಗಳು
೧೫. ಗೋಕುಲಾಷ್ಟಮಿ
೧೬. ನೂರು ವರ್ಷದ ಏಕಾಂತ

ಭಾಗ -3
ವ್ಯಕ್ತಿಚಿತ್ರ - ಜೀವನ ಚರಿತ್ರೆ

೧. ದೊಡ್ಡ ಬದುಕಿನ ಸೂಕ್ಷ್ಮ ಚರಿತ್ರೆ
೨. ರಾಧಾಕೃಷ್ಣರ ‘ನನ್ನ ತಂದೆ’
೩. ವಿಜಯಶಂಕರ್ ಒಡನಾಟ
೪. ತಾಯಿಗುಣದ ಗೆಳೆಯ
೫. ರಿಲ್ಕೆ ಕಂಡ ಕಿರಂ
೬. ವೈ.ಎನ್.ಕೆ. ಪ್ರಸಂಗಗಳು
೭. ಬರೆದರೆ ಜಿ.ರಾಜಶೇಖರ್ ಹಾಗೆ

ಭಾಗ -4
ಪತ್ರ ಸಾಹಿತ್ಯ

೧. ಜಿ.ರಾಜಶೇಖರ್ ಪತ್ರಗಳು
೨. ಗಿರೀಶ್ ವಾಘ್ ಪತ್ರಗಳು
೩. ಉತ್ತರಿಸಲಾಗದ ಪತ್ರ
೪. ಸಂಪಾದಕರ ಅಪರೂಪದ ಪತ್ರ
೫. ಲಂಕೇಶ್ ಪತ್ರಗಳು

ಭಾಗ -5
ವೈವಿಧ್ಯ

೧. ಗಾಂಧಿ - ಓದುಗನಾಗಿ
೨. ಪುಸ್ತಕ ಸಮೀಕ್ಷೆ - ಲೋಹಿಯಾ
೩. ಪತ್ರಿಕೆಗಳು ಮತ್ತು ಸಾಹಿತ್ಯ
೪. ಜಿ.ಎನ್.ರಂಗನಾಥರಾವ್
೫. ಲಕ್ಷ್ಮಣ ಕೂಡಸೆ
೬. ನಮ್ಮ ಕನಸುಗಳಲ್ಲಿ ಕನ್ನಡ
೭. ಕನ್ನಡದ ನಿನ್ನೆಗಳು
೮. ನಮ್ಮ ಆಧ್ಯಾತ್ಮಿಕತೆ
೯. ಜೆ.ಕೆ.ಚಿಂತನೆ
೧೦. ನಮ್ಮವರಂತೆಯೇ ಕಾಣುವ ನೈಪಾಲ್
೧೧. ಇದೊಂದು ಜೀವನ ಶೈಲಿಯ ವಾಙ್ಮಯ
೧೨. ಕ್ರಿಕೆಟ್ ಅಲ್ಲದ ಕ್ರಿಕೆಟ್
೧೩. ಗೂಡಿಗೆ ಸೇರದ ಹಕ್ಕಿಗಳು
೧೪. ಪಂಪಾಯಾತ್ರೆ

ಪುಟಗಳು : 328
ಪ್ರಕಾಶಕರು: ವಸಂತ ಪ್ರಕಾಶನ
ನಂ. 360. 10‘ಬಿ’ ಮೇನ್
(ಕಾಸ್ಮೋಪಾಲಿಟನ್ ಕ್ಲಬ್ ಎದುರು ರಸ್ತೆ)
ಜಯನಗರ 3ನೇ ಬ್ಲಾಕ್
ಬೆಂಗಳೂರು 560 011
ದೂರವಾಣಿ : 22443996
ಬೆಲೆ: ನೂರ ಎಪ್ಪತ್ತು ರೂಪಾಯಿ.
ISBN 81-89818-71-6

No comments: