Thursday, July 30, 2009

ಕತೆಗಳು ಇರುತ್ತವೆ; ಕಾಣಬೇಕಷ್ಟೆ


ಗೃಹಕೃತ್ಯಕ್ಕೆ ಸಂಬಂಧಿಸಿದಂತಹ ಒಂದು ಸಂಗತಿಯನ್ನು ನಮ್ಮ ತಾಯಿ ನನಗೆ ಹೇಳುತ್ತಿದ್ದಾಗ, ನಾನು ಅನ್ಯಮನಸ್ಕನಾಗಿ ಕೇಳಿಸಿಕೊಳ್ಳುತ್ತಿದ್ದೆ. ನನ್ನ ಅನ್ಯಮನಸ್ಕತೆಯಿಂದ ನಮ್ಮ ತಾಯಿಗೆ ರೇಗಿ ಹೀಗೆಂದು ಬೈದರು. "ಏನು ಯಾವಾಗಲೂ ನಿನಗೆ ಕತೆಗಳ ಗುಂಗು. ಕತೆಗಳಿಗೇನು ಯಾವಾಗಲೂ ಇರುತ್ತವೆ. ಸಾಯೋತನಕ ಇರುತ್ತವೆ...." ಇತ್ಯಾದಿ. ನಮ್ಮ ತಾಯಿ ಆಡಿದ ಮಾತಿನ ಎಳೆಯನ್ನು ಹಿಡಿದು, ಕತೆಗಳ ರಚನೆಯನ್ನು ಕುರಿತು ನನ್ನ ನಿಲುವನ್ನೂ ವಿವರಿಸುತ್ತೇನೆ.

ಆಧುನಿಕತೆ, ವಿಶೇಷವಾಗಿ, ನವ್ಯತೆ ನಮ್ಮ ಕಥಾಸಾಹಿತ್ಯದಲ್ಲಿ ಪ್ರವೇಶಿಸಿದ ಮೇಲೆ ಕತೆಗಳೆಂದರೆ ಅದೇನೋ ವಿಶೇಷ ಪದಾರ್ಥವೆಂಬಂತೆ, ಕತೆಗಾರನೆಂದರೆ ಒಬ್ಬ ಅದ್ಭುತ ವ್ಯಕ್ತಿಯಂತೆ ಕಾಣುವ ಪರಿಪಾಠ ನಮ್ಮಲ್ಲಿ ರೂಢಿಗೆ ಬಂದಿದೆ. ಇದಕ್ಕನುಗುಣವಾಗಿ ಕತೆಗಾರರು ಕೂಡ ತಾವು ಇತರರಿಗಿಂತ ಬಹು ಭಿನ್ನರೆಂಬಂತೆ ‘ಶೈಲೀಕೃತ ಅಹಂ’ನಿಂದಲೇ ವರ್ತಿಸುತ್ತಾರೆ. ನನಗೆ ಯಾವತ್ತೂ ಹಾಗನಿಸಿಲ್ಲ. ಕ್ಯಾಥರೀನ್ ಪೋರ್ಟರಳ ಪ್ರಕಾರ ಬರಹಗಾರ ಸಮಾಜದಿಂದ, ಸಮಾಜದಲ್ಲಿ ಯಾವ ವಿಶಿಷ್ಟ ಸ್ಥಾನವನ್ನೂ ಬೇಡಕೂಡದು. ಎಲ್ಲರಂತಿದ್ದು, ಎಲ್ಲರ ಬದುಕಿನ ಬಗ್ಗೆ ಬರೆಯುವುದನ್ನು ಓದಲು ಉಳಿದೆಲ್ಲರಿಗೂ ಆಸಕ್ತಿಯಿರುತ್ತದೆಯೇ ಹೊರತು ತಾನೊಬ್ಬ ಮಹಾ, ತಾನೊಬ್ಬ ವಿಶೇಷ ಎಂದು ಭಾವಿಸಿಕೊಂಡು ಇತರರ ಬಗ್ಗೆ ‘ಧೋರಣೆ’ಯಿಂದ ಬರೆದ ಬರವಣಿಗೆಯನ್ನು ಉಳಿದವರು ಏಕೆ ಓದಬೇಕೆಂಬುದು ಅವಳ ಪ್ರಶ್ನೆಯಿದ್ದಂತೆ ಕಾಣುತ್ತದೆ.

ಕತೆಗಳು ಇರುತ್ತವೆ ಹಾಗೆಂದರೇನು ವಿವರಿಸಿ ಎಂದು ನೀವು ಕೇಳಿದರೆ ಸ್ವಲ್ಪ ಕಷ್ಟವೇ. ವಾತಾವರಣದಲ್ಲಿ ಗಾಳಿ ಇದೆ ಎಂದು ಹೇಳಿದಾಗ ನೀವು ಸಾಧಿಸಿ ತೋರಿಸಲೇ ಬೇಕಿಲ್ಲವಷ್ಟೆ. ಹಾಗೆಯೇ ಕತೆಗಳು ಕೂಡ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಕತೆ, ಕತೆಗಾರಿಕೆ ಎನ್ನುವುದು ಊಟ, ನಿದ್ರೆ, ಪ್ರೀತಿ, ಮೈಥುನಗಳಷ್ಟೆ ಸಹಜವಾದ್ದು, ನೈಸರ್ಗಿಕವಾದ್ದು.

ಕತೆ ಬರೆಯುವವರು ಮಾತ್ರ ಕತೆಗಾರರೆಂದು ಪೋಸು ಕೊಟ್ಟರೆ ನನಗೆ ನಗು ಬರುತ್ತದೆ. ನಾವೆಲ್ಲರೂ ನಮ್ಮ ಬದುಕಿನ ಬಹಳ ಕಾಲವನ್ನು ಕತೆ ಹೇಳುವುದರಲ್ಲಿ ಕೇಳಿಸಿಕೊಂಡ ಕತೆಯನ್ನು ಇನ್ನೊಬ್ಬರಿಗೆ ನಮ್ಮ ನಮಗೆ ಬೇಕಾದ ರೀತಿಯಲ್ಲಿ ಹೇಳುವುದರಲ್ಲಿ ಕತೆ ಕೇಳಿಸಿಕೊಳ್ಳುವುದರಲ್ಲೇ ಕಳೆಯುತ್ತೇವೆ. ಕತೆಗಳೇ ಹೀಗೆ. ನಾವು ಎಚ್ಚರವಾಗಿದ್ದಾಗ, ನಿದ್ರೆಯಲ್ಲಿದ್ದಾಗ, ಕನಸಿನಲ್ಲಿದ್ದಾಗ, ಒಂಟಿಯಾಗಿದ್ದಾಗ, ಗುಂಪಿನಲ್ಲಿದ್ದಾಗ ಯಾವಾಗಲೂ ತಮ್ಮ ಪಾಡಿಗೆ ತಾವು ಬೆಳೆಯುತ್ತಿರುತ್ತವೆ. ಒಂದು ಉಚ್ಛ್ವಾಸ, ಒಂದು ನಿಶ್ಶ್ವಾಸದ ನಡುವೆ ಕಾಲ ಸರಿದು ವಯಸ್ಸಾಗುವಂತೆ ಕತೆಗಳಿಗೂ ಕೂಡಾ ವಯಸ್ಸಾಗಿ ಬೆಳೆಯುತ್ತಾ ಹೋಗುತ್ತವೆ.

ಮಿತ್ರರಾದ ಶ್ರೀ ಜಿ.ರಾಜಶೇಖರ್, ನನ್ನ ‘ನಿಮ್ಮ ಮೊದಲ ಪ್ರೇಮದ ಕತೆ’ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ, ನಾನು ಬರೆಯುವ ಶೈಲಿಯಲ್ಲಿ ಪಕ್ಕದ ಮನೆಯವರ ಕಷ್ಟ ಸುಖಗಳನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಕತೆ ಮಾಡಿಬಿಡಬಹುದು ಎಂದು ಹೇಳಿದರು. ನನಗಿರುವ ಆಸೆ ಅದೆ. ಆದರೆ ಈ ಕೆಲಸಕ್ಕೆ ಬಹಳ ಪ್ರತಿಭೆ, ಪ್ರೀತಿ ಬೇಕು. ಆಸೆಯಿದ್ದರೆ ಮಾತ್ರ ಸಾಲದು.

ಮನುಷ್ಯನ, ಇನ್ನೊಬ್ಬ ಮನೆಯವರ ಕಷ್ಟವನ್ನು ನಮ್ಮದು, ನಮ್ಮದೇ ಎಂದು ತಿಳಿಯುವುದು ನಾವು ಪರಿಭಾವಿಸಿದಷ್ಟು ಸುಲಭವಲ್ಲ. ಸುಲಭವೇನು ಸಾಧ್ಯವೇ ಇಲ್ಲ ಎಂದು ನಂಬಿದವರು ನಾವು. ಅವರ ಕಷ್ಟ ಅವರಿಗೆ ನಮ್ಮ ಕಷ್ಟ ನಮಗೆ ಎಂಬ ಮಾತೇ ಇದೆಯಲ್ಲ. ಏಕೆಂದರೆ ಮನುಷ್ಯನ ಪ್ರೀತಿಸುವ ಶಕ್ತಿ ಬಹು ಸೀಮಿತವಾದದ್ದು. ನಾನು, ನನ್ನ ಹೆಂಡತಿ ಮಕ್ಕಳು, ನಮ್ಮ ಜಾತಿ, ನಮ್ಮ ದೇಶ ಇವುಗಳ ಗಡಿಯಿಂದಾಚೆಗೆ ಮನುಷ್ಯ ಹೋಗಲು ನಿರಾಕರಿಸುತ್ತಾನೆ. ನಿರಾಕರಿಸುತ್ತಾನೆ ಏನು, ಸಾಧ್ಯವೂ ಆಗುವುದಿಲ್ಲ. ಪ್ರಪಂಚದ ಬಹುತೇಕ ಮನುಷ್ಯರಿಗೂ, ಬಹುತೇಕ ಘಟನೆಗಳಿಗೂ ನಮಗೂ ಏನೂ ಸಂಬಂಧವೇ ಇಲ್ಲವೆಂದು ತಿಳಿಯುವ ನಮಗೆ ಕತೆಗಳು ಹೇಗೆ ಕಾಣಿಸಿಯಾವು. ಅಂದರೆ ನೀವು ಎಷ್ಟು ಕತೆಗಳನ್ನು ಕಾಣಬಲ್ಲಿರಿ ಎಂಬುದು ನಿಮ್ಮ ಪ್ರೀತಿಸುವ ಶಕ್ತಿಯನ್ನು, ನೀವು ಪ್ರಪಂಚದೊಡನೆ, ಪದಾರ್ಥಗಳೊಡನೆ ಇಟ್ಟುಕೊಳ್ಳುವ ಸಂಬಂಧದ ಸ್ವರೂಪವನ್ನು ಅವಲಂಬಿಸಿದೆ. ಈ ಜಗತ್ತಿನಲ್ಲಿ ನಡೆಯುವುದಕ್ಕೆಲ್ಲ ನೀವು ಹೊಣೆಗಾರರೆಂದು ಒಪ್ಪಿಕೊಳ್ಳುವುದಾದರೆ ನಿಮ್ಮ ಪಕ್ಕದ ಮನೆಯವರ ಕತೆಗೂ, ನಿಮ್ಮ ಕತೆಗೂ ಸಂಬಂಧವಿದೆ ಎಂದು ಒಪ್ಪಿಕೊಳ್ಳುವುದಾದರೆ ಮಾತ್ರ. ಹಾಗೆ ಒಪ್ಪಿಕೊಂಡು ವ್ಯಾಸ, ವಾಲ್ಮೀಕಿ, ಮಾಸ್ತಿ, ಟಾಲ್‌ಸ್ಟಾಯ್, ಕ್ಯಾಥರೀನ್, ಆನ್ ಪೋರ್ಟರ್ ಅಂತಹವರು ಬರೆದಿದ್ದರಿಂದಲೇ ಈಗ ನಮ್ಮೆದುರಿಗೆ ಒಂದಿಷ್ಟು ಒಳ್ಳೆಯ ಕಥಾ ಸಾಹಿತ್ಯವಾದರೂ ಇದೆ. ಹಾಗಲ್ಲದೆ ಆಧುನಿಕರಂತೆ, ನವ್ಯರಂತೆ ಅವರೆಲ್ಲರೂ ಅವರವರ ಬಾಲ್ಯದ ಅನುಭವಗಳನ್ನೋ, ಅವರವರ ಜಾತಿಯ ಕಷ್ಟ ಸುಖಗಳನ್ನೋ ಅವರವರ ಭ್ರಮೆಗಳನ್ನೋ ಮಾತ್ರವೇ ಹಿಡಿದು ಬರೆಯುತ್ತಾ ಕೂತಿದ್ದರೆ ಏನಾಗುತ್ತಿತ್ತು ನೀವು ಊಹಿಸಿಕೊಳ್ಳಬಹುದು.

ಕತೆಗಾರರೊಬ್ಬರು ಹೇಳಿದ ಮಾತು ನೆನಸಿಕೊಂಡರೆ ಭಯವಾಗುತ್ತದೆ. ಹೇಳಬೇಕಾದ ಕತೆಗಳನ್ನು ಈಗಾಗಲೇ ಹೇಳಿಯಾಗಿದೆ. ಇನ್ನು ಹೊಸ ಕತೆಗಳೇ ಇಲ್ಲ ಎಂದು ಅಪ್ಪಣೆ ಕೊಡಿಸಿದವರು ಅವರು. ಬೇರೆ ಮಾತುಗಳಲ್ಲಿ ಅವರು ಹೇಳಿದ್ದೇನೆಂದರೆ ‘ಇನ್ನು ನಾವು ಕಾಣುವ ಅಗತ್ಯವಿಲ್ಲ’ವೆಂದು. ನಮ್ಮ ಸುತ್ತಮುತ್ತಲ ಪ್ರಪಂಚವನ್ನು, ಪದಾರ್ಥಗಳನ್ನು ಕಾಣದೆ, ಕಾಣಿಸದೇ ನಾವು ಬದುಕುವುದೆಂದರೆ ಆಯಸ್ಸು ಎಂಬುದು ಒಂದು ಶಿಕ್ಷೆಯಲ್ಲದೆ ಮತ್ತೇನು?

ಬರೆಯುತ್ತಿರುವಾಗ ಕಣ್ಣೆದುರಿಗೆ ಬಣ್ಣ ಬಣ್ಣದ ಚಿಟ್ಟೆಗಳು ಕಾಣಿಸಿಕೊಳ್ಳುತ್ತಿವೆ. ಅವು ಪಾರ್ಥೇನಿಯಂ ಗಿಡದ ಮೇಲೆ ಕೂರುತ್ತಿವೆ. ಅದಕ್ಕೂ ನನಗೂ ಏನು ಸಂಬಂಧವೆನ್ನಲೇ ಅಥವಾ ಪಾರ್ಥೇನಿಯಂ ಗಿಡಗಳನ್ನ ಮನೆ ಸುತ್ತ ಬೆಳೆಸಿಕೊಂಡು ಅದಕ್ಕೂ ತನಗೂ ಸಂಬಂಧವಿಲ್ಲವೆನ್ನುವಂತೆ ಆ ಮನೆಯ ಒಡೆಯ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಉಳಿಸಿ, ಮಕ್ಕಳನ್ನು ಕಾನ್ವೆಂಟಿಗೆ ಕಳಿಸಿ ಓದಿಸುತ್ತಾ ನಾಳೆಯ ಭವಿಷ್ಯ ಬಹು ಸುಂದರವಾಗಿರುತ್ತದೆ ಎಂದು ಕನಸು ಕಾಣುವ ದುರಂತದ ಬಗ್ಗೆ ಮಾತ್ರ ಬರೆಯಬೇಕೆ? ಚಿಟ್ಟೆಗಳು ಪಾರ್ಥೇನಿಯಂ ಗಿಡಗಳ ಮೇಲೆ ಕೂರಬೇಕಾಗಿ ಬಂದದ್ದು, ಕುಳಿತಾಗ ಏನಾಗಬಹುದೆಂಬ ಸಂಗತಿ, ಆ ಮನೆ ಒಡೆಯನ ಚಿಂತನೆಯ ದುರಂತಕ್ಕಿಂತ ಯಾವ ರೀತಿ ಕಡಿಮೆ. ಈಗ ಚಾಲ್ತಿಯಲ್ಲಿರುವ ಕಥನ ಕ್ರಮದ ಪ್ರಕಾರ ಮನೆ ಒಡೆಯನ ದುರಂತಕ್ಕೆ ನಾನು ಹೆಚ್ಚು ಗಮನ ಕೊಡಬೇಕು. ಚಿಟ್ಟೆ ಪಾರ್ಥೇನಿಯಂಗಳನ್ನೆಲ್ಲ ಸಸ್ಯಶಾಸ್ತ್ರಜ್ಞರಿಗೆ, ಛಾಯಾಗ್ರಾಹಕರಿಗೆ ಬಿಡಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ನನ್ನದೂ ಒಂದು ಕಾಣ್ಕೆಯಿದೆಯಲ್ಲ ದುರಂತಕ್ಕೆ; ಈ ಚಿಟ್ಟೆಗಳು, ಈ ಪಾರ್ಥೇನಿಯಂ ಇವೆಲ್ಲ ಈಗ ಬರೆಯುವಾಗ ಮಾತ್ರ ಕಾಣುತ್ತಿವೆ; ಎಷ್ಟೋ ವರ್ಷಗಳಿಂದ ಹೀಗೆ ಎದುರಿಗೇ ಇದ್ದರೂ ಮೊದಲು ಯಾಕೆ ಇವು ನನಗೆ ಕಾಣಲಿಲ್ಲ. ಈ ಸಂಗತಿಗಳಿಗೂ ನನಗೂ ಸಂಬಂಧವಿಲ್ಲವೆಂದೇ ನನ್ನ ಪ್ರಜ್ಞೆ ನನಗೇ ಹೇಳಿಕೊಂಡಿರಬೇಕು.

ನಾನು ಕತೆಗಳನ್ನು, ಕತೆಗಾರಿಕೆಯನ್ನು ಸರಳೀಕರಿಸುತ್ತಿಲ್ಲ. ಹಾಗಂತ ಇದೆಲ್ಲವನ್ನು ಏನೋ ವಿಶೇಷವಾದದ್ದು ಎಂದು ನೋಡುವುದರಲ್ಲೂ ನನಗೆ ನಂಬಿಕೆಯಿಲ್ಲ. ನನ್ನ ಮಟ್ಟಿಗಂತೂ ಒಬ್ಬ ಕತೆಗಾರ ಅದೆಷ್ಟು ಕತೆಗಳನ್ನು ಬರೆಯುತ್ತಾನೆ, ಅದೆಷ್ಟು ಕಲಾತ್ಮಕವಾಗಿ ಬರೆಯುತ್ತಾನೆ ಎಂಬುದು ಮುಖ್ಯ ಸಂಗತಿಯೇ ಅಲ್ಲ. ಮನುಷ್ಯನಾಗಿ ಅವನು ಎಷ್ಟನ್ನು ಕಾಣುತ್ತಾನೆ, ಕಂಡ ಪದಾರ್ಥಗಳ ಸಂಗತಿಗಳ ಪರಸ್ಪರ ಸಂಬಂಧವನ್ನು ಎಷ್ಟರ ಮಟ್ಟಿಗೆ ತಿಳಿಯುತ್ತಾನೆ ಎಂಬುದು ನನಗೆ ಮುಖ್ಯ. ಇದಕ್ಕೂ ಕತೆಗಾರಿಕೆಗೂ ಸಂಬಂಧವಿಲ್ಲವೆನ್ನಬೇಡಿ. ಹಾಗೆ ಕಾಣುವವನು ನಮಗೂ ಕಾಣಿಸದೆ ಬಿಟ್ಟಾನೆ. ಆದರೆ ಅವನು ಕಾಣುವುದು, ಕಾಣಿಸುವುದು ಎಲ್ಲವೂ ಉಸಿರಾಟದಂತೆ, ಪ್ರೀತಿಯಂತೆ, ಚಿಟ್ಟೆಯ ಹಾರಾಟದಂತೆ, ಸಹಜವಾಗಿರುತ್ತದೆ, ಪ್ರಾಸಂಗಿಕವಾಗಿರುತ್ತದೆ. ತುಂಬಾ Elemental ಕೂಡಾ ಆಗಿರುತ್ತದೆ. "ಏನು ನೀನು ಹೇಳುವುದು, ಜಗತ್ತಿನಲ್ಲಿರುವವರೆಲ್ಲರೂ ಕತೆಗಾರರೋ, ಹಾಗಾದರೆ ನಮ್ಮ ಪ್ರತಿಭೆ, ಸೃಜನಶೀಲತೆ ಇವುಗಳಿಗೇನು ಬೆಲೆಯೇ ಇಲ್ಲವೆ" ಎಂದು ಕತೆಗಾರ ಮಿತ್ರರು ಮುನಿಯುವುದು ಬೇಡ. ಏಕೆಂದರೆ ಕೇವಲ ರಚಿಸುವ, ಶಿಲ್ಪಿಸುವ ಕತೆಗಳ ಬಗ್ಗೆ ನನಗೆ ಕೊಂಚವೂ ಆಸಕ್ತಿಯಿಲ್ಲ. ನನ್ನ ಆಸಕ್ತಿ ಏನಿದ್ದರೂ ನಮ್ಮಗಳ ಜೊತೆಯೇ ಬೆಳೆಯುವ, ಬದುಕುವ ಕತೆಗಳ ಬಗ್ಗೆಯೇ. ನಿಮಗಾಗಿ ನೀವು ಬರೆಯುವ ಕತೆಗಳನ್ನು ನಾನು ಓದದಿದ್ದರೂ ನಡೆದೀತು. ನನ್ನ ಜೊತೆಯೇ ಇರುವ, ನನ್ನೆದುರಿಗೆ ಇರುವ ಕತೆಗಳನ್ನ ಕಾಣದಿದ್ದರೆ ಹೇಗೆ.

ಎದುರಿಗಿದ್ದ ಚಿಟ್ಟೆ ಆಗಲೇ ಎಲ್ಲಿಗೋ ಹಾರಿ ಹೋಗಿದೆ. ಈಗ ನೀವೇ ಹೇಳಿ, ನೀವು ಬರೆದಿರುವ ಕತೆ ಓದುತ್ತಾ ಕೂರಲೋ ಅಥವಾ ಆ ಚಿಟ್ಟೆಗಳಿಗೆ ಪಾರ್ಥೇನಿಯಂ ಮೇಲೆ ಬಂದಿರುವ ಮುನಿಸನ್ನೂ, ಬೇಸರವನ್ನೂ ತಿಳಿಯಲು ಅವುಗಳನ್ನು ಹಿಂಬಾಲಿಸಲೋ.
(‘ಸಂಚಯ’ ಬೆಂಗಳೂರು, 1994.)

No comments: